ಇಂದು ವೈಕುಂಠ ಏಕಾದಶಿ ಆಚರಣೆ: ವಿವಿಧ ದೇವಸ್ಥಾನಗಳಲ್ಲಿ ವಿಶೇಷ ಪೂಜಾಕಾರ್ಯ
ವೈಕುಂಠದ ದ್ವಾರ ತೆರೆದಿರುವ ದಿನ ಎಂದೇ ಬಣ್ಣಿಸಲ್ಪಡುವ ವೈಕುಂಠ ಏಕಾದಶಿಗೆ ಸಿಲಿಕಾನ್ ಸಿಟಿಯ ದೇವಾಲಯಗಳು ಸಜ್ಜಾಗಿವೆ. ನಗರದ ಹಲವು ದೇವಾಲಯದಲ್ಲಿ ವೈಕುಂಠದ ದ್ವಾರಗಳನ್ನು ನಿರ್ಮಿಸಲಾಗಿದ್ದು, ಈ ದ್ವಾರಗಳ ಮೂಲಕ ದೇವರ ದರ್ಶನ ಪುಣ್ಯದಾಯಕ ಎಂಬ ನಂಬಿಕೆ ಇದೆ.
ಬೆಂಗಳೂರು(ಜ.08):ವೈಕುಂಠದ ದ್ವಾರ ತೆರೆದಿರುವ ದಿನ ಎಂದೇ ಬಣ್ಣಿಸಲ್ಪಡುವ ವೈಕುಂಠ ಏಕಾದಶಿಗೆ ಸಿಲಿಕಾನ್ ಸಿಟಿಯ ದೇವಾಲಯಗಳು ಸಜ್ಜಾಗಿವೆ. ನಗರದ ಹಲವು ದೇವಾಲಯದಲ್ಲಿ ವೈಕುಂಠದ ದ್ವಾರಗಳನ್ನು ನಿರ್ಮಿಸಲಾಗಿದ್ದು, ಈ ದ್ವಾರಗಳ ಮೂಲಕ ದೇವರ ದರ್ಶನ ಪುಣ್ಯದಾಯಕ ಎಂಬ ನಂಬಿಕೆ ಇದೆ.
ನಗರದ ವೈಯ್ಯಾಲಿಕಾವಲಿನ ಟಿಟಿಡಿ, ಮಲ್ಲೇಶ್ವರಂ ಸೇರಿದಂತೆ ಹಲವು ದೇವಾಲಯಗಳಲ್ಲಿ ವೈಕುಂಠ ಏಕಾದಶಿಯ ವ್ರತಾಚರಣೆ ಆರಂಭವಾಗಿದ್ದು, ಬೆಳಿಗ್ಗೆ 5 ಗಂಟೆಯಿಂದಲೇ ವಿಶೇಷ ಪೂಜೆ ನಡೆಯುತ್ತಿದೆ. ವೇದ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ, ಹರಿಕಥೆಯೂ ನಡೆಯುತ್ತಿದೆ. ಅಲ್ಲದೆ ಭಕ್ತರು ವೈಕುಂಠ ದ್ವಾರದ ಮೂಲಕ ವಿಶೇಷವಾಗಿ ದೇವರ ದರ್ಶನ ಪಡೆಯಬಹುದಾಗಿದೆ. ವೈಕುಂಠ ಏಕಾದಶಿಯಂದು ಉಪವಾಸವಿದ್ದು, ವಿಷ್ಣು, ಶ್ರೀನಿವಾಸ ಅಥವಾ ವೆಂಕಟರಮಣ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರೆ ಹಿಂದಿನ ಘೋರ ಪಾಪಗಳು ನೀಗಿ ಮುಕ್ತಿ ದೊರೆಯುತ್ತದೆ ಎಂಬ ಪ್ರತೀತಿ ಹಿಂದು ಭಕ್ತರಲ್ಲಿದೆ. ಹೀಗಾಗಿ ಇಂದು ಭಕ್ತರು ದೇವಾಲಯಗಳಿಗೆ ತೆರಳಿ ದೇವರ ದರ್ಶನ ಪಡೆಯುತ್ತಿದ್ದು, ನಗರದ ಎಲ್ಲೆಡೆ ಹರಿಸ್ಮರಣೆ ಮೊಳಗುತ್ತಿದೆ.