ಕರ್ನಾಟಕದ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಸೇರಿ ಇಬ್ಬರಿಗೆ ಗ್ರೀನ್ ಆಸ್ಕರ್ ಪ್ರಶಸ್ತಿ
ಕರ್ನಾಟಕದ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಸೇರಿ ಇಬ್ಬರು ಭಾರತೀಯರು ಗ್ರೀನ್ ಆಸ್ಕರ್ ಎಂದೇ ಹೆಸರಾದ ವೈಟ್ಲೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದ ಹುಲಿ ಕಾರಿಡಾರ್ ರಕ್ಷಣೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸಂಜಯ್ ಗುಬ್ಬಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಲಂಡನ್ (ಮೇ.17): ಕರ್ನಾಟಕದ ವನ್ಯಜೀವಿ ತಜ್ಞ ಸಂಜಯ್ ಗುಬ್ಬಿ ಸೇರಿ ಇಬ್ಬರು ಭಾರತೀಯರು ಗ್ರೀನ್ ಆಸ್ಕರ್ ಎಂದೇ ಹೆಸರಾದ ವೈಟ್ಲೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕರ್ನಾಟಕದ ಹುಲಿ ಕಾರಿಡಾರ್ ರಕ್ಷಣೆಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಸಂಜಯ್ ಗುಬ್ಬಿ ಅವರಿಗೆ ಪ್ರಶಸ್ತಿ ನೀಡಲಾಗಿದೆ.
ಇನ್ನು ಹರ್ಗಿಲಾ ಸ್ಟೂರ್ಕ್ಸ್ ಪಕ್ಷಿ ಸಂತತಿಯ ಉಳಿವಿಗೆ ನೀಡಿದ ಕೊಡುಗೆಗಾಗಿ ಅಸ್ಸಾಂ ಮೂಲದ ಪೂರ್ಣಿಮಾ ಬರ್ಮನ್ ಅವರು ಪ್ರಶಸ್ತಿ ಪಡೆದುಕೊಂಡಿದ್ದಾರೆ. 166 ದೇಶಗಳ ಸಾಧಕರಲ್ಲಿ ೬ ಮಂದಿ ಗ್ರೀನ್ ಆಸ್ಕರ್ ಪ್ರಶಸ್ತಿ ಪಡೆದುಕೊಂಡಿದ್ದು, ಅವರಲ್ಲಿ ಇಬ್ಬರು ಭಾರತೀಯರಾಗಿದ್ದಾರೆ. ಪ್ರತಿಯೊಬ್ಬರ ವಿಜೇತರಿಗೆ ಒಂದು ವರ್ಷದಲ್ಲಿ ಅವರ ಯೋಜನೆಗಳಿಗೆ ೨೯ ಲಕ್ಷ ರು. ಒದಗಿಸಲಾಗುತ್ತದೆ.
ಸಂಜಯ್ ಗುಬ್ಬಿ ಅವರು ಇಲೆಕ್ಟ್ರಿಕಲ್ ಇಂಜಿನಿಯರಿಂಗ್ ಕೆಲಸಕ್ಕೆ ರಾಜೀನಾಮೆ ನೀಡಿ ನಿಸರ್ಗ ಮತ್ತು ವನ್ಯಜೀವಿ ಸಂರಕ್ಷಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. 2012 ರಲ್ಲಿ ಅವರು ಹುಲಿ ಸಂರಕ್ಷಣೆಗಾಗಿ ಕಾರ್ನಾಟಕ ಸರ್ಕಾರ ಜತೆ ನಿಕಟವಾಗಿ ಕಾರ್ಯನಿರ್ವಹಿಸಿದ್ದರು.
ತಮಗೆ ಪ್ರಶಸ್ತಿ ಸಂದಿರುವ ಕುರಿತು ಪ್ರತಿಕ್ರಿಯಿಸಿರುವ ಸಂಜಯ್ ಗುಬ್ಬಿ, ‘ಕರ್ನಾಟಕ ಭಾರತದಲ್ಲಿ ಅತಿಹೆಚ್ಚು ಬೆಂಗಾಲ್ ಟೈಗರ್ಗಳನ್ನು ಹೊಂದಿದ್ದು, ೨೦೧೫ರಲ್ಲಿ ೧೦ರಿಂದ ೧೫ ಹುಲಿಗಳನ್ನು ಗುರುತಿಸಲಾಗಿದೆ. ಮುಂದಿನ ಕೆಲವು ವರ್ಷಗಳಲ್ಲಿ 100 ಹುಲಿಗಳನ್ನು ಬೆಳೆಸುವುದು ನಮ್ಮ ಉದ್ದೇಶವಾಗಿದೆ. ಆದರೆ, ಇದು ಸಮುದಾಯದೊಂದಿಗೆ ಕಾರ್ಯನಿರ್ವಹಿಸಿದರೆ ಮಾತ್ರ ಸಾಧ್ಯ’ ಎಂದು ಹೇಳಿದ್ದಾರೆ. ಪ್ರಶಸ್ತಿಯ ಮೊತ್ತ ಎರಡು ಮಹತ್ವದ ಅಭಯಾರಣ್ಯಗಳಲ್ಲಿ ಅರಣ್ಯನಾಶವನ್ನು ತಡೆಯಲು ಮತ್ತು ಹುಲಿಗಳಿಗೆ ಕಾರಿಡಾರ್ಗಳನ್ನು ನಿರ್ಮಿಸಲು ನೆರವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಏನಿದು ಗ್ರೀನ್ ಆಸ್ಕರ್?:
ವನ್ಯಜೀವಿ ಸಂರಕ್ಷಣೆಗೆ ಕೊಡುಗೆ ನೀಡಿದ ಮುಖಂಡರಿಗೆ ಪ್ರತಿವರ್ಷ ವೈಟ್ಲೀ ಫಂಡ್ ಫಾರ್ ನೇಚರ್ನಿಂದ ಪ್ರಶಸ್ತಿಯನ್ನು ನೀಡಲಾಗುತ್ತದೆ. ಇದು ಗ್ರೀನ್ ಆಸ್ಕರ್ ಎಂದು ಹೆಸರಾಗಿದೆ. ಈ ಪ್ರಶಸ್ತಿಯ ವಿಜೇತರಿಗೆ ೨೯ ಲಕ್ಷ ರು. (೩೫೦೦೦ ಪೌಂಡ್) ಅನ್ನು ನೀಡಲಾಗುತ್ತದೆ.