ಬೆಂ. ಗ್ರಾಮಾಂತರದಲ್ಲಿ ಬಿಜೆಪಿ ಸೋಲಲು ಕಾರಣವೇನು..?
ಬೆಂಗಳೂರು ಗ್ರಾಮಂತರ ಕ್ಷೇತ್ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕೈ ತಪ್ಪಿದ್ದು ಇದಕ್ಕೆ ಕಾರಣವೇನು ಎಂದು ಹೇಳಿದ್ದಾರೆ.
ರಾಮನಗರ : ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಅಭ್ಯರ್ಥಿಯ ಆಯ್ಕೆ ಹಾಗೂ ವ್ಯವಸ್ಥಿತವಾಗಿ ಚುನಾವಣಾ ಪ್ರಚಾರ ನಡೆಸುವಲ್ಲಿ ವಿಫಲವಾಗಿದ್ದೆ ಚುನಾವಣೆಯಲ್ಲಿ ಸೋಲು ಅನುಭವಿಸಲು ಕಾರಣ ಎಂದು ಪರಾಜಿತ ಬಿಜೆಪಿ ಅಭ್ಯರ್ಥಿ ಅಶ್ವಥ್ ನಾರಾಯಣಗೌಡ ತಿಳಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರು ನಾಲ್ಕು ತಿಂಗಳ ಮುಂಚೆಯೇ ಬಿಜೆಪಿ ಅಭ್ಯರ್ಥಿ ಘೋಷಣೆಯಾಗಿದ್ದರೆ ಬೆಂಗಳೂರು ಗ್ರಾಮಾಂತರ ಕ್ಷೇತ್ರ ಸೇರಿದಂತೆ ಕರ್ನಾಟಕ ಕಾಂಗ್ರೆಸ್ ಮುಕ್ತ ಆಗುತ್ತಿತ್ತು. ಇದು ಪಕ್ಷದ ವರಿಷ್ಠರ ಅರಿವಿಗೂ ಬಂದಿದೆ. ಮಾಜಿ ಸಚಿವ ಯೋಗೇಶ್ವರ್ ಅಭ್ಯರ್ಥಿಯಾಗಿದ್ದರೆ ಸುಲಭವಾಗಿ ಸಂಸದರಾಗುವ ಅವಕಾಶ ಸಿಗುತ್ತಿತ್ತು. ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕಸ್ಮಿಕವಾಗಿ ನಾನು ಅಭ್ಯರ್ಥಿಯಾದೆ. ಚುನಾವಣೆಯಲ್ಲಿ ಯಾರೇ ಹೊಂದಾಣಿಕೆ, ಒಳಒಪ್ಪಂದ ಮಾಡಿಕೊಂಡರೂ ಮತದಾರ ಮತ್ತು ಪಕ್ಷದ ಕಾರ್ಯಕರ್ತರು ಅದನ್ನು ಒಪ್ಪುವುದಿಲ್ಲ ಎಂದು ಹೇಳಿದರು.
ನಾನು ಬೆಂಗಳೂರು ಉತ್ತರ ಕ್ಷೇತ್ರ ಚುನಾವಣೆಯ ಜವಾಬ್ದಾರಿ ಹೊತ್ತುಕೊಂಡಿದ್ದೆ. ನಾಮಪತ್ರ ಸಲ್ಲಿಕೆಗೆ ಒಂದು ದಿನ ಇರುವಂತೆ ನನ್ನನ್ನು ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿದರು. ತರಾತುರಿಯಲ್ಲಿಯೇ ನಾನು ನಾಮಪತ್ರ ಸಲ್ಲಿಸಿದೆ. ಚುನಾವಣೆಗೆ ಬಾಕಿ ಉಳಿದಿದ್ದ ಕೇವಲ 22 ದಿನಗಳಲ್ಲಿ ಮತದಾರರನ್ನು ಭೇಟಿಯಾಗಲು ಹಾಗೂ ಕಾರ್ಯಕರ್ತರ ಸಭೆಗಳನ್ನು ನಡೆಸಲು ಸಾಧ್ಯವಾಗಲಿಲ್ಲ ಎಂದರು.