ರಾಮನಗರ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿ ಯಾರು?
ಸಿಎಂ ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ಕ್ಷೇತ್ರದ ಉಪಷುನಾವಣೆಗೆ ರಾಜ್ಯ ಚುನಾವಣೆ ಆಯೋಗ ಸಿದ್ಧತೆಗಳನ್ನು ಕೈಗೊಂಡಿದೆ. ಮತ್ತೊಂದೆಡೆ ಯಾರನ್ನು ಕಣಕ್ಕಿಳಿಸಬೇಕು ಎನ್ನುವ ಚಿಂತನೆಯಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಇದೆ.
ಬೆಂಗಳೂರು. [ಅ.3]: ಸಿಎಂ ಕುಮಾರಸ್ವಾಮಿ ತಾವು ಸ್ಪರ್ಧಿಸಿದ್ದ ರಾಮನಗರ ಕ್ಷೇತ್ರವನ್ನು ಬಿಟ್ಟುಕೊಟ್ಟಿದ್ದು ಆ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಇದಕ್ಕಾಗಿ ರಾಜ್ಯ ಚುನಾವಣೆ ಆಯೋಗ ಸಿದ್ಧತೆಗಳನ್ನು ಕೈಗೊಂಡಿದೆ.
ಬಿಬಿಎಂಪಿ ಚುನಾವಣೆಯ ಯಶಸ್ಸಿನ ನಂತರ ಮೈತ್ರಿ ರಾಜಕಾರಣ ಮತ್ತಷ್ಟು ಗಟ್ಟಿಗೊಂಡಿದ್ದು, ರಾಮನಗರ ಹಾಗೂ ಜಮಖಂಡಿ ಉಪಚುನಾವಣೆಯಲ್ಲಿ ದೋಸ್ತಿಗಳು ಪರಸ್ಪರ ಕೈಜೋಡಿಸಲು ಮುಂದಾಗಿದ್ದಾರೆ.
ಮೈತ್ರಿಯಂತೆ ರಾಮನಗರ ಜೆಡಿಎಸ್ ಗೆ ಸಿಕ್ಕರೆ, ಜಮಖಂಡಿ ಕಾಂಗ್ರೆಸ್ ಪಾಲಾಗಿದೆ. ಈ ದೋಸ್ತಿಯನ್ನು ಮಕಾಡೆ ಮಲಗಿಸಲು ಬಿಜೆಪಿ ಭರ್ಜರಿ ತಯಾರಿ ನಡೆಸಿದೆ. ಜೆಡಿಎಸ್ ಭದ್ರಕೋಟೆಯಾಗಿರುವ ರಾಮನಗರಕ್ಕೆ ಬಿಜೆಪಿಯಿಂದ ಯಾರು ಸ್ಪರ್ಧಿಸಲಿದ್ದಾರೆ ಎನ್ನುವುದು ಭಾರೀ ಕುತೂಹಲ ಮೂಡಿಸಿದೆ.
ಶತಾಯಗತಾವಾಗಿ ರಾಮನಗರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳು ಬಿಜೆಪಿ ಹಲವು ಮಾಸ್ಟರ್ ಪ್ಲಾನ್ ಗಳನ್ನು ಮಾಡತೊಡಗಿದೆ. ಅದರಂತೆ ರಾಮನಗರ ಪ್ರಮುಖರ ಜೊತೆ ನಾಳೆ ಅಥವಾ ನಾಡಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್ ಯಡಿಯೂರಪ್ಪ ಸಮಾಲೋಚನೆ ನಡೆಸಲಿದ್ದಾರೆ. ಸಿಪಿ ಯೋಗಿಶ್ವರ್ ಅಥವಾ ರಾಮನಗರ ಬಿಜೆಪಿ ಜಿಲ್ಲಾಧ್ಯಕ್ಷ ರುದ್ರೇಶ್ ಅವರನ್ನು ಕಣಕ್ಕಿಳಿಸುವ ಬಗ್ಗೆ ಸಮಾಲೋಚನೆ ನಡೆಸಲಿದ್ದಾರೆ.
ಅದಕ್ಕೂ ಮೊದಲು ಇಂದು ರುದ್ರೇಶ್ ಮತ್ತು ಸಿಪಿ ಯೋಗಿಶ್ವರ್ ಚರ್ಚೆ ಬಿಎಸ್ ವೈ ಒಂದು ಸುತ್ತಿನ ಮಾತುಕತೆ ನಡೆಸಲಿದ್ದಾರೆ. ಒಂದೆಡೆ ರುದ್ರೇಶ್ ಬೆಂಗಳೂರು ಗ್ರಾಮಂತರ ಕ್ಷೇತ್ರದ ಲೋಕಸಭಾ ಟಿಕೆಟ್ ಆಕಾಂಕ್ಷಿ ಆಗಿದ್ದರೆ, ಮತ್ತೊಂದೆಡೆ ಸಿಪಿ ಯೋಗಿಶ್ವರ್ ಸ್ಪರ್ಧೆಗೆ ಅಷ್ಟು ಫಲವಿಲ್ಲ ಎನ್ನುವುದು ತಿಳಿದುಬಂದಿದೆ.
ಇದ್ರಿಂದ ಇವರಿಬ್ಬರ ಮಾಹಿತಿ ಪಡೆದುಕೊಂಡು ಬೇರೊಬ್ಬ ಸ್ಥಳೀಯ ನಾಯಕನಿಗೆ ಟಿಕೆಟ್ ನೀಡುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ. ಹಾಗಾದರೆ ಬಿಜೆಪಿ ಯಾರಿಗೆ ಟಿಕೆಟ್ ನೀಡತ್ತೆ ಎನ್ನುವುದನ್ನು ಕಾದುನೋಡಬೇಕಿದೆ.
"