ರಾಜ್ಯಸಭೆ ಟಿಕೆಟ್ ಕೈತಪ್ಪಿದ್ದಕ್ಕೆ ಯಾವುದೇ ಬೇಸರ ಇಲ್ಲ. ರಾಜೀವ್ ಚಂದ್ರಶೇಖರ್ ಅತ್ಯಂತ ಸೂಕ್ತ ಅಭ್ಯರ್ಥಿ ಎಂದು ಮಾಜಿ ಸಂಸದ, ವಿಆರ್​ಎಲ್ ಗ್ರೂಪ್​ ಚೇರ್ಮನ್ ವಿಜಯ ಸಂಕೇಶ್ವರ್ ಹೇಳಿದ್ದಾರೆ. 

ಬೆಂಗಳೂರು (ಮಾ.13): ರಾಜ್ಯಸಭೆ ಟಿಕೆಟ್ ಕೈತಪ್ಪಿದ್ದಕ್ಕೆ ಯಾವುದೇ ಬೇಸರ ಇಲ್ಲ. ರಾಜೀವ್ ಚಂದ್ರಶೇಖರ್ ಅತ್ಯಂತ ಸೂಕ್ತ ಅಭ್ಯರ್ಥಿ ಎಂದು ಮಾಜಿ ಸಂಸದ, ವಿಆರ್​ಎಲ್ ಗ್ರೂಪ್​ ಚೇರ್ಮನ್ ವಿಜಯ ಸಂಕೇಶ್ವರ್ ಹೇಳಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಏನೇನೋ ಸುದ್ದಿ ಹರಿದಾಡುತ್ತಿದೆ. ಈ ಎಲ್ಲ ಗೊಂದಲಗಳಿಗೆ ತೆರೆ ಎಳೆಯಲು ಸುದ್ದಿಗೋಷ್ಠಿ ಕರೆದಿದ್ದೇನೆ. ರಾಜೀವ್ ಚಂದ್ರಶೇಖರ್ ನನ್ನ ಆತ್ಮೀಯ ಸ್ನೇಹಿತ. ಕರ್ನಾಟಕಕ್ಕೆ ರಾಜೀವ್ ಚಂದ್ರಶೇಖರ್ ಕೊಡುಗೆ ಅಪಾರ. ಎರಡು ಬಾರೀ ರಾಜೀವ್​ ಪಕ್ಷೇತರ ಅಭ್ಯರ್ಥಿ ಆಯ್ಕೆಯಾಗಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜೀವ್ ಚಂದ್ರಶೇಖರ್ ಕನ್ನಡಿಗರಲ್ಲ ಎಂಬ ಮಾತು ಕೇಳಿ ತುಂಬಾ ಬೇಸರವಾಯ್ತು. ರಾಜೀವ್​ ಚಂದ್ರಶೇಖರ್​ ಕರ್ನಾಟಕದಲ್ಲೇ ಹುಟ್ಟಿ ಕನ್ನಡಕ್ಕಾಗಿ ಅಪಾರ ಕೆಲಸ ಮಾಡಿದ್ದಾರೆ. ಸಾಮಾಜಿಕ ಜಾಲ ತಾಣದಲ್ಲಿ ರಾಜೀವ್ ಚಂದ್ರಶೇಖರ್​ ಕುರಿತಾಗಿ ತಪ್ಪು ಮಾಹಿತಿ‌ ಬರುತ್ತಿದೆ ಎಂದು ಸಂಕೇಶ್ವರ್ ಹೇಳಿದ್ದಾರೆ. 

ರಾಜೀವ್ ಚಂದ್ರಶೇಖರ್​ ಅಪ್ಪಟ ಕನ್ನಡಿಗ ಎಂದು ಘಂಟಾಘೋಷವಾಗಿ ಹೇಳುವೆ. ಸುವರ್ಣ ನ್ಯೂಸ್ ಮತ್ತು ಕನ್ನಡಪ್ರಭ ಪತ್ರಿಕೆ‌ ಮೂಲಕ ಕನ್ನಡಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಕೇರಳದಲ್ಲಿ ಕಾಂಗ್ರೆಸ್ ಹಠಾವೋ ಚಳವಳಿಗೆ ರಾಜೀವ್ ಬೆಂಬಲ ಅತ್ಯಗತ್ಯ. ರಾಜೀವ್ ಚಂದ್ರಶೇಖರ್ ಕುರಿತು ತಪ್ಪು ಮಾಹಿತಿ ಹರಡುವುದು ಬೇಡ. ಮೋದಿಯನ್ನ ಎರಡನೇ ಬಾರಿ ಪ್ರಧಾನಿ ಮಾಡಬೇಕಾದ ಸವಾಲು ನಮ್ಮ ಮೇಲಿದೆ. ನನಗೆ ಟಿಕೆಟ್ ಕೈ ತಪ್ಪಿದಕ್ಕೆ ಅಸಮಾಧಾನ ಇದೆ ಎಂಬುದು ಸುಳ್ಳು. ಯಾವುದೇ ಅಸಮಾಧಾನ ಇಲ್ಲ, ನಾನು ಅರ್ಜಿ ಹಾಕಿಲ್ಲ, ಆಕಾಂಕ್ಷಿಯೂ ಅಲ್ಲ ಎಂದಿದ್ದಾರೆ.