‘ಸುನಂದಾ ಪ್ರಕರಣದಲ್ಲಿ ಸ್ವಾಮಿಗೇಕೆ ಆಸಕ್ತಿ?’
ಸುನಂದಾ ಪುಷ್ಕರ್ ನಿಗೂಢ ಸಾವು ಪ್ರಕರಣ
ವಿಚಾರಣೆಯಲ್ಲಿ ಸುಬ್ರಮಣಿಯನ್ ಸ್ವಾಮಿಗೇಕೆ ಆಸಕ್ತಿ?
ಶಶಿ ತರೂರ್ ಪರ ವಕೀಲರ ಪ್ರಶ್ನೆ
ಪ್ರಾಸಿಕ್ಯೂಶನ್ಗೆ ನೆರವಾಗಲು ಅವಕಾಶ ಕೋರಿ ಸ್ವಾಮಿ ಅರ್ಜಿ
ನವದೆಹಲಿ(ಜು.7): ಕಾಂಗ್ರೆಸ್ ಸಂಸದ ಶಶಿ ತರೂರ್ ಪತ್ನಿ ಸುನಂದಾ ಪುಷ್ಕರ್ ನಿಗೂಢ ಸಾವಿನ ಪ್ರಕರಣದ ವಿಚಾರಣೆಯಲ್ಲಿ ಬಿಜೆಪಿ ಸಂಸದ ಸುಬ್ರಮಣಿಯನ್ ಸ್ವಾಮಿ ಅವರಿಗೆ ಏಕೆ ಇಷ್ಟೊಂದು ಆಸಕ್ತಿ ಎಂದು ತರೂರ್ ಪರ ವಕೀಲರು ಪ್ರಶ್ನಿಸಿದ್ದಾರೆ.
ಪ್ರಕರಣ ಸಂಬಂಧ ತರೂರ್ ಅವರಿಗೆ ಜಾಮೀನು ಸಿಕ್ಕಿದೆ. ಪ್ರಾಸಿಕ್ಯೂಶನ್ಗೆ ನೆರವಾಗಲು ಅವಕಾಶ ಕೋರಿ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿರುವ ಅರ್ಜಿಯನ್ನು ವಿರೋಧಿಸಿರುವ ತರೂರ್ ಪರ ವಕೀಲ, ಈ ಪ್ರಕರಣದಲ್ಲಿ ಆಸಕ್ತಿ ತೋರುವ ಕಾನೂನು ಅರ್ಹತೆ ಸ್ವಾಮಿ ಅವರಿಗೆ ಏನಿದೆ? ಎಂದು ಪ್ರಶ್ನಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸುಬ್ರಮಣಿಯನ್ ಸ್ವಾಮಿ, ಸಿಆರ್ಪಿಸಿ ಸೆ.302ರ ಪ್ರಕಾರ ತಮಗಿರುವ ಕಾನೂನು ಅರ್ಹತೆಯ ಆಧಾರದಲ್ಲಿ ತಾವು ವಾದ ಮಂಡಿಸಿದ್ದಾಗಿ ತಿಳಿಸಿದ್ದಾರೆ. ಇಲ್ಲಿ ತಮ್ಮ ಪಾತ್ರದ ಸಿಂಧುತ್ವ ಅಪ್ರಸ್ತುತವಾಗಿದ್ದು, ಪ್ರಕರಣದ ವಿಚಾರಣೆ ನ್ಯಾಯೋಚಿತವಾಗಿ ನಡೆಯಬೇಕು ಎಂಬುದು ಮುಖ್ಯವಾಗಿದೆ ಎಂದು ಸ್ವಾಮಿ ಸ್ಪಷ್ಟಪಡಿಸಿದ್ದಾರೆ.