ನಿರ್ದೇಶಕರ ಸಂಘಕ್ಕೆ ನಾಗೇಂದ್ರ ಪ್ರಸಾದ್ ಅಧ್ಯಕ್ಷ
"ಇದೊಂದು ಹುದ್ದೆ ಎನ್ನುವುದಕ್ಕಿಂತ ಒಂದು ಜವಾಬ್ದಾರಿ. ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಮೂಲಕ ಒಳ್ಳೆಯ ದಿನಗಳನ್ನು ಕಟ್ಟಬೇಕಿದೆ. ಆದರ ಕಡೆ ನಾವು ಹೆಜ್ಜೆ ಹಾಕಲಿದ್ದೇವೆ"
ಬೆಂಗಳೂರು: ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ನೂತನ ಅಧ್ಯಕ್ಷರಾಗಿ ಸಾಹಿತಿ ಹಾಗೂ ನಿರ್ದೇಶಕ ಡಾ. ವಿ.ನಾಗೇದ್ರ ಪ್ರಸಾದ್ ಆಯ್ಕೆಯಾಗಿದ್ದಾರೆ. ಭಾನುವಾರ ನಗರದ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ಸಂಸ್ಥೆಯ ಸಭಾಂಗಣದಲ್ಲಿ ನಡೆದ ನಿರ್ದೇಶಕರ ಸಂಘದ ಸರ್ವಸದಸ್ಯರ ಸಭೆಯಲ್ಲಿ ನಾಗೇಂದ್ರ ಪ್ರಸಾದ್ ಅವಿರೋಧವಾಗಿ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ಹಿರಿಯ ನಿರ್ದೇಶಕ ಜೋಸೈಮನ್ ಹಾಗೂ ಎಸ್. ಮುರುಳಿ ಮೋಹನ್, ಕಾರ್ಯದರ್ಶಿಗಳಾಗಿ ದಯಾಳ್ ಪದ್ಮನಾಭನ್ ಹಾಗೂ ಸುನೀಲ್ ಪುರಾಣಿಕ್ ಮತ್ತು ಖಜಾಂಚಿಯಾಗಿ ಕೆ.ಎ ವೈದ್ಯನಾಥನ್ ಅವರನ್ನು ಆಯ್ಕೆ ಮಾಡಲಾಯಿತು. ನಿರ್ದೇಶಕರಾದ ಮುಸ್ಸಂಜೆ ಮಹೇಶ್, ಶಿವಕುಮಾರ್, ಗುರು ಪ್ರಸಾದ್, ಎಬಿಸಿಡಿ ಶಾಂತ ಕುಮಾರ್, ಚಂದ್ರಹಾಸ್, ಮಳವಳ್ಳಿ ಸಾಯಿಕೃಷ್ಣ, ಅನಂತರಾಜು ಹಾಗೂ ಬೂದಾಳ್ ಕೃಷ್ಣ ಮೂರ್ತಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದಾರೆ.
ಪದಾಧಿಕಾರಿಗಳ ಆಯ್ಕೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ನಿರ್ದೇಶಕ ಡಾ. ನಾಗೇಂದ್ರ ಪ್ರಸಾದ್, "ಇದೊಂದು ಹುದ್ದೆ ಎನ್ನುವುದಕ್ಕಿಂತ ಒಂದು ಜವಾಬ್ದಾರಿ. ಸಂಘದ ಎಲ್ಲ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರ ಮೂಲಕ ಒಳ್ಳೆಯ ದಿನಗಳನ್ನು ಕಟ್ಟಬೇಕಿದೆ. ಆದರ ಕಡೆ ನಾವು ಹೆಜ್ಜೆ ಹಾಕಲಿದ್ದೇವೆ" ಎಂದರು.