ಮುಂದುವರಿದ ಧ್ವಂಸ ರಾಜಕಾರಣ: ಉತ್ತರ ಪ್ರದೇಶದಲ್ಲಿ ಬಾಬಾಸಾಹೇಬ್ ಪ್ರತಿಮೆ ವಿರೂಪ
- ಬುಧವಾರ ಮೀರಠ್’ನಲ್ಲೂ ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ
- ಶುಕ್ರವಾರ ಉತ್ತರಾಖಂಡದ ಹರಿದ್ವಾರದಲ್ಲೂ ಅಂಬೇಡ್ಕರ್ ಪ್ರತಿಮೆಗೆ ಹಾನಿ
ಆಜಂಗಢ, ಉತ್ತರಪ್ರದೇಶ: ತ್ರಿಪುರಾದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಕಮ್ಯೂನಿಸ್ಟ್ ನಾಯಕ ಲೆನಿನ್ ಪ್ರತಿಮೆ ಕೆಳಗುರುಳಿಸಿದ ಬೆನ್ನಲ್ಲಿ ಆರಂಭವಾದ ಪ್ರತಿಮೆ ರಾಜಕೀಯ ಇದೀಗ ಉತ್ತರ ಪ್ರದೇಶದಲ್ಲಿ ಮರುಕಳಿಸಿದೆ.
ಉತ್ತರ ಪ್ರದೇಶದ ಆಜಂಗಢದಲ್ಲಿ ದುಷ್ಕರ್ಮಿಗಳು ಬಾಬಾಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆಯನ್ನು ವಿರೂಪಗೊಳಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆಂದು ಏಎನ್’ಐ ವರದಿ ಮಾಡಿದೆ.
ಕಳೆದ ಬುಧವಾರ ಮೀರಠ್’ನಲ್ಲೂ ಅಂಬೇಡ್ಕರ್ ಪ್ರತಿಮೆಯನ್ನು ವಿರೂಪಗೊಳಿಸಿದ ಘಟನೆ ನಡೆದಿತ್ತು. ಶುಕ್ರವಾರ ಉತ್ತರಾಖಂಡದ ಹರಿದ್ವಾರದಲ್ಲೂ ಅಂಬೇಡ್ಕರ್ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು.
ಕಳೆದ ತ್ರಿಪುರಾ ವಿದಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ, ಲೆನಿನ್ ಪ್ರತಿಮೆಯನ್ನು ಉರುಳಿಸಲಾಗಿತ್ತು.
ಲೆನಿನ್ ಪ್ರತಿಮೆ ಬಳಿಕ ಮುಂದಿನ ಸರದಿ ಪೆರಿಯಾರ್ ಅವರದ್ದು ಎಂಬ ಬಿಜೆಪಿ ನಾಯಕ ಎಚ್.ರಾಜಾ ಅವರ ಹೇಳಿಕೆ ಬೆನ್ನಲ್ಲೇ, ಮಂಗಳವಾರ ತಮಿಳುನಾಡಿನ ವೆಲ್ಲೂರಿನಲ್ಲಿ ದ್ರಾವಿಡ ಹೋರಾಟಗಾರ ಪೆರಿಯಾರ್ ಅವರ ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು.
(ಚಿತ್ರ: ಎಎನ್’ಐ)