ತಿಂಡಿ ತಿಂದು ದುಡ್ಡು ಕೊಡೋದಿಲ್ಲ; ಹೋಟೆಲ್'ಗಳಿಗೆ ವಾಟಾಳ್ ಎಚ್ಚರಿಕೆ
ಮೇಕೆದಾಟು, ಮಹದಾಯಿ ಕಳಸಾ-ಭಂಡೂರಿ ಯೋಜನೆ, ಶಾಶ್ವತ ಕುಡಿಯುವ ನೀರು ಯೋಜನೆಗಳ ಶೀಘ್ರ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೆಲ ಕನ್ನಡಪರ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್'ಗೆ ಕರೆಕೊಟ್ಟಿವೆ.
ಬೆಂಗಳೂರು(ಜೂನ್ 11): ಕರ್ನಾಟಕ ಬಂದ್'ಗೆ ಬೆಂಬಲ ಕೊಡೋದಿಲ್ಲ ಎಂದು ಹೇಳುತ್ತಿರುವ ಅನೇಕ ಸಂಘಟನೆಗಳಿಗೆ ಪರಿಣಾಮ ನೆಟ್ಟಗಿರೋದಿಲ್ಲ ಎಂದು ವಾಟಾಳ್ ನಾಗರಾಜ್ ಎಚ್ಚರಿಕೆ ಸಂದೇಶ ನೀಡಿದ್ದಾರೆ. ಬಸ್'ಗಳು ಸೋಮವಾರ ರಸ್ತೆಗೆ ಇಳಿದರೆ ಕಲ್ಲು ತೂರಾಟ ನಿಶ್ಚಿತ. ಹೋಟೆಲ್'ಗಳು ತೆರೆದಿದ್ದರೆ ತಿಂಡಿ ತಿಂದು ಹಣ ಕೊಡೋದಿಲ್ಲ ಎಂದು ಕನ್ನಡ ಚಳವಳಿಕಾರ ವಾರ್ನ್ ಮಾಡಿದ್ದಾರೆ.
ಮೇಕೆದಾಟು, ಮಹದಾಯಿ ಕಳಸಾ-ಭಂಡೂರಿ ಯೋಜನೆ, ಶಾಶ್ವತ ಕುಡಿಯುವ ನೀರು ಯೋಜನೆಗಳ ಶೀಘ್ರ ಅನುಷ್ಠಾನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕೆಲ ಕನ್ನಡಪರ ಸಂಘಟನೆಗಳು ಸೋಮವಾರ ಕರ್ನಾಟಕ ಬಂದ್'ಗೆ ಕರೆಕೊಟ್ಟಿವೆ. ಆದರೆ, ಕನ್ನಡಪರ ಸಂಘಟನೆಗಳಲ್ಲೇ ಈ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಅನೇಕ ಕನ್ನಡ ಸಂಘಟನೆಗಳು ಬಂದ್'ಗೆ ಬೆಂಬಲ ನೀಡದಿರಲು ನಿರ್ಧರಿಸಿವೆ. ಹೋಟೆಲ್ ಮಾಲೀಕರ ಸಂಘ, ಆಟೋ ಚಾಲಕರ ಸಂಘಗಳು ಕೂಡ ಬಂದ್'ಗೆ ಬೆಂಬಲ ನೀಡಿಲ್ಲ. ಈ ಹಿನ್ನೆಲೆಯಲ್ಲಿ ವಾಟಾಳ್ ನಾಗರಾಜ್ ವಿವಿಧ ಸಂಘಟನೆಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಇದೇ ವೇಳೆ, ಬಹುತೇಕ ಸಂಘಟನೆಗಳ ಬೆಂಬಲ ಇಲ್ಲದೇ ಇರುವುದರಿಂದ ಸೋಮವಾರ ಬಂದ್'ನ ಬಿಸಿ ಕಡಿಮೆಯೇ ಇರಲಿದೆ. ಪರಿಸ್ಥಿತಿಯನ್ನು ಹತೋಟಿಯಲ್ಲಿಡಲು ಪೊಲೀಸ್ ಇಲಾಖೆ ನಾಳೆ ಸಾಕಷ್ಟು ಬಿಗಿಬಂದೋಬಸ್ತ್ ಏರ್ಪಡಿಸಿದೆ.