ನೌಕಾಪಡೆಯ ನೂತನ ಮುಖ್ಯಸ್ಥರ ನೇಮಕ ವಿವಾದ: ಅರ್ಜಿ ಹಿಂಪಡೆದ ಬಿಮಲ್ ವರ್ಮಾ!
ನೌಕಾಪಡೆಯ ನೂತನ ಮುಖ್ಯಸ್ಥರ ನೇಮಕ ವಿವಾದ| ಅರ್ಜಿ ಹಿಂಪಡೆದ ವೈಸ್ ಅಡ್ಮಿರಲ್ ವಿಮಲ್ ವರ್ಮಾ| ನ್ಯಾಯಮಂಡಳಿಗೆ ಸಲ್ಲಿಸಿದ್ದ ಅರ್ಜಿ ಹಿಂಪಡೆದ ವರ್ಮಾ| ಸಂಪುಟ ನೇಮಕಾತಿ ಸಮಿತಿಗೆ ಅರ್ಜಿ ಸಲ್ಲಿಸಲು ನಿರ್ಧಾರ| ಎಸಿಸಿಗೆ ಅರ್ಜಿ ಸಲ್ಲಿಸುವಂತೆ ಖುದ್ದು ನ್ಯಾಯಮಂಡಳಿ ಸೂಚನೆ| ಕರಮ್ಬೀರ್ ಸಿಂಗ್ ನೇಮಕ ಪ್ರಶ್ನಿಸಿ ನ್ಯಾಯಮಂಡಳಿ ಮೊರೆ ಹೋಗಿದ್ದ ವಿಮಲ್ ವರ್ಮಾ|
ನವದೆಹಲಿ(ಏ.09): ಮಹತ್ವದ ಬೆಳವಣಿಗೆಯೊಂದರಲ್ಲಿ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ವೈಸ್ ಅಡ್ಮಿರಲ್ ಕರಮ್ಬೀರ್ ಸಿಂಗ್ ಅವರ ನೇಮಕ ಪ್ರಶ್ನಿಸಿ, ವೈಸ್ ಅಡ್ಮಿರಲ್ ಬಿಮಲ್ ವರ್ಮಾ ಸಶಸ್ತ್ರ ಪಡೆಗಳ ನ್ಯಾಯಮಂಡಳಿಗೆ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ವರ್ಮಾ ಪರ ವಕೀಲ ಅಂಕೂರ್ ಚಿಬ್ಬರ್, ಮೊದಲು ಈ ಪ್ರಕರಣವನ್ನು ಸಂಪುಟ ನೇಮಕಾತಿ ಸಮಿತಿ(ಎಸಿಸಿ)ಗೆ ದಾಖಲಿಸುತ್ತೇವೆ ಎಂದು ತಿಳಿಸಿದ್ದಾರೆ. ಒಂದು ವೇಳೆ ಎಸಿಸಿ ಪ್ರಕರಣದ ವಿಚಾರಣೆ ನಡೆಸದಿದ್ದರೆ ಮತ್ತೆ ಹೊಸದಾಗಿ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸುವುದಾಗಿ ಚಿಬ್ಬರ್ ಸ್ಪಷ್ಟಪಡಿಸಿದ್ದಾರೆ.
ವರ್ಮಾ ಸಲ್ಲಿಸಿದ್ದ ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆಸಿದ ನ್ಯಾಯಮಂಡಳಿ, ಮೊದಲು ಕೇಂದ್ರ ಸರ್ಕಾರದ ನೇಮಕಾತಿ ಸಮಿತಿಯನ್ನು ಸಂಪರ್ಕಿಸುವಂತೆ ಸೂಚನೆ ನೀಡಿತ್ತು.
ಸರ್ಕಾರ ತಮ್ಮ ಸೇವಾ ಹಿರಿತನವನ್ನು ಕಡೆಗಣಿಸಿ ನೌಕಾಪಡೆಯ ಮುಖ್ಯಸ್ಥರಾಗಿ ಕರಮ್ಬೀರ್ ಸಿಂಗ್ ಅವರನ್ನು ನೇಮಕ ಮಾಡಲಾಗಿದೆ ಎಂದು ಆರೋಪಿಸಿ ವರ್ಮಾ ನಿನ್ನೆ ನ್ಯಾಯಮಂಡಳಿಗೆ ಅರ್ಜಿ ಸಲ್ಲಿಸಿದ್ದರು.