ರೈತರ ಸಾಲ ಮನ್ನಾ ಕ್ರಮಕ್ಕೆ ಆರ್'ಬಿಐ ಆಕ್ಷೇಪ
ಉತ್ತರಪ್ರದೇಶದ ಬಿಜೆಪಿ ಸರ್ಕಾರ 36 ಸಾವಿರ ಕೋಟಿ ರುಪಾಯಿ ರೈತರ ಸಾಲ ಮನ್ನಾ ಮಾಡಿದ ಬೆನ್ನಲ್ಲೇ ಪಟೇಲ್ ಈ ಹೇಳಿಕೆ ನೀಡಿದ್ದಾರೆ.
ಮುಂಬೈ(ಏ.06): ಸರ್ಕಾರಗಳು ರೈತರ ಸಾಲ ಮನ್ನಾ ಮಾಡಲು ಮುಂದಾಗಿರುವುದಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಗವರ್ನರ್ ಊರ್ಜಿತ್ ಪಟೇಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಂಥ ಕ್ರಮಗಳಿಂದ ‘ಪ್ರಾಮಾಣಿಕ ಸಾಲ ಸಂಸ್ಕೃತಿ’ಗೆ ಧಕ್ಕೆ ಬರುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಉತ್ತರಪ್ರದೇಶದ ಬಿಜೆಪಿ ಸರ್ಕಾರ 36 ಸಾವಿರ ಕೋಟಿ ರುಪಾಯಿ ರೈತರ ಸಾಲ ಮನ್ನಾ ಮಾಡಿದ ಬೆನ್ನಲ್ಲೇ ಪಟೇಲ್ ಈ ಹೇಳಿಕೆ ನೀಡಿದ್ದಾರೆ.
‘ಸಾಲ ಮನ್ನಾದಿಂದ ಪ್ರಾಮಾಣಿಕವಾಗಿ ಸಾಲ ಹಿಂದಿರುಗಿಸುವವರನ್ನು ನಿರ್ಲಕ್ಷಿಸಿದಂತಾಗುತ್ತದೆ. ಇದು ಸಾಲ ಮರುಪಾವತಿ ಶಿಸ್ತಿಗೆ ಧಕ್ಕೆ ತರುತ್ತದೆ. ಇನ್ನು ಮುಂದೆ ಸಾಲ ಪಡೆಯುವವರು ಸಾಲ ತೀರಿಸಲು ಹಿಂದೇಟು ಹಾಕಲಾರಂಭಿಸುತ್ತಾರೆ. ತೆರಿಗೆದಾರರ ಹಣ ಸಾಲ ಪಡೆದವರಿಗೆ ಹೋದಂತಾಗುತ್ತದೆ’ ಎಂದು ದ್ವೈಮಾಸಿಕ ವಿತ್ತ ನೀತಿ ಪ್ರಕಟಣೆ ವೇಳೆ ಹೇಳಿದ್ದಾರೆ.
2014ರಲ್ಲಿ ಹಿಂದಿನ ಗವರ್ನರ್ ರಘುರಾಂ ರಾಜನ್ ಕೂಡಾ ಸಾಲ ಮನ್ನಾ ಮಾಡುವ ಸರ್ಕಾರದ ಕ್ರಮವನ್ನು ವಿರೋಧಿಸಿದ್ದರು.