Asianet Suvarna News Asianet Suvarna News

ಅತೃಪ್ತರಿಗೆ ವೇಣುಗೋಪಾಲ್ ಖಡಕ್ ಎಚ್ಚರಿಕೆ

ಎಲ್ಲರ ಅಹವಾಲನ್ನು ಸಮಾಧಾನ ಚಿತ್ರದಿಂದ ಆಲಿಸಿದ ವೇಣುಗೋಪಾಲ್‌ ನಿಮ್ಮ ಎಲ್ಲಾ ಅಹವಾಲುಗಳನ್ನೂ ಹೈಕಮಾಂಡ್‌ ಗಮನಕ್ಕೆ ತರುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಪ್ರತ್ಯೇಕ ಸಭೆ ಮತ್ತು ಭಿನ್ನಮತೀಯ ಚಟುವಟಿಕೆ ನಡೆಸಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

Venugopal Warn To Congress Leaders

ಬೆಂಗಳೂರು: ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ, ಸಿ.ಎಸ್‌. ಶಿವಳ್ಳಿ ಸೇರಿದಂತೆ ಸಚಿವ ಸ್ಥಾನ ದೊರಕದ ಅತೃಪ್ತ ಶಾಸಕರು ಗುರುವಾರ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ತಮ್ಮ ಅಹವಾಲು ಸಲ್ಲಿಸಿದರು. ಈ ವೇಳೆ ಎಲ್ಲರ ಅಹವಾಲನ್ನು ಸಮಾಧಾನ ಚಿತ್ರದಿಂದ ಆಲಿಸಿದ ವೇಣುಗೋಪಾಲ್‌ ನಿಮ್ಮ ಎಲ್ಲಾ ಅಹವಾಲುಗಳನ್ನೂ ಹೈಕಮಾಂಡ್‌ ಗಮನಕ್ಕೆ ತರುತ್ತೇನೆ. ಆದರೆ, ಯಾವುದೇ ಕಾರಣಕ್ಕೂ ಪ್ರತ್ಯೇಕ ಸಭೆ ಮತ್ತು ಭಿನ್ನಮತೀಯ ಚಟುವಟಿಕೆ ನಡೆಸಬೇಡಿ ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಸರಣಿ ಸಭೆಗಳನ್ನು ನಡೆಸುತ್ತಾ ಬರುತ್ತಿದ್ದ ಅತೃಪ್ತರಿಗೆ ಕೈ ಕಟ್ಟಿಹಾಕಿದಂತಾಗಿದೆ. ಶುಕ್ರವಾರದಿಂದ ಅತೃಪ್ತ ಶಾಸಕರು ಸಭೆ ನಡೆಸುವುದರಿಂದ ಹಿಂದೆ ಸರಿದಿದ್ದಾರೆ ಎನ್ನಲಾಗುತ್ತಿದ್ದು, ಅವರ ಮುಂದಿನ ನಡೆ ಕುತೂಹಲ ಮೂಡಿಸಿದೆ.

ಅತೃಪ್ತ ಬಣದ ಎಂ.ಬಿ.ಪಾಟೀಲ್‌, ಸತೀಶ್‌ ಜಾರಕಿಹೊಳಿ, ಸಿ.ಎಸ್‌.ಶಿವಳ್ಳಿ, ತನ್ವೀರ್‌ ಸೇಠ್‌, ಪರಮೇಶ್ವರ್‌ ನಾಯಕ್‌, ವಿ.ಮುನಿಯಪ್ಪ ಸೇರಿದಂತೆ ಹಲವು ಶಾಸಕರು ಗುರುವಾರ ಕುಮಾರಕೃಪಾ ಅತಿಥಿ ಗೃಹದಲ್ಲಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಭೇಟಿ ಮಾಡಿ ತಮಗೆ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರಲ್ಲದೆ, ಒಬ್ಬೊಬ್ಬರಾಗಿ ತಮ್ಮ ಅಹವಾಲುಗಳನ್ನು ಸಲ್ಲಿಸಿದರು.

ಸಮಾಧಾನದಿಂದಲೇ ಎಲ್ಲರ ಅಹವಾಲು ಆಲಿಸಿದ ವೇಣುಗೋಪಾಲ್‌ ಅವರು, ಎಲ್ಲರ ಅಹವಾಲನ್ನೂ ಹೈಕಮಾಂಡ್‌ ಗಮನಕ್ಕೆ ತರುತ್ತೇನೆ. ಆದರೆ, ನೀವು ಪ್ರತ್ಯೇಕ ಸಭೆ, ಭಿನ್ನಮತೀಯ ಚಟುವಟಿಕೆ ನಡೆಸಿ ಪಕ್ಷಕ್ಕೆ, ಸರ್ಕಾರಕ್ಕೆ ಮುಜುಗರ ಉಂಟುಮಾಡುವ ಕೆಲಸ ಮಾಡಬಾರದು ಎಂದು ತಾಕೀತು ಮಾಡಿದರು.

ನಾನು ಆಕಾಂಕ್ಷಿ ಅಲ್ಲ:  ಈ ವೇಳೆ ವೇಣುಗೋಪಾಲ್‌ ಬೇಟಿಗೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಎಂ.ಬಿ.ಪಾಟೀಲ್‌, ‘ನಾನು ಸಚಿವ ಸ್ಥಾನದ ಅಕಾಂಕ್ಷಿ ಅಲ್ಲ. ನಾನು ಯಾವ ಶಾಸಕರ ಜತೆಯೂ ಸಭೆ ನಡೆಸಲ್ಲ. ನಾಳೆ ಎಲ್ಲೂ ಸಭೆ ನಡೆಸುತ್ತಿಲ್ಲ. ವೇಣುಗೋಪಾಲ್‌ ನಮ್ಮನ್ನು ಕರೆದಿದ್ದಾರೆ. ಅದಕ್ಕೆ ಹೋಗುತ್ತಿದ್ದೇವೆ ಎಂದರು.

ವೇಣುಗೋಪಾಲ್‌ ಅವರು ಮಾತನಾಡಿ, ಎಂ.ಬಿ ಪಾಟೀಲ್‌ ಮತ್ತು ಸತೀಶ್‌ ಜಾರಕಿಹೊಳಿ ಜತೆ ಮಾತುಕತೆ ನಡೆಸಿದ್ದೇನೆ. ಸಚಿವ ಸ್ಥಾನ ತಪ್ಪಿರುವುದಕ್ಕೆ ಹಿರಿಯ ಶಾಸಕರಿಗೆ ಅಸಮಾಧಾನ ಆಗಿದೆ. ಅದರೆ ಸದ್ಯದ ಪರಿಸ್ಥಿತಿಯಲ್ಲಿ ಎಲ್ಲರಿಗೂ ಸಚಿವ ಸ್ಥಾನ ಕೊಡಲು ಆಗುವುದಿಲ್ಲ. ಇಂದಿನಿಂದ ಯಾವುದೇ ಪ್ರತ್ಯೇಕ ಸಭೆ ಮಾಡಬೇಡಿ ಎಂದು ಹೇಳಿದ್ದೇನೆ. ಸೂಕ್ತ ಸಮಯದಲ್ಲಿ ಸಂಪುಟ ವಿಸ್ತರಣೆ ಮಾಡುತ್ತೇವೆ. ಅಸಮಾಧಾನಿತರನ್ನು ಸಮಾಧಾನ ಪಡಿಸುವ ಶಕ್ತಿ ಕಾಂಗ್ರೆಸ್‌ಗೆ ಇದೆ ಎಂದರು.

Follow Us:
Download App:
  • android
  • ios