ಪಾಕ್ಗೆ ಕಾಶ್ಮೀರ ಏಕೆ ಬೇಕು?: ಪಾಕ್ ಕ್ರಿಕೆಟಿಗ ಶಾಹಿದ್ ಅಫ್ರಿದಿ!
ಇರುವ ಪ್ರಾಂತ್ಯಗಳನ್ನೇ ನಿರ್ವಹಿಸಲು ಆಗದ ಪಾಕಿಸ್ತಾನಕ್ಕೆ ಕಾಶ್ಮೀರ ಬೇಕಾಗಿಲ್ಲ. ಭಾರತಕ್ಕೂ ಕಾಶ್ಮೀರ ಕೊಡಬೇಡಿ ಎಂದು ಹೇಳುವ ಮೂಲಕ ಆ ದೇಶದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಎರಡೂ ದೇಶಗಳಲ್ಲೂ ವಿವಾದದ ಬಿರುಗಾಳಿ ಎಬ್ಬಿಸಿದ್ದಾರೆ.
ಲಂಡನ್[ನ.15]: ತನ್ನ ನಾಲ್ಕು ಪ್ರಾಂತ್ಯಗಳನ್ನೇ ನಿರ್ವಹಿಸಲು ಆಗದ ಪಾಕಿಸ್ತಾನಕ್ಕೆ ಕಾಶ್ಮೀರ ಬೇಕಾಗಿಲ್ಲ. ಭಾರತಕ್ಕೂ ಕಾಶ್ಮೀರ ಕೊಡಬೇಡಿ ಎಂದು ಹೇಳುವ ಮೂಲಕ ಆ ದೇಶದ ಮಾಜಿ ಕ್ರಿಕೆಟಿಗ ಶಾಹೀದ್ ಅಫ್ರಿದಿ ಎರಡೂ ದೇಶಗಳಲ್ಲೂ ವಿವಾದದ ಬಿರುಗಾಳಿ ಎಬ್ಬಿಸಿದ್ದಾರೆ.
ಕಾಶ್ಮೀರ ಬೇಡ ಎಂದು ಹೇಳಿರುವುದು ಪಾಕಿಸ್ತಾನಿಗಳ ಆಕ್ರೋಶಕ್ಕೆ ಕಾರಣವಾಗಿದ್ದರೆ, ತನ್ನ ನಾಲ್ಕು ಪ್ರಾಂತ್ಯಗಳನ್ನೇ ನಿರ್ವಹಿಸಲು ಆಗುತ್ತಿಲ್ಲ ಎಂಬ ಅಫ್ರಿದಿ ಮಾತಿನಿಂದ ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಮುಜುಗರ ಅನುಭವಿಸುವಂತಾಗಿದೆ. ಮತ್ತೊಂದೆಡೆ, ಭಾರತಕ್ಕೂ ಕಾಶ್ಮೀರ ಕೊಡಬೇಡಿ ಎಂಬ ಅಫ್ರಿದಿ ಹೇಳಿಕೆ ಭಾರತೀಯರಲ್ಲೂ ಸಿಟ್ಟು ತರಿಸಿದೆ.
ಬ್ರಿಟನ್ ಸಂಸತ್ತಿನಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕರೂ ಆಗಿರುವ 38 ವರ್ಷದ ಅಫ್ರಿದಿ, ‘ಪಾಕಿಸ್ತಾನಕ್ಕೆ ಕಾಶ್ಮೀರ ಬೇಕಾಗಿಲ್ಲ. ಅದನ್ನು ಭಾರತಕ್ಕೂ ಕೊಡಬೇಡಿ. ಕಾಶ್ಮೀರ ಸ್ವತಂತ್ರವಾಗಿರಲಿ. ಕಡೇ ಪಕ್ಷ ಮಾನವೀಯತೆಯಾದರೂ ಉಳಿಯಲಿ. ಜನರು ಸಾಯುವುದು ತಪ್ಪಲಿ. ಪಾಕಿಸ್ತಾನಕ್ಕೆ ಕಾಶ್ಮೀರದ ಅಗತ್ಯವಿಲ್ಲ. ಏಕೆಂದರೆ ತನ್ನ ನಾಲ್ಕು ಪ್ರಾಂತ್ಯಗಳನ್ನೇ ಅದು ಸರಿಯಾಗಿ ನಿರ್ವಹಿಸುತ್ತಿಲ್ಲ. ಅತಿದೊಡ್ಡದು ಏನೆಂದರೆ ಮಾನವೀಯತೆ. ಜನರು ಕಾಶ್ಮೀರದಲ್ಲಿ ಸಾಯುತ್ತಿದ್ದಾರೆ. ಅದು ನೋವಿನ ವಿಚಾರ. ಯಾವುದೇ ಸಮುದಾಯದವರ ಸಾವು ನೋವಿನ ವಿಷಯ’ ಎಂದು ಹೇಳಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಶ್ಮೀರ ಕುರಿತು ಅಫ್ರಿದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲ. ಕಾಶ್ಮೀರದಲ್ಲಿನ ಸ್ಥಿತಿ ಚಿಂತೆಗೆ ಕಾರಣವಾಗಿವೆ. ವಿಶ್ವಸಂಸ್ಥೆ ಮಧ್ಯಪ್ರವೇಶಿಸಬೇಕು ಎಂದು ಕಳೆದ ಏಪ್ರಿಲ್ನಲ್ಲಿ ಟ್ವೀಟ್ ಮಾಡಿದ್ದರು. ಪಾಕಿಸ್ತಾನ ಕ್ರಿಕೆಟಿಗರನ್ನು ಸಾಕಷ್ಟುಕಾಶ್ಮೀರ ಅಭಿಮಾನಿಗಳು ಬೆಂಬಲಿಸಿದ್ದಾರೆ ಎಂದು 2016ರಲ್ಲಿ ಹೇಳಿದ್ದರು.