ಎಂ.ಬಿ.ಪಾಟೀಲ್ ನಂತರ ಜಾರಕಿಹೋಳಿ ಸರದಿ
ಸಚಿವಸ್ಥಾನ ಬೇಡ ಎಂದ ಸತೀಶ್ ಜಾರಕಿಹೋಳಿ
ಎಂ.ಬಿ.ಪಾಟೀಲ್ ಸಾಲಿಗೆ ಸತೀಶ್ ಜಾರಕಿಹೋಳಿ ಸೇರ್ಪಡೆ
ಮತ್ತೊಂದು ಸಭೆಯ ನಂತರ ಮುಂದಿನ ತೀರ್ಮಾನ
ಬೆಳಗಾವಿ[ಜೂ.09]: ಎರಡನೇ ಹಂತದಲ್ಲಿ ನನಗೆ ಸಚಿವ ಸ್ಥಾನ ಬೇಡ ಎನ್ನುತ್ತಿದ್ದ ಎಂ.ಬಿ.ಪಾಟೀಲ್ ಸಾಲಿಗೆ ಈಗ ಶಾಸಕ ಜಾರಕಿಹೋಳಿ ಕೂಡ ಸೇರ್ಪಡೆಯಾಗಿದ್ದಾರೆ.
ಬೆಳಗಾವಿಯ ಹನುಮಾನಗರದ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ನನಗೆ ಸಚಿವ ಸ್ಥಾನ ಕೊಟ್ಟರೂ ಬೇಡ. ನಾನು ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಸೋಲಿಸಿದ್ದೇನೆ ಎಂಬ ಆರೋಪವಿದೆ. ರಮೇಶ ಜಾರಕಿಹೋಳಿ ಅವರು ಸೋತ ಅಭ್ಯರ್ಥಿಗಳ ಹೇಳಿಕೆ ಪಡೆದು ನನ್ನ ಮೇಲೆ ಆರೋಪ ಮಾಡಿದ್ದಾರೆ. ಇದನ್ನು ಹೈಕಮಾಂಡ್'ಗೆ ಕಳುಹಿಸರಬಹುದು. ಈ ಕಾರಣದಿಂದ ನನಗೆ ಸಚಿವ ಸ್ಥಾನ ಕೈತಪ್ಪಿರುವ ಸಾಧ್ಯತೆಯಿದೆ ಎಂದು ಸಂಶಯ ವ್ಯಕ್ತಪಡಿಸಿದರು.
ಇಷ್ಟೆಲ್ಲಾ ಘಟನಾವಳಿಗಳು ನಡೆದರೂ ಮಾಜಿ ಸಿಎಂ ಸಿದ್ದರಾಮಯ್ಯ ನನ್ನನ್ನು ಸಂಪರ್ಕ ಮಾಡಿಲ್ಲ. ಎಐಸಿಸಿ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡುವುದು ಖಚಿತ. ಎಂ ಬಿ ಪಾಟೀಲರು ದೆಹಲಿಯಿಂದ ಆಗಮಿಸಿದ ನಂತರ ಮತ್ತೊಂದು ಸುತ್ತಿನ ಸಭೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳಲಾವುದು ಎಂದು ತಿಳಿಸಿದರು.