ವಿರಾಜಪೇಟೆಯಲ್ಲಿ ಬೋಪಯ್ಯಗೆ ಬಿಜೆಪಿ ಕೊಕ್, ಪತ್ರಕರ್ತಗೆ ಟಿಕೆಟ್?
ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ಕೊಕ್ ಕೊಟ್ಟು ಪತ್ರಕರ್ತರೊಬ್ಬರಿಗೆ ಟಿಕೆಟ್ ನೀಡುವ ಸುದ್ದಿಗಳು ಕೊಡಗು ಜಿಲ್ಲಾದ್ಯಂತ ಗುಸುಗುಸು ಸುದ್ದಿಯ ರೂಪದಲ್ಲಿ ಹರಿದಾಡುತ್ತಿದೆ.
ಮಡಿಕೇರಿ : ಕೊಡಗು ಜಿಲ್ಲೆಯ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಲಿ ಬಿಜೆಪಿ ಶಾಸಕ, ಮಾಜಿ ಸ್ಪೀಕರ್ ಕೆ.ಜಿ.ಬೋಪಯ್ಯ ಅವರಿಗೆ ಕೊಕ್ ಕೊಟ್ಟು ಪತ್ರಕರ್ತರೊಬ್ಬರಿಗೆ ಟಿಕೆಟ್ ನೀಡುವ ಸುದ್ದಿಗಳು ಕೊಡಗು ಜಿಲ್ಲಾದ್ಯಂತ ಗುಸುಗುಸು ಸುದ್ದಿಯ ರೂಪದಲ್ಲಿ ಹರಿದಾಡುತ್ತಿದೆ.
ವಿರಾಜಪೇಟೆ ಕ್ಷೇತ್ರದಿಂದ ಅಂಕಣಕಾರ ಸಂತೋಷ್ ತಮ್ಮಯ್ಯ ಅವರ ಹೆಸರು ಕೇಳಿಬಂದಿರುವುದು ಬಹಳ ಕುತೂಹಲಕ್ಕೆ ಕಾರಣವಾಗಿದೆ. ಬೋಪಯ್ಯ ಅವರಿಗೆ ಈ ಬಾರಿ ವಿರಾಜಪೇಟೆ ಕ್ಷೇತ್ರದಿಂದ ಟಿಕೆಟ್ ನೀಡಬಾರದೆಂಬ ಒತ್ತಡ ಪಕ್ಷದೊಳಗಿನಿಂದಲೇ ಶುರುವಾಗಿದೆ, ಕೊಡವರಿಗೇ ಬಿಜೆಪಿ ಟಿಕೆಟ್ ನೀಡಬೇಕೆಂಬ ಒತ್ತಡವೂ ಜೋರಾಗಿದೆ. ಈ ಹಿನ್ನೆಲೆಯಲ್ಲಿ ಬೋಪಯ್ಯ ಅವರು ಕ್ಷೇತ್ರ ಬದಲಾವಣೆ ಮಾಡಬೇಕೆಂಬ ಕೂಗೂ ಕೇಳಿಬರುತ್ತಿದೆ.
ಈ ನಡುವೆ ‘ಒಬ್ಬ ಸಾಮಾನ್ಯ ಕಾರ್ಯಕರ್ತ ನಡೆದು ಬಂದ ಹಾದಿಯನ್ನು ಜನರ ಬಳಿ ಹಂಚಿಕೊಳ್ಳುವ ತವಕ. ಒಬ್ಬ ಸಾಮಾನ್ಯ ಕಾರ್ಯಕರ್ತ ಶ್ರಮದಿಂದ ಹೇಗೆ ಬೆಳೆಯಬಹುದು ಎಂಬುದಕ್ಕೆ ನಾನೇ ಉದಾಹರಣೆ. ನಾನು ನಡೆದು ಬಂದ ಮುಳ್ಳಿನ ಹಾದಿಯನ್ನು ಬಿಚ್ಚಿಡುತ್ತೇನೆ’ ಎಂದು ಶಾಸಕ ಕೆ.ಜಿ.ಬೋಪಯ್ಯ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ‘ಸರ್ಪ್ರೈಸ್’ ಎಂದು ಗುರುವಾರ ಪೋಸ್ಟ್ ಮಾಡಿದ್ದಾರೆ.
ತಾನು ಟಿಕೆಟ್ ಕೇಳಿಲ್ಲ. ಆದರೆ ಆಕಾಂಕ್ಷಿಯಾಗಿದ್ದೇನೆ. ಅವಕಾಶ ನೀಡಿದರೆ ಸ್ಪರ್ಧಿಸುತ್ತೇನೆ. ಯಾವುದೇ ಕಾರಣಕ್ಕೂ ಕ್ಷೇತ್ರ ಬದಲಾವಣೆಯ ಪ್ರಶ್ನೆಯೇ ಇಲ್ಲ. ಪಕ್ಷ ಬದಲಾವಣೆ ಮಾಡಲಿದ್ದೇನೆ ಎಂದು ಸುಳ್ಳು ಸುದ್ದಿ ಹರಿದಾಡುತ್ತಿದೆ ಎಂದು ಶಾಸಕ ಕೆ.ಜಿ. ಬೋಪಯ್ಯ ‘ಕನ್ನಡಪ್ರಭ’ಕ್ಕೆ ಸ್ಪಷ್ಟಪಡಿಸಿದ್ದಾರೆ.