ಉಪಲೋಕಾಯುಕ್ತ ಸುಭಾಷ್ ಅಡಿ ನಿವೃತ್ತಿ
ಉಪಲೋಕಾಯುಕ್ತ ನ್ಯಾ.ಮಜ್ಜಗೆ ಅವರು ತಮ್ಮ ಅಧಿಕಾರದಲ್ಲಿ ಮಧ್ಯ ಪ್ರವೇಶ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ಬೆಂಗಳೂರು(ಮಾ.04): ಕಳೆದ ಐದು ವರ್ಷಗಳ ಉಪಲೋಕಾಯುಕ್ತರಾಗಿ ಸೇವೆ ಸಲ್ಲಿಸಿದ ನ್ಯಾ.ಸುಭಾಷ್ ಬಿ.ಅಡಿ ಅವರ ಅವಧಿಯು ಮುಕ್ತಾಯಗೊಂಡಿದ್ದು ಶನಿವಾರ ಆತ್ಮೀಯವಾಗಿ ಸನ್ಮಾನಿಸಿ ಬೀಳ್ಕೊಡಲಾಯಿತು.
ನ್ಯಾ.ಸುಭಾಷ್ ಬಿ.ಅಡಿ ಅವರು ಬೆಂಗಳೂರು ಕಸ ಸಮಸ್ಯೆ ಸೇರಿದಂತೆ ಜನರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಶ್ರಮವಹಿಸಿದ್ದರು. ಅಲ್ಲದೇ, ರಾಜ್ಯದಲ್ಲಿಯೇ ಕೋಲಾಹಲ ಸೃಷ್ಟಿಸಿದ ಮಾಜಿ ಲೋಕಾಯುಕ್ತ ನ್ಯಾ. ಭಾಸ್ಕರ್ರಾವ್ ಪುತ್ರ ಅಶ್ವಿನ್ ರಾವ್ ಮತ್ತವರ ತಂಡದ ಭ್ರಷ್ಟಾಚಾರದ ತನಿಖೆಯನ್ನು ಆಗಿನ ಎಸ್ಪಿಯಾಗಿದ್ದ ಸೋನಿಯಾ ನಾರಂಗ್ ಅವರಿಗೆ ವಹಿಸುವ ಮೂಲಕ ದಿಟ್ಟತನ ಮೆರೆದಿದ್ದರು.
ಈ ನಡುವೆ ಸುಭಾಷ್ ಅಡಿ ಅವರು ಕೆಲವು ಆರೋಪಗಳನ್ನು ಸಹ ಎದುರಿಸಬೇಕಾಯಿತು. ಉಪಲೋಕಾಯುಕ್ತ ನ್ಯಾ.ಮಜ್ಜಗೆ ಅವರು ತಮ್ಮ ಅಧಿಕಾರದಲ್ಲಿ ಮಧ್ಯ ಪ್ರವೇಶ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ, ತಮ್ಮ ವಿರುದ್ಧ ಸದನದಲ್ಲಿ ಪದಚ್ಯುತಿ ನಿರ್ಣಯ ಮಂಡಿಸಿದಾಗ ರಜೆಯ ಮೇಲೆ ತೆರಳಿದ್ದರು. ಅಷ್ಟೇ ಅಲ್ಲ ಆರೋಪ ಮುಕ್ತವಾಗುವವರೆಗೆ ಕಚೇರಿಗೆ ತೆರಳುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಅಂತೆಯೇ ನಡೆದುಕೊಂಡ ಅವರು ನ್ಯಾಯಾಲಯದಲ್ಲಿ ಹೋರಾಟ ನಡೆಸಿ ಒಂದು ತಿಂಗಳ ಬಳಿಕ ಹೈಕೋರ್ಟ್ ಆರೋಪ ಮುಕ್ತಗೊಳಿಸಿದ ತರುವಾಯವಷ್ಟೇ ಕಚೇರಿಗೆ ಆಗಮಿಸಿ ಕರ್ತವ್ಯ ಮುಂದುವರಿಸಿದ್ದರು.