ರಾಮಲಿಂಗಾ ರೆಡ್ಡಿಗೆ ಸಚಿವ ಸ್ಥಾನ ತಪ್ಪಲು ಕಾರಣ ಯಾರು..?
ಕರ್ನಾಟಕದಲ್ಲಿ ಸಚಿವ ಸಂಪುಟ ವಿಸ್ತರಣೆಯಾದ ಬೆನ್ನಲ್ಲೇ ಹಲವರಿಂದ ಅಸಮಾಧಾನ ವ್ಯಕ್ತವಾಗಿದೆ. ಇನ್ನು ರಾಮಲಿಂಗಾ ರೆಡ್ಡಿ ಅವರಿಗೂ ಕೂಡ ಸಚಿವ ಸ್ಥಾನ ತಪ್ಪಿದ್ದು, ಇದಕ್ಕೆ ತಾವು ಕಾರಣ ಅಲ್ಲ ಎಂದು ಉಪ ಮುಖ್ಯಮಂತ್ರಿ ಪರಮೇಶ್ವರ್ ಹೇಳಿದ್ದಾರೆ.
ತುಮಕೂರು: ರಾಮಲಿಂಗಾ ರೆಡ್ಡಿ ಅವರಿಗೆ ಮಂತ್ರಿ ಪದವಿ ತಪ್ಪಲು ನಾನು ಕಾರಣವಲ್ಲ. ಅದು ಪಕ್ಷದ ತೀರ್ಮಾನ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಸ್ಪಷ್ಟಪಡಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸಂಪುಟದ ವಿಸ್ತರಣೆ ವೇಳೆ ಅಸಮಾಧಾನ ಉಂಟಾಗುವುದು ಸಹಜ. ವರಿಷ್ಠರು ಯಾರನ್ನು ಮಂತ್ರಿ ಮಾಡಬೇಕು, ಯಾರಿಗೆ ಆದ್ಯತೆ ನೀಡಬೇಕು ಎಂದು ನಮ್ಮಲ್ಲಿ ಸಲಹೆ ಕೇಳುತ್ತಾರೆ ಅಷ್ಟೆ. ಇವರನ್ನೇ ಮಾಡಿ ಅಂತಾ ಹೇಳಿದರೆ ಹೈಕಮಾಂಡ್ ಕೇಳಲ್ಲ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ವೇಳೆ ನನ್ನ ಅಥವಾ ಸಿದ್ದರಾಮಯ್ಯ ಅವರ ಕೈ ಮೇಲಾಗಿದೆ ಎನ್ನುವುದು ಮಾಧ್ಯಮದವರ ಊಹೆ. ಯಾರ ಕೈ ಮೇಲೂ ಆಗಿಲ್ಲ, ಕೆಳಗೂ ಆಗಿಲ್ಲ. ಶಾಸಕರು ಹಾಗೂ ಸಚಿವರ ಪ್ರತಿಕ್ರಿಯೆ ಬಗ್ಗೆ ಬರುತ್ತಿರುವ ವಿಚಾರಗಳ ಬಗ್ಗೆ ವಾಸ್ತವ ತಿರುಚಲಾಗುತ್ತಿದೆ ಎಂದರು.
ರಮೇಶ್ ಜಾರಕಿಹೊಳಿ ರಾಜೀನಾಮೆ ವಿಚಾರ ಗೊತ್ತಿಲ್ಲ, ಅವರ ಮನವೊಲಿಸುವ ಯತ್ನ ಮಾಡುತ್ತೇನೆ. ಹಾಗೆಯೇ ಖರ್ಗೆ ಅವರ ಬಳಿಯೂ ಮಾತನಾಡುತ್ತೇನೆ. ಎಂ.ಬಿ.ಪಾಟೀಲ್ಗೆ ಗೃಹ ಖಾತೆ ನೀಡುವ ಕುರಿತು ಯಾವುದೇ ಚರ್ಚೆ ನಡೆದಿಲ್ಲ. ಅದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದರು.
ಒಂದು ವಾರದಲ್ಲಿ ಎಲ್ಲ ಗೊಂದಲವೂ ತಿಳಿಯಾಗಲಿದೆ. ಜೆಡಿಎಸ್ನಲ್ಲಿ ಖಾಲಿ ಇರುವ ಸಚಿವ ಸ್ಥಾನಗಳನ್ನು ಅವರು ತುಂಬುತ್ತಾರೆ. ಸದ್ಯಕ್ಕೆ ಯಾವುದೇ ತೊಂದರೆಯಿಲ್ಲ. ಸರ್ಕಾರ ಸುಭದ್ರವಾಗಿದೆ ಎಂದರು.