’ಕಾವೇರಿ ವಿವಾದವನ್ನು ಹೇಗೆ ಪರಿಹರಿಸುತ್ತೀರಿ? ನಿಮ್ಮಿಂದ ಕಾವೇರಿ ನೀರು ತರಲಾದೀತೇ?' ಎಂದು ಜನರು ಕೇಳುವುದಕ್ಕೆ ಕಮಲ್ ಉತ್ತರವೇನು ಗೊತ್ತಾ? 

ಮದುರೈ: ತಾವು ಎಡಪಂಥೀಯನೂ ಅಲ್ಲ, ಬಲಪಂಥೀಯನೂ ಅಲ್ಲ, ಮಧ್ಯಮ ಮಾರ್ಗದಲ್ಲಿ ನಡೆಯುವವನು ಎಂಬರ್ಥದಲ್ಲಿ ಕಮಲ್‌ ಹಾಸನ್‌ ತಮ್ಮ ರಾಜಕೀಯ ಸಿದ್ಧಾಂತದ ಮೂಲಾರ್ಥವನ್ನು ಪ್ರಕಟಿಸಿದ್ದಾರೆ. ‘ಜನರು ನನ್ನನ್ನು ಎಡವೋ, ಬಲವೋ ಎಂದು ಪ್ರಶ್ನಿಸುತ್ತಾರೆ. ಆದರೆ ನನ್ನದು ‘ಕೇಂದ್ರವಾದ’, ಅದಕ್ಕಾಗಿಯೇ ನನ್ನ ಪಕ್ಷದ ಹೆಸರು ಕೇಂದ್ರ ಎಂದಿಟ್ಟಿದ್ದೇನೆ’ ಎಂದು ಕಮಲ್‌ ಹೇಳಿದರು. ಕಮಲ್‌ ಭಾಷಣದ ಪ್ರಮುಖ ಅಂಶಗಳು..

Add Asianetnews Kannada as a Preferred SourcegooglePreferred

- ನನ್ನ ಆದರ್ಶ ಪುರುಷರು ಯಾರೆಂದು ಕೇಳಬೇಡಿ, ನಾನು ಪ್ರತಿಯೊಬ್ಬರನ್ನೂ ಇಷ್ಟಪಡುತ್ತೇನೆ. ಒಬಾಮಾ, ಚಂದ್ರಬಾಬು ನಾಯ್ಡುರನ್ನೂ ಇಷ್ಟಪಡುತ್ತೇನೆ. ಅಂಬೇಡ್ಕರ್‌, ಪೆರಿಯಾರ್‌ರನ್ನೂ ಇಷ್ಟಪಡುತ್ತೇನೆ.

- ಈವರೆಗೆ ನೀವೆಲ್ಲಾ ನನ್ನನ್ನು ತಾರೆಯಾಗಿ ನೋಡಿದ್ದೀರಿ. ಇನ್ನು ಮುಂದೆ ನನ್ನನ್ನು ಒಂದು ದೀಪವಾಗಿ ನೋಡಿ ಎಂದು ವಿನಂತಿಸುತ್ತೇನೆ. ಈ ದೀಪವನ್ನು ನಿಮ್ಮ ಮನೆಗಳಲ್ಲಿ ಬೆಳಗಿ.

- ಸರ್ಕಾರ ನಡೆಸಬೇಕಾದ ಶಾಲಾ ವ್ಯವಸ್ಥೆ ಖಾಸಗಿಗೆ ಕೊಟ್ಟಿದ್ದೇವೆ. ಆದರೆ, ಮದ್ಯದ ಅಂಗಡಿಗಳನ್ನು ಸರ್ಕಾರ ನಡೆಸುತ್ತಿದೆ?. ಎಲ್ಲಿಗೆ ತಪುಪುತ್ತಿದ್ದೇವೆ ನಾವು?

- ಸಮಾಜದ ಎಲ್ಲ ವರ್ಗಗಳ ಮಕ್ಕಳಿಗೂ ಉತ್ತಮ ಮತ್ತು ಗುಣಮಟ್ಟದ ಶಿಕ್ಷಣ ದೊರೆಯಬೇಕು. ಜಾತಿಯ ಹೆಸರಲ್ಲಿ ಆಡುತ್ತಿರುವ ಆಟಗಳನ್ನು ನಿಲ್ಲಿಸಬೇಕು.

- ನಮ್ಮ ಸುತ್ತಮುತ್ತ ನಡೆಯುತ್ತಿರುವ ಅನ್ಯಾಯಗಳಿಗೆ ನಾವು ಎಷ್ಟುಕಾಲ ಕಾದು ನೋಡುವುದು? ಒಳ್ಳೆಯ ಜಾಗದ ಕನಸಿಗೆ ಎಷ್ಟುದಿನ ಮೂಗರಾಗಿ, ಕಿವುಡರಾಗಿ ಕಾಯುವುದು?

- ನಾವು ಗ್ರಾಮಗಳನ್ನು ದತ್ತು ತೆಗೆದುಕೊಳ್ಳುತ್ತೇವೆ. ಅವುಗಳನ್ನು ಪರಿವರ್ತನೆ ಮಾಡುತ್ತೇವೆ. ನಿಮಗೆ ಸಮಾಧಾನ ಆಗುವವರೆಗೂ ಪರಿವರ್ತನೆ ಮಾಡುತ್ತೇವೆ.

- ನಾನು ‘ತಲೈವಾರ್‌’ ಅಲ್ಲ, ನಾನೂ ನಿಮ್ಮಲ್ಲಿ ಒಬ್ಬ. ಇಂದು ನಾನು ಸರಿಯಾದ ಮಾರ್ಗದಲ್ಲಿದ್ದೇನೆ ಎಂಬ ವಿಶ್ವಾಸ ನನಗಿದೆ. ನಿಮ್ಮ ಸೇವೆ ಮಾಡಲು ಉತ್ತಮ ಸಲಹೆಗಳನ್ನು ನೀಡಿ.

ಕಾವೇರಿ ವಿವಾದ: ಕಮಲ್ ನಿಲವೇನು?

’ಕಾವೇರಿ ವಿವಾದವನ್ನು ಹೇಗೆ ಪರಿಹರಿಸುತ್ತೀರಿ? ನಿಮ್ಮಿಂದ ಕಾವೇರಿ ನೀರು ತರಲಾದೀತೇ? ಎಂದು ಜನರು ಕೇಳುತ್ತಾರೆ. ಸರಿಯಾದ ಮಾತುಕತೆ ನಡೆದಿದ್ದರೆ, ನಾವು ಬಯಸಿದ್ದು ನಮಗೆ ಸಿಗುತ್ತಿತ್ತು. ನಿಮಗೆ ನೀರು ಬೇಕಾಗಿದೇಯೇ? ನಾನು ನಿಮಗೆ ರಕ್ತ ನೀಡಬಲ್ಲೆ. ಅಂದರೆ, ಬೆಂಗಳೂರು ಜನರು ರಕ್ತದಾನ ಮಾಡುವಂತೆ ಮಾಡಬಲ್ಲೆ. ಆಸ್ತಿಗಳನ್ನು ಸುಟ್ಟು ಹಾಕಬೇಡಿ, ಪರಸ್ಪರ ಕೊಲ್ಲಬೇಡಿ. ನಮಗೆ ಯಾವುದೇ ಹಿಂಸೆ ಬೇಕಾಗಿಲ್ಲ’ ಎಂದು ಕಮಲ್‌ ಕಾವೇರಿ ವಿವಾದ ಉಲ್ಲೇಖಿಸಿ ಮಾತನಾಡಿದರು.