ಅತಂತ್ರ ಸರ್ಕಾರಕ್ಕೆ ಅಂತ್ಯ ಹಾಡಿದ್ದೇವೆ: ಶೆಟ್ಟರ್
5 ಶಾಸಕರು ರಾಜೀನಾಮೆ ಕೊಟ್ಟ ಕೂಡಲೇ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಿತ್ತು| ಅತಂತ್ರ ಸರ್ಕಾರಕ್ಕೆ ಅಂತ್ಯ ಹಾಡಿದ್ದೇವೆ: ಶೆಟ್ಟರ್
ಬೆಂಗಳೂರು[ಜು.24]: ರಾಜ್ಯದಲ್ಲಿ ಕಳೆದ ಒಂದು ವರ್ಷದಿಂದ ಇದ್ದ ಅತಂತ್ರ ಸರ್ಕಾರಕ್ಕೆ ಅಂತ್ಯ ಹಾಡುವ ಕೆಲಸ ಆಗಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯಿಸಿದ್ದಾರೆ.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈತ್ರಿ ಸರ್ಕಾರದ 15 ಶಾಸಕರು ರಾಜೀನಾಮೆ ಕೊಟ್ಟಕೂಡಲೇ ಎಚ್.ಡಿ.ಕುಮಾರಸ್ವಾಮಿ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕಿತ್ತು. ಆದರೆ ರಾಜೀನಾಮೆ ಕೊಡದೆ ಹುದ್ದೆಯಲ್ಲಿ ಮುಂದುವರೆದ ಕುಮಾರಸ್ವಾಮಿ ಅವರಿಗೆ ಕೊನೆಗೂ ರಾಜೀನಾಮೆ ನೀಡುವ ಅನಿವಾರ್ಯ ಸ್ಥಿತಿ ಎದುರಾಯಿತು ಎಂದು ಹೇಳಿದರು.
ಕರ್ನಾಟಕ ರಾಜಕೀಯದಲ್ಲಿ ಹೈಡ್ರಾಮಾ: ಕಳೆದ ಮೂರು ವಾರಗಳಿಂದ ಏನೇನಾಯ್ತು?
2018ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಸರ್ಕಾರ ರಚನೆ ಮಾಡುವ ಹಕ್ಕು ಇದ್ದರೂ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ಧಕ್ಕೆ ಬರುವ ರೀತಿ ನಡೆದುಕೊಂಡರು. ಚುನಾವಣೆಯಲ್ಲಿ ಕಾಂಗ್ರೆಸ್ 78 ಹಾಗೂ ಜೆಡಿಎಸ್ 37 ಸ್ಥಾನಗಳಲ್ಲಿ ಗೆದ್ದಿತ್ತು. ಈ ಎರಡೂ ಪಕ್ಷಗಳು ಒಟ್ಟಾಗಿ ಜನರಿಂದ ತಿರಸ್ಕೃತಗೊಂಡಿದ್ದರೂ ಸರ್ಕಾರ ರಚನೆ ಮಾಡಿದ್ದವು. ಇದೀಗ ವಿಶ್ವಾಸ ಮತಯಾಚನೆಗೆ ಸೋಲಾಗಿರುವುದು ಬಿಜೆಪಿಗೆ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಸಿಕ್ಕ ದೊಡ್ಡ ಗೆಲುವು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸಕಾರ ಆಡಳಿತದಲ್ಲಿದ್ದು, ರಾಜ್ಯದಲ್ಲಿಯೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿರಬೇಕು ಎಂದು ಜನ ಇಚ್ಛೆ ಹೊಂದಿದ್ದರು. ಅದಕ್ಕೆ ಪೂರಕವಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂದು ತಿಳಿಸಿದರು.