ವಿಧಾನಸೌಧ ಕಟ್ಟಡ ಕಟ್ಟಿಸಿದ್ದು ಯಾರು..?: ವಜ್ರ ಮಹೋತ್ಸವ ಆಹ್ವಾನ ಪತ್ರಿಕೆಯಲ್ಲಿ ಗೊಂದಲ
ರಾಜ್ಯದ ಶಕ್ತಿಕೇಂದ್ರ ಈ ವಿಧಾನಸೌಧ. ವಿಧಾನಸೌಧಕ್ಕೀಗ 60ರ ಹರೆಯ. ಆ ಮೂಲಕ ವಜ್ರ ಮಹೋತ್ಸವ ವನ್ನ ಆಚರಿಸಿಕೊಳ್ತಿದೆ. ಆದ್ರೂ ಕೆಲ ಗೊಂದಲಗಳು ಗೊಂದಲಗಳಾಗಿಯೇ ಉಳಿದಿವೆ.
ಬೆಂಗಳೂರು(ಅ.25): ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧ. ದೇಶದಲ್ಲೇ ಭವ್ಯ ಕಟ್ಟಡ, ಈ ಸುಂದರ ಕಟ್ಟಡಕ್ಕೀಗ 60ರ ಹರೆಯ. ವಜ್ರ ಮಹೋತ್ಸವದ ಈ ಸುಸಂದರ್ಭದಲ್ಲಿ ಸೌಧದ ಕಳೆ ರಂಗೇರಿದೆ. ಈ ಮಧ್ಯೆ ಗೊಂದಲಗಳು ಹುಟ್ಟಿಕೊಳ್ಳುತ್ತಿವೆ. ಮೊದಮೊದಲು ಖರ್ಚಿನ ಬಗ್ಗೆ ಮತ್ತು ಬಂಗಾರದ ಉಡುಗೊರೆ ಬಗ್ಗೆ ವಿವಾದ ಕೇಳಿ ಬಂದಿತ್ತು. ಅದೆಲ್ಲ ಸರಿ ಹೋಯ್ತು ಎನ್ನುವಾಗ ಈಗ ಆಹ್ವಾನ ಪತ್ರಿಕೆಯಲ್ಲೂ ಗೊಂದಲ ಎದ್ದು ಕಾಣ್ತಿದೆ.
ಭವ್ಯ ಸೌಧಕ್ಕೆ ಅಡಿಗಲ್ಲು ಹಾಕಿದ್ದು ಕೆ ಸಿ ರೆಡ್ಡಿ, ವಿಧಾನಸೌಧವನ್ನ ಪೂರ್ಣಗೊಳಿಸಿದ್ದು ಕೆಂಗಲ್ ಹನುಮಂತಯ್ಯ ಮತ್ತು ಕಡಿದಾಳ ಮಂಜಪ್ಪ ಅಂತಾ ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಲಾಗಿದೆ. ಮತ್ತೊಂದೆಡೆ, ಸೌಧವನ್ನ ಪೂರ್ಣಗೊಳಿಸಿದ್ದು ಕೆಂಗಲ್ ಹನುಮಂತಯ್ಯ ಅಂತಾ ಇದ್ದರೆ ಮತ್ತೊಂದೆಡೆ, ಕಡಿದಾಳ ಮಂಜಪ್ಪ ಸೌಧವನ್ನ ಉದ್ಘಾಟನೆ ಮಾಡಿದ್ದು ಅಂತಾ ಮುದ್ರಿಸುವ ಮೂಲಕ ಗೊಂದಲ ಹುಟ್ಟು ಹಾಕಲಾಗಿದೆ.
ವಿಧಾನಸೌಧದ ಕಲ್ಪನೆ ಹೀಗೆ ಇರಬೇಕೆಂದು ಹೇಳಿದ್ದು ಮೊದಲ ಸಿಎಂ ಕೆ ಸಿ ರೆಡ್ಡಿ. ಆದ್ರೆ ಖರ್ಚು ೩೮ ಲಕ್ಷಕ್ಕೂ ಹೆಚ್ಚಾಗುತ್ತೆ ಅನ್ನೋದನ್ನ ಅರಿತು ಯೋಜನೆ ಮುಂದಕ್ಕೆ ಹಾಕಿದ್ದರು. ಜೊತೆಗೆ ಕೇವಲ ಆಂಗ್ಲ ಶೈಲಿಯಲ್ಲಿರದೇ, ಇಂಡೋ, ಮೊಗಲ್, ದ್ರಾವಿಡಿಯನ್ ಮತ್ತು ಆಂಗ್ಲ ಶೈಲಿಯಲ್ಲೂ ಇರಲಿ ಅನ್ನೋ ಸಲಹೆಯನ್ನು ಕೆಂಗಲ್ ಹನುಮಂತಯ್ಯರಿಗೆ ನೀಡಿದ್ದರು. ಅಂತಿಮವಾಗಿ ಹನುಮಂತಯ್ಯ ಅವರು ಸೌಧವನ್ನ ನಿರ್ಮಿಸುವ ವೇಳೆ 1.86 ಕೋಟಿ ಖರ್ಚಾಗಿತ್ತು. ಅಲ್ಲಿಗೆ ಕಾರಣಾಂತರದಿಂದ ಕೆಂಗಲ್ ಹನುಮಂತಯ್ಯರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು. ಬಳಿಕ ಬಂದ ಕಡಿದಾಳು ಮಂಜಪ್ಪ ಭವ್ಯ ಸೌಧವನ್ನು ಉದ್ಘಾಟಿಸಿದರು. ಆದ್ರೆ, ಉದ್ಘಾಟಿಸಿದ ಬಗ್ಗೆ ಯಾವುದೇ ಮಾಹಿತಿ ಸರ್ಕಾರದ ಬಳಿ ಇಲ್ಲ. ಹೀಗೆಲ್ಲಾ ಇದ್ದರೂ ವಜ್ರ ಮಹೋತ್ಸವದ ಸಂದರ್ಭದಲ್ಲಿ ಸ್ಪಷ್ಟತೆ ನೀಡದೇ ವಿಧಾನಸೌಧ ಸಚಿವಾಲಯ ಗೊಂದಲವನ್ನು ಹುಟ್ಟುಹಾಕಿದೆ.