ನವದೆಹಲಿ(ಸೆ.18): ಭಯೋತ್ಪಾದಕರ ದಾಳಿ ನಡೆದಿರುವ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್, ಈ ಹಿಂದೆ ನಿಗದಿಯಾಗಿದ್ದ ರಷ್ಯಾ- ಅಮೆರಿಕ ಪ್ರವಾಸವನ್ನು ಮುಂದೂಡಿದ್ದಾರೆ. ಇವತ್ತು ಗೃಹ ಸಚಿವ ರಾಜನಾಥ್ ಸಿಂಗ್ ರಷ್ಯಾ- ಅಮೆರಿಕ ಪ್ರವಾಸಕ್ಕೆ ತೆರಳಬೇಕಿತ್ತು.
ರಷ್ಯಾ- ಅಮೆರಿಕ ಪ್ರವಾಸದ ವೇಳೆ ರಾಜನಾಥ್ ಸಿಂಗ್ ಉಭಯ ರಾಷ್ಟ್ರಗಳ ಗೃಹ ಸಚಿವರೊಂದಿಗೆ ಪಾಕಿಸ್ತಾನ ಭಾರತದ ಗಡಿ ಪ್ರದೇಶದಲ್ಲಿ ನಡೆಸುತ್ತಿರುವ ಭಯೋತ್ಪಾದನೆಯ ವಿಷಯವನ್ನು ಪ್ರಮುಖವಾಗಿ ಚರ್ಚಿಸಲಿದ್ದರು. ಆದರೆ ರಾಜನಾಥ್ ಸಿಂಗ್ ರಷ್ಯಾಗೆ ತೆರಳಬೇಕಿದ್ದ ದಿನವೇ ಜಮ್ಮು-ಕಾಶ್ಮೀರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಇನ್ನು ಗೃಹ ಸಚಿವರ ನೇತೃತ್ವದಲ್ಲಿ ನಡೆಯಲಿರುವ ಉನ್ನತ ಮಟ್ಟದ ಸಭೆಯಲ್ಲಿ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಸಹ ಭಾಗಿಯಾಗುವ ಸಾಧ್ಯತೆ ಇದೆ.
