ಜೂಹಿ ಚೌಧರಿ ಅವರನ್ನು ವಿಚಾರಣೆಗೊಳಪಡಿಸಿದ ಬಳಿಕ ರೂಪಾ ಗಂಗೂಲಿ ಮತ್ತು ಕೈಲಾಶ್ ವಿಜಯವರ್ಗೀಯ ಅವರ ಬಗ್ಗೆ ನಿರ್ಧಾರ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

ಕೋಲ್ಕತಾ(ಮಾ. 01): ಮೂರು ತಿಂಗಳ ಹಿಂದೆ ಬೆಳಕಿಗೆ ಬಂದಿದ್ದ ಮಕ್ಕಳ ಕಳ್ಳಸಾಗಾಣಿಕೆ (ಚೈಲ್ಡ್ ಟ್ರಾಫಿಕಿಂಗ್) ಪ್ರಕರಣ ಸಂಬಂಧ ಪಶ್ಚಿಮ ಬಂಗಾಳದ ಪೊಲೀಸರು ಮತ್ತೊಬ್ಬರನ್ನು ಬಂಧಿಸಿದ್ದಾರೆ. ನಿನ್ನೆ ಮಂಗಳವಾರ ರಾತ್ರಿ ದಾರ್ಜೀಲಿಂಗ್ ಬಳಿ ಪಶ್ಚಿಮ ಬಂಗಾಳದ ಮಹಿಳಾ ಘಟಕದ ನಾಯಕಿ ಜೂಹಿ ಚೌಧುರಿ ಅವರನ್ನು ಬಂಧಿಸಿದ್ದಾರೆ. ಇನ್ನೂ ಪ್ರಮುಖ ವಿಚಾರವೆಂದರೆ, ಪ್ರಕರಣದಲ್ಲಿ ಬಿಜೆಪಿಯ ಪ್ರಮುಖ ಮುಖಂಡರಾದ ರೂಪಾ ಗಂಗೂಲಿ ಮತ್ತು ವಿಜಯವರ್ಗೀವಾ ಅವರ ಹೆಸರು ಕೇಳಿಬರುತ್ತಿರುವುದು. ಮಾಜಿ ನಟಿಯಾದ ರೂಪಾ ಗಂಗೂಲಿ ಅವರು ಬಿಜೆಪಿಯ ರಾಜ್ಯಸಭಾ ಸಂಸದೆ ಹಾಗೂ ಪ.ಬಂಗಾಳ ಬಿಜೆಪಿಯ ಮಹಿಳಾ ಘಟಕ ಅಧ್ಯಕ್ಷೆಯಾಗಿದ್ದಾರೆ. ಇನ್ನು, ವಿಜಯವರ್ಗೀವಾ ಅವರು ಬಿಜೆಪಿಯ ಪ.ಬಂಗಾಳ ಉಸ್ತುವಾರಿಯಾಗಿದ್ದಾರೆ.

Add Asianetnews Kannada as a Preferred SourcegooglePreferred

ಕಳೆದ ವರ್ಷದ ನವೆಂಬರ್'ನಲ್ಲಿ ಪಶ್ಚಿಮ ಬಂಗಾಳದಲ್ಲಿ ಮಕ್ಕಳ ಕಳ್ಳಸಾಗಾಣಿಕೆಯ ದೊಡ್ಡ ಜಾಲವನ್ನು ಭೇದಿಸಲಾಗಿತ್ತು. ಎನ್'ಜಿಓವೊಂದರ ಮುಖ್ಯಸ್ಥೆ ಚಂದನಾ ಚಕ್ರಬರ್ತಿ ಸಿಕ್ಕಿಬಿದ್ದಿದ್ದರು. ಪೊಲೀಸರು ಇವರನ್ನು ವಿಚಾರಣೆಗೊಳಪಡಿಸಿದಾಗ ಬಿಜೆಪಿ ಮುಖಂಡರ ನೆರವು ಪಡೆಯುತ್ತಿದ್ದುದ್ದರ ಮಾಹಿತಿ ಲಭಿಸಿದೆ. ಎನ್'ಜಿಓಗೆ ಸರಕಾರದಿಂದ ದೇಣಿಗೆ ಮತ್ತು ಲೈಸೆನ್ಸ್ ಕೊಡಿಸಲು ಬಿಜೆಪಿ ನಾಯಕಿ ಜೂಹಿ ಚೌಧರಿ ತನಗೆ ಸಹಾಯ ಮಾಡಿದರೆಂದು ಚಂದನಾ ಚಕ್ರವರ್ತಿ ಅವರು ಪೊಲೀಸರಿಗೆ ತಿಳಿಸಿದಳೆನ್ನಲಾಗಿದೆ. ಅಷ್ಟೇ ಅಲ್ಲ, ಜೂಹಿ ಚೌಧರಿ ಅವರು ರೂಪಾ ಗಂಗೂಲಿ ಮತ್ತು ವಿಜಯ್ ವರ್ಗೀವಾ ಅವರಿಗೆ ಫೋನ್ ಮಾಡಿ ಇನ್'ಫ್ಲುಯೆನ್ಸ್ ಮಾಡಿಸಿದರು ಎಂದೂ ಚಂದನಾ ಚಕ್ರವರ್ತಿ ಹೇಳಿದ್ದಾಳೆನ್ನಲಾಗಿದೆ.

ಆದರೆ, ಜೂಹಿ ಚೌಧರಿ ಅವರನ್ನು ವಿಚಾರಣೆಗೊಳಪಡಿಸಿದ ಬಳಿಕ ರೂಪಾ ಗಂಗೂಲಿ ಮತ್ತು ಕೈಲಾಶ್ ವಿಜಯವರ್ಗೀಯ ಅವರ ಬಗ್ಗೆ ನಿರ್ಧಾರ ಕೈಗೊಳ್ಳಲು ಪೊಲೀಸರು ನಿರ್ಧರಿಸಿದ್ದಾರೆ.

ಇದೇ ವೇಳೆ, ಮಕ್ಕಳ ಕಳ್ಳಸಾಗಣೆ ಪ್ರಕರಣದಲ್ಲಿ ತನ್ನ ಹೆಸರು ಕೇಳಿಬರುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿರುವ ಕೈಲಾಷ್ ವಿಜಯವರ್ಗಿಯ ಅವರು ಸಿಐಡಿ ತನಿಖೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಸಿಐಡಿ ಅಧಿಕಾರಿಗಳು ಸಾಕ್ಷ್ಯಾಧಾರಗಳ ಮೇಲೆ ನಿಷ್ಪಕ್ಷಪಾತವಾಗಿ ತನಿಖೆ ನಡೆಸುತ್ತಿಲ್ಲ ಎಂದು ವಿಜಯವರ್ಗಿಯಾ ದೂರಿದ್ದಾರೆ. ಇನ್ನು, ನಿನ್ನೆ ಬಂಧಿತರಾಗಿರುವ ಜೂಹಿ ಚೌಧುರಿ ಅವರನ್ನು ಬಿಜೆಪಿ ತನ್ನ ಪಕ್ಷದಿಂದ ಕಿತ್ತುಹಾಕಿದೆ. ಈ ಪ್ರಕರಣದಲ್ಲಿ ರೂಪಾ ಗಂಗೂಲಿ ಮತ್ತು ಕೈಲಾಷ್ ವಿಜಯವರ್ಗಿಯ ಅವರು ಭಾಗಿಯಾಗಿರುವುದು ದೃಢಪಟ್ಟರೆ ಇನ್ನೆರಡು ಬಿಜೆಪಿ ತಲೆದಂಡವಾಗುವ ನಿರೀಕ್ಷೆ ಇದೆ.