ಪಾದರಕ್ಷೆ ಕಳೆದುಕೊಂಡು ಸಿಎಂ ಪಜೀತಿ
ಹರ್ ಕಿ ಪೌಡಿಯಲ್ಲಿ ಚಿತಾ ಭಸ್ಮ ವಿಸರ್ಜನೆಗೆ ಬಂದಿದ್ದ ಅಟಲ್ರ ಕುಟುಂಬದ ಜೊತೆಗೆ ಉತ್ತರಾಖಂಡದ ಮುಖ್ಯಮಂತ್ರಿಗಳ ಪಾದರಕ್ಷೆಗಳನ್ನೂ ಕಳ್ಳ ಮಹಾಶಯ ತೆಗೆದುಕೊಂಡು ಹೋಗಿದ್ದ
ಅಟಲ್ ಬಿಹಾರಿ ವಾಜಪೇಯಿ ಅವರ ಅಸ್ಥಿ ವಿಸರ್ಜನೆಗೆ ಹೋಗಿದ್ದ ದತ್ತು ಪುತ್ರಿ ನಮಿತಾ, ಅಳಿಯ ರಂಜನ್ ಸೇರಿದಂತೆ ಹತ್ತಾರು ಬಿಜೆಪಿ ನಾಯಕರು ನದಿ ತೀರದಿಂದ ವಾಪಸ್ ಬಂದು ನೋಡಿದರೆ ಎಲ್ಲರ ಚಪ್ಪಲಿ ಕಳುವಾಗಿದ್ದವು. ಹರ್ ಕಿ ಪೌಡಿಯಲ್ಲಿ ಚಿತಾ ಭಸ್ಮ ವಿಸರ್ಜನೆಗೆ ಬಂದಿದ್ದ ಅಟಲ್ರ ಕುಟುಂಬದ ಜೊತೆಗೆ ಉತ್ತರಾಖಂಡದ ಮುಖ್ಯಮಂತ್ರಿಗಳ ಪಾದರಕ್ಷೆಗಳನ್ನೂ ಕಳ್ಳ ಮಹಾಶಯ ತೆಗೆದುಕೊಂಡು ಹೋಗಿದ್ದ.
ಮೀನಾಕ್ಷಿ ಔಟ್ ಗಂಭೀರ್ ಇನ್
ನವದೆಹಲಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಕೊಡುವಂತೆ ಕ್ರಿಕೆಟಿಗ ಗೌತಮ್ ಗಂಭೀರ್ ಮೋದಿ ಸಾಹೇಬರನ್ನು ಕೇಳಿಕೊಂಡಿದ್ದು, ಅಮಿತ್ ಶಾಗೂ ಕೂಡ ಗೌತಮ್ ಗಂಭೀರ್ಗೆ ಟಿಕೆಟ್ ಕೊಡುವ ಬಗ್ಗೆ ಪಾಸಿಟಿವ್ ಆಗಿದ್ದಾರೆ. ಇದು ಗೊತ್ತಾದ ನಂತರ ಹಾಲಿ ಸಂಸದೆ ಮೀನಾಕ್ಷಿ ಲೇಖಿ ಫುಲ್ ಸಕ್ರಿಯರಾಗಿದ್ದಾರೆ. 4 ವರ್ಷ ಫೋನ್ ಮೇಲೆ ಫೋನ್ ಮಾಡಿದರೂ ಕ್ಯಾರೇ ಅನ್ನದ ಮೀನಾಕ್ಷಿ ಲೇಖಿ ಈಗ ಒಮ್ಮೆಲೇ ಎಲ್ಲರ ಫೋನ್ ಎತ್ತಲಾರಂಭಿಸಿದ್ದು, ಎಲ್ಲೇ ಕಾರ್ಯಕ್ರಮಕ್ಕೆ ಕರೆದರೂ ಹತ್ತು ನಿಮಿಷ ಮುಂಚಿತವಾಗಿ ಹಾಜರಿರುತ್ತಾರೆ.
[ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ]