ಪಾರ್ಕ್ ಮಾಡಿದ್ದ ಕಾರು, ಬೈಕ್'ಗಳಿಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳು!
ಬೆಂಗಳೂರು(ಸೆ.18): ಕಳೆದ ಸೋಮವಾರದ ಹಿಂಸಾಚಾರದಿಂದ ನಿಧಾನವಾಗಿ ಹೊರ ಬರ್ತಿದ್ದ ಬೆಂಗಳೂರಿನ ಜಯನಗರ ನಿವಾಸಿಗಳು ಬೆಚ್ಚಿ ಬಿದ್ದಿದ್ದಾರೆ. ರಾತ್ರಿ ಪಾರ್ಕ್ ಮಾಡಿ ಮಲಗಿದ್ದ ನಿವಾಸಿಗಳಿಗೆ ಮಧ್ಯರಾತ್ರಿ ಶಾಕ್ ಆಗಿದೆ.
ಜಯನಗರದ ಕನಕನಪಾಳ್ಯದಲ್ಲಿ, ರಾತ್ರಿ ಊಟ ಮುಗಿಸಿ ನೆಮ್ಮದಿಯ ನಿದ್ರೆಗೆ ಜಾರುವ ಸಮಯದಲ್ಲೇ ಬೈಕ್'ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಸಿಕ್ಕ ಸಿಕ್ಕ ಬೈಕ್'ಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ದುಷ್ಕರ್ಮಿಗಳ ಅಟ್ಟಹಾಸಕ್ಕೆ 9 ಬೈಕ್ ಸುಟ್ಟು ಹೋಗಿದೆ. ಹೊಸ ಕಾರೊಂದಕ್ಕೆ ಸಹ ಬೆಂಕಿ ಹಚ್ಚಿದ್ದು ಸ್ಥಳೀಯರ ಎಚ್ಚೆತ್ತುಕೊಂಡಿದ್ದರಿಂದ ಕಾರು ಬೆಂಕಿಗೆ ಆಹುತಿಯಾಗದೇ ಉಳಿದಿದೆ.
ಸದ್ಯ ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳು ಕೃತ್ಯದ ಬಗ್ಗೆ ಪರಿಶೀಲನೆ ನಡೆಸಿದ್ದಾರೆ. ಬೈಕ್ ಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು ಯಾರು, ಈ ಕೃತ್ಯ ಎಸಗಲು ಕಾರಣವೇನು ಎನ್ನುವುದನ್ನು ಪೊಲೀಸರ ಪತ್ತೆ ಹಚ್ಚಬೇಕಿದೆ.