ಆನೆ, ಸೈಕಲ್ ಬಿಟ್ಟು 'ಕೈ' ಆಯ್ಕೆ ಮಾಡಿದ ಇಂದಿರಾ
ಸುಮಾರು 40 ವರ್ಷಗಳ ಹಿಂದೆ, ಮುಂದೊಂದು ದಿನ 'ಆನೆ', 'ಸೈಕಲ್' ಮತ್ತು 'ಕೈ' ಚಿಹ್ನೆಗಳು ಜೊತೆಯಾಗಿ ಚುನಾವಣೆ ಎದುರಿಸುವ ಸಂದರ್ಭ ಸೃಷ್ಟಿಯಾಗಬಹುದೆಂದು ಯಾರೊಬ್ಬರೂ ನಿರೀಕ್ಷಿಸಿರಲಿಕ್ಕಿಲ್ಲ. ಮುಂದಿನ ವರ್ಷದ ಲೋಕಸಭಾ ಚುನಾವಣೆಯ ವೇಳೆ ಅಂತದ್ದೊಂದು ಸಾಧ್ಯತೆ ನಿಚ್ಚಳವಾಗಿ ಇದೆಯಾದರೂ, ಅಂದು 'ಆನೆ', 'ಸೈಕಲ್' ಚಿಹ್ನೆಯನ್ನು ಬಿಟ್ಟು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಕಾಂಗ್ರೆಸ್ಗೆ 'ಕೈ' ಚಿಹ್ನೆ ಆಯ್ಕೆ ಮಾಡಿದ್ದ ಕತೆ ಈಗ ಬೆಳಕಿಗೆ ಬಂದಿದೆ.
ನವದೆಹಲಿ: ಸುಮಾರು 40 ವರ್ಷಗಳ ಹಿಂದೆ, ಮುಂದೊಂದು ದಿನ 'ಆನೆ', 'ಸೈಕಲ್' ಮತ್ತು 'ಕೈ' ಚಿಹ್ನೆಗಳು ಜೊತೆಯಾಗಿ ಚುನಾವಣೆ ಎದುರಿಸುವ ಸಂದರ್ಭ ಸೃಷ್ಟಿಯಾಗಬಹುದೆಂದು ಯಾರೊಬ್ಬರೂ ನಿರೀಕ್ಷಿಸಿರಲಿಕ್ಕಿಲ್ಲ. ಮುಂದಿನ ವರ್ಷದ ಲೋಕಸಭಾ ಚುನಾವಣೆಯ ವೇಳೆ ಅಂತದ್ದೊಂದು ಸಾಧ್ಯತೆ ನಿಚ್ಚಳವಾಗಿ ಇದೆಯಾದರೂ, ಅಂದು 'ಆನೆ', 'ಸೈಕಲ್' ಚಿಹ್ನೆಯನ್ನು ಬಿಟ್ಟು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಕಾಂಗ್ರೆಸ್ಗೆ 'ಕೈ' ಚಿಹ್ನೆ ಆಯ್ಕೆ ಮಾಡಿದ್ದ ಕತೆ ಈಗ ಬೆಳಕಿಗೆ ಬಂದಿದೆ.
ಮುಂದಿನ ಲೋಕಸಭಾ ಚುನಾವಣೆ ಹೊತ್ತಿಗೆ ಬಿಎಸ್ಪಿಯ 'ಆನೆ', ಎಸ್ಪಿಯ 'ಸೈಕಲ್' ಚಿಹ್ನೆ ಕಾಂಗ್ರೆಸ್ನ 'ಕೈ' ಜೊತೆಯಾಗಿ ಚುನಾವಣೆ ಎದುರಿಸುವ ನಿರೀಕ್ಷೆಯು ಹೆಚ್ಚುತ್ತಿರುವ ಹೊತ್ತಿನಲ್ಲಿ, ಕಾಂಗ್ರೆಸ್ಗೆ 'ಕೈ' ಚಿಹ್ನೆ ಆಯ್ಕೆಯಾದ ಸನ್ನಿವೇಶದ ಬಗ್ಗೆ ಪುಸ್ತಕವೊಂದು ಬಹಿರಂಗ ಪಡಿಸಿದೆ. ಪತ್ರಕರ್ತ ರಶೀದ್ ಕಿದ್ವಾಯಿಯವರ 'ಮತಪತ್ರ- ಭಾರತದ ಪ್ರಜಾಪ್ರಭುತ್ವವನ್ನು ರೂಪಿಸಿದ ಹತ್ತು ಕತೆಗಳು' ಎಂಬ ಪುಸ್ತಕದಲ್ಲಿ ಅಂದಿನ ಸನ್ನಿವೇಶವನ್ನು ಸ್ಮರಿಸಲಾಗಿದೆ.
1978ರಲ್ಲಿ ಕಾಂಗ್ರೆಸ್ ವಿಭಜನೆಯಾದಾಗ ಇಂದಿರಾ ಗಾಂಧಿಗೆ, 153 ಸಂಸದರಲ್ಲಿ 76 ಸಂಸದರ ಬೆಂಬಲ ಪಡೆಯಲು ಮಾತ್ರ ಸಾಧ್ಯವಾಗಿತ್ತು. ಇಂದಿರಾ ಗಾಂಧಿ ಕಾಂಗ್ರೆಸ್ (ಐ) ಸ್ಥಾಪಿಸಿ, ಅದರ ದನ ಮತ್ತು ಕರು ಚಿಹ್ನೆ ಬಿಟ್ಟು ಬೇರೆ ಚಿಹ್ನೆ ಆಯ್ಕೆ ಮಾಡುವುದು ಅನಿವಾರ್ಯವಾಗಿತ್ತು. ದನವನ್ನು ಇಂದಿರಾ ಗಾಂಧಿ ಮತ್ತು ಕರುವನ್ನು ಮಗ ಸಂಜಯ್ ಗಾಂಧಿಗೆ ಹೋಲಿಸಿ ಆಗ ದೇಶಾದ್ಯಂತ ಹಾಸ್ಯ ಮಾಡಲಾಗುತಿತ್ತು. ಜೋಡೆತ್ತುಗಳ ಚಿಹ್ನೆ ಇಂದಿರಾ ಕೇಳಿದ್ದರು, ಆದರೆ ಅದು ಆಯೋಗದಿಂದ ತಡೆಹಿಡಿಯಲ್ಪಟ್ಟಿತ್ತು.
ಹೀಗಾಗಿ ಆಗಿನ ಎಐಸಿಸಿ ಪ್ರಧಾನ ಕಾರ್ಯದರ್ಶಿ ಬೂಟಾ ಸಿಂಗ್ ಚಿಹ್ನೆ ಬದಲಾವಣೆಗೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದರು. ಆಯೋಗವು 'ಆನೆ'
'ಸೈಕಲ್' 'ಕೈ' ಮುಂತಾದ ಮೂರು ಚಿಹ್ನೆಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಲು ಸಿಂಗ್ಗೆ ಆಹ್ವಾನಿಸಿತ್ತು. ಯಾವ ಚಿಹ್ನೆ ಆಯ್ಕೆ ಮಾಡಬೇಕು ಎಂದು ಗೊಂದಲದಲ್ಲಿದ್ದ ಸಿಂಗ್ ಆಗ ವಿಜಯವಾಡದಲ್ಲಿ ಪಿ.ವಿ. ನರಸಿಂಹರಾವ್ ಜೊತೆಗಿದ್ದ ಇಂದಿರಾಗೆ ಕರೆ ಮಾಡಿ ಸಲಹೆ ಕೇಳಿದ್ದರು.
ಫೋನ್ ಲೈನ್ ಸ್ಪಷ್ಟವಾಗಿರಲಿಲ್ಲವೋ, ಸಿಂಗ್ರ ಉಚ್ಛಾರ ಸರಿಯಾಗಿ ಕೇಳಿಸಲಿಲ್ಲವೋ ಗೊತ್ತಿಲ್ಲ, ಅವರು ಹೇಳುತ್ತಿದ್ದುದು ಇಂದಿರಾಗೆ 'ಹಾಥಿ(ಆನೆ)'ಯೋ 'ಹಾಥ್(ಕೈ)'ಯೋ ಅರ್ಥವಾಗಿರಲಿಲ್ಲ. ಸಿಂಗ್ ಇನ್ನಷ್ಟು ವಿವರಣೆ ನೀಡಲು ಮುಂದಾದರೂ, ಫೋನ್ ಕರೆಯನ್ನು ಇಂದಿರಾ ಅಲ್ಲೇ ಇದ್ದ ರಾವ್ ಕೈಗೆ ನೀಡಿದರು. ಡಜನ್ನಷ್ಟು ಭಾಷೆಗಳ ತಜ್ಞರಾಗಿದ್ದ ರಾವ್ ಫೋನ್ ಕೈಗೆತ್ತಿಕೊಂಡು ಮಾತನಾಡಿದಾಗ, ಸಿಂಗ್ ಏನು ಹೇಳುತ್ತಿದ್ದಾರೆ ಎಂದು ಅವರಿಗೆ ಅರ್ಥವಾಗಿತ್ತು. ನಂತರ ಅವರು ಅದನ್ನು ಇಂದಿರಾಗೆ ತಿಳಿಸಿದಾಗ ಫೋನ್ ಸ್ವೀಕರಿಸಿದ ಅವರು, 'ಕೈ' ಚಿಹ್ನೆಯನ್ನು ಆಯ್ಕೆ ಮಾಡಿಕೊಳ್ಳಲು ಮನಸಾರೆ ಒಪ್ಪಿಗೆ ಸೂಚಿಸಿದರು ಎಂದು ಪುಸ್ತಕದಲ್ಲಿ ತಿಳಿಸಲಾಗಿದೆ.
ಆಗಿನ ಕಾಲದಲ್ಲಿ 'ಆನೆ'ಯನ್ನು ದೇಶದ ಕೆಲವು ಭಾಗಗಳಲ್ಲಿ ಪವಿತ್ರವೆಂದು ಭಾವಿಸುತ್ತಿರ ಲಿಲ್ಲವಾಗಿದ್ದುದರಿಂದ ಆ ಚಿಹ್ನೆಯನ್ನು ಆಯ್ಕೆ ಮಾಡದಿರಲು ಕಾರಣವಾ ಗಿರಬಹುದು. ಇನ್ನು ದೇಶದಲ್ಲಿ ಪಾದಾಚಾರಿಗಳ ಸಂಖ್ಯೆಯೇ ಅಧಿಕವಾಗಿದ್ದುದರಿಂದ, 'ಸೈಕಲ್' ಚಿಹ್ನೆ ಆಯ್ಕೆ ಮಾಡದಿರಲು ಇನ್ನೊಂದು ಕಾರಣವಾಗಿರಬಹುದು ಎಂದು ಕಿದ್ವಾಯಿ ಭಾವಿಸಿದ್ದಾರೆ. ಅದೇನೇ ಇರಲಿ, ಅಂದು ಇಂದಿರಾ ಗಾಂಧಿಯವರು ಕೈಬಿಟ್ಟಿರುವ 'ಆನೆ' (ಮಾಯಾವತಿಯವರ ಬಿಎಸ್ಪಿ ಚಿಹ್ನೆ) ಮತ್ತು 'ಸೈಕಲ್' (ಎಸ್ಪಿ ಚಿಹ್ನೆ) ಪರಸ್ಪರ ಗುದ್ದಾಡಿಕೊಂಡಾದರೂ, ಸದ್ಯದವರೆಗೂ ಸಕ್ರಿಯವಾಗಿವೆ ಎಂದು ಕಿದ್ವಾಯಿ ತಮ್ಮ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
--
ಯಡಿಯೂರಪ್ಪನಿಗೂ ವರುಣ ಕ್ಷೇತ್ರಕ್ಕೂ ಸಂಬಂಧವೇನು..?
ಮೈಸೂರು: 'ವರುಣಾದಲ್ಲಿ ವಿಜಯೇಂದ್ರ ಏಕೆ, ಅವರಪ್ಪ ಬಂದು ನಿಲ್ಲಲಿ. ಗೆಲ್ಲೋದು ನಾನೇ...' ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
'ಯಡಿಯೂರಪ್ಪನಿಗೂ ವರುಣ ಕ್ಷೇತ್ರಕ್ಕೂ ಸಂಬಂಧವೇನು..? ಅವರು ಬಂದು ನಿಂತ ತಕ್ಷಣ ಜನ ಓ ಅಂತ ಓಡಿ ಬರ್ತಾರಾ? ನನ್ನ ಮಗ ನಿಂತ್ರೂ ಸಿಎಂ ಮಗ ಅಂತ ವೋಟು ಹಾಕೋದಿಲ್ಲ. ಸಿಎಂ ಆಗಿ ನಾನು ಏನು ಕೆಲಸ ಮಾಡಿದ್ದೀನಿ ಅನ್ನೋದು ಗೊತ್ತಿದೆ. ವರುಣಾ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಿರುವುದು ನಾನು. ಆ ಕ್ಷೇತ್ರದಲ್ಲಿ ಕೆಲಸ ಮಾಡಿರೋದು ನಾನು,' ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
'ಯಾರೋ ಬಂದು ನಿಂತ ತಕ್ಷಣ ಅಲ್ಲಿನ ಜನ ಬದಲಾಗೋದಿಲ್ಲ. ಜನರಿಗೆ ಯಾರಿಗೆ ವೋಟು ಹಾಕಬೇಕು ಅಂತ ಗೊತ್ತಿದೆ . ಮಾಜಿ ಸಿಎಂ ಮಕ್ಕಳು ನಿಂತು ಗೆಲ್ಲೋದಾಗಿದ್ದರೆ, ಯಾರೋ ಎಲ್ಲೆಲ್ಲೋ ಚುನಾವಣೆಗೆ ನಿಲ್ಲುತ್ತಿದ್ದರು,' ಎಂದಿದ್ದಾರೆ ಸಿಎಂ.