ರಾಜಕುಮಾರ್ ರಸ್ತೆ ಅಂಡರ್'ಪಾಸ್ ಸಂಚಾರ ಮುಕ್ತ
ರಾಜ್'ಕುಮಾರ್ ರಸ್ತೆಯ ವಿವೇಕಾನಂದ ಕಾಲೇಜು ಬಳಿ ನೂತನವಾಗಿ ನಿರ್ಮಿಸಿರುವ ಕೆಳ ಸೇತುವೆ ಲೋಕಾರ್ಪಣೆಗೊಂಡಿದೆ; ತುಮಕೂರು ಕಡೆ ಸಾಗುವ ಬಸ್ಸುಗಳು, ವಾಹನಗಳು ಇನ್ನು ಮುಂದೆ ಸುತ್ತಿ ಬಳಸಿ ಹೋಗಬೇಕಿಲ್ಲ. ಈ ಕೆಳ ಸೇತುವೆಗೆ ಮೇಜರ್ ನಿರಂಜನ್ ಕುಮಾರ್ ಅವರ ಹೆಸರನ್ನಿಡಲಾಗಿದೆ.
ಬೆಂಗಳೂರು: ಸ್ಥಳೀಯ ಸಂಪನ್ಮೂಲಕ ಕ್ರೋಢೀಕರಣದ ಮೂಲಕ ಆದಾಯ ಹೆಚ್ಚಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಬಿಎಂಪಿಗೆ ಸೂಚಿಸಿದ್ದಾರೆ. ನಗರೋತ್ಥಾನ ಯೋಜನೆ ಅನುದಾನದಲ್ಲಿ ಡಾ. ರಾಜಕುಮಾರ್ ರಸ್ತೆಯ ವಿವೇಕಾನಂದ ಕಾಲೇಜು ಬಳಿ ನೂತನವಾಗಿ ನಿರ್ಮಾಣವಾಗಿರುವ ಕೆಳ ಸೇತುವೆಯನ್ನು ಮಂಗಳವಾರ ಲೋಕಾರ್ಪಣೆ ಮಾಡಿದರು.
ನಗರದಲ್ಲಿ 20 ಲಕ್ಷ ಮನೆಗಳಿವೆ. ಪಾಲಿಕೆಯ ವಾರ್ಷಿಕ ಆದಾಯ ಮಾತ್ರ ರು.. 2 ಸಾವಿರ ಕೋಟಿ ಇದೆ. ಆದರೆ, ಬಜೆಟ್ ಮೌಲ್ಯ ರು. 10 ಸಾವಿರ ಕೋಟಿಯಾಗಿದೆ. ಆದಾಯಕ್ಕಿಂತ ಹೆಚ್ಚುವರಿಯಾಗಿರುವ ಎಲ್ಲಾ ಮೊತ್ತವನ್ನು ಸರ್ಕಾರ ಭರಿಸುತ್ತಿದೆ. ಆದಾಯ ಇಲ್ಲದೆ ಅಭಿವೃದ್ಧಿ ಕಾರ್ಯ ಸಾಧ್ಯವಿಲ್ಲ. ಹಾಗಾಗಿ ಸಾರ್ವಜನಿಕರಿಗೆ ಹೆಚ್ಚು ಹೊರೆಯಾಗದ ರೀತಿಯಲ್ಲಿ ತೆರಿಗೆ ವಿಧಿಸುವ ಮೂಲಕ ಪಾಲಿಕೆ ಆದಾಯ ಹೆಚ್ಚಳ ಮಾಡಿಕೊಳ್ಳಬೇಕು ಎಂದರು.
ನಗರದ ಸರ್ವತೋಮುಖವಾಗಿ ಅಭಿವೃದ್ಧಿಗೆ ನಗರ ವಾಸಿಗಳ ನೆರವೂ ಅತ್ಯಗತ್ಯ. ಆದ್ದರಿಂದ ಸೂಕ್ತ ಸಮಯಕ್ಕೆ ತೆರಿಗೆ ಪಾವತಿಸುವ ಮೂಲಕ ನಗರದ ಅಭಿವೃದ್ಧಿಯಲ್ಲಿ ಪಾಲುದಾರರಾಗಬೇಕು. ಕಸವನ್ನು ಸಂಸ್ಕರಣ ಮಾಡಲು ಬೆಂಗಳೂರಿನ 7 ಕಡೆ ಸಂಸ್ಕರಣಾ ಘಟಕ ಆರಂಭಿಸಲಾಗಿದೆ. ನಗರದಲ್ಲಿ ಕುಡಿಯವ ನೀರು, ರಸ್ತೆ, ಒಳಚರಂಡಿ ಸೇರಿ ದಂತೆ ಇನ್ನಿತರ ಮೂಲ ಸೌಕರ್ಯ ಕಲ್ಪಿಸಲು ಸರ್ಕಾರ ಬದ್ಧವಾಗಿದೆ ಎಂದರು. ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಿದ್ದು, ನಗರದಲ್ಲಿ ಮೇಲ್ಸೇತುವೆ, ಕೆಳಸೇತುವೆ ಹಾಗೂ ಸ್ಕೈವಾಕ್'ಗಳ ನಿರ್ಮಾಣ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಮೇಯರ್ ಜಿ. ಪದ್ಮಾವತಿ ಮಾತನಾಡಿ, ಬೆಂಗಳೂರಿನ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ನಗರೋತ್ಥಾನ ಯೋಜ ನೆಯಡಿ ಸಿದ್ಧರಾಮಯ್ಯ ರು. 7300 ಕೋಟಿ ನೀಡಿದ್ದಾರೆ. ಇಷ್ಟೊಂದು ಮೊತ್ತದ ಹಣ ನಗರದ ಅಭಿವೃದ್ಧಿಗೆ ಇಲ್ಲಿಯ ವರೆಗೂ ಯಾವ ಮುಖ್ಯಮಂತ್ರಿಯೂ ನೀಡಿರಲಿಲ್ಲ ಎಂದರು.
ಡಾ.ರಾಜಕುಮಾರ್ ರಸ್ತೆಯ ವಿವೇಕಾನಂದ ಕಾಲೇಜಿನ ಬಳಿ ನೂತನವಾಗಿ ನಿರ್ಮಾಣವಾಗಿರುವ ಕೆಳಸೇತು ವೆಗೆ ಮೇಜರ್ ನಿರಂಜನ್'ಕುಮಾರ್ ಹೆಸರಿಡುವುದಾಗಿ ಮೇಯರ್ ಪದ್ಮಾವತಿ ಘೋಷಿಸಿದರು. ಶಾಸಕರಾದ ಕೆ. ಗೋಪಾಲಯ್ಯ, ಡಾ.ಸಿ.ಎನ್. ಅಶ್ವತ್ಥನಾರಾಯಣ, ಉಪಮೇಯರ್ ಆನಂದ್, ಪಾಲಿಕೆ ಆಯುಕ್ತ ಮಂಜುನಾಥ ಪ್ರಸಾದ್, ಸ್ಥಳೀಯ ಪಾಲಿಕೆ ಸದಸ್ಯರಾದ ಭದ್ರೇಗೌಡ ಸೇರಿದಂತೆ ಮತ್ತಿತರರು ಹಾಜರಿದ್ದರು.
ರಾಜಾಜಿನಗರದಿಂದ ಯಶವಂತಪುರ ಸಂಪರ್ಕ:
ಡಾ.ರಾಜ್ಕುಮಾರ್ ರಸ್ತೆಯ ವಿವೇಕಾನಂದ ಕಾಲೇಜು ಬಳಿ ನಿರ್ಮಾಣವಾಗಿರುವ ಕೆಳಸೇತುವೆಯನ್ನು 14.65 ಕೋಟಿ ವೆಚ್ಚದಲ್ಲಿ 15 ತಿಂಗಳ ಅವಧಿಯಲ್ಲಿ ನಿರ್ಮಿಸಲಾಗಿದೆ. ಕೆಳ ಸೇತುವೆಗಾಗಿ 3,224.65 ಚದರ ಮೀಟರ್ ಜಮೀನನ್ನು ಖಾಸಗಿಯವರಿಂದ ಸ್ವಾಧೀನ ಪಡಿಸಿಕೊಂಡು 242.65 ಮೀಟರ್ ಉದ್ದದ ಸೇತುವೆ ನಿರ್ಮಾಣ ಮಾಡಲಾಗಿದೆ. ಈ ಮೇಲುಸೇತುವೆ ಮೂಲಕ ರಾಜಾಜಿನಗರದಿಂದ ಡಾ. ರಾಜ್ಕುಮಾರ್ ರಸ್ತೆ ಮೂಲಕ ಯಶವಂತಪುರಕ್ಕೆ ಸಂಪರ್ಕ ಕಲ್ಪಿಸುತ್ತಿದೆ.
ಅಭಿವೃದ್ಧಿ ಕೆಲಸಕ್ಕೆ ವಿರೋಧ ಪಕ್ಷಗಳು ಅನಗತ್ಯವಾಗಿ ವಿರೋಧಿಸುತ್ತವೆ. ಟೀಕೆ ಮಾಡುವುದರ ಜತೆಗೆ ಗಂಭೀರ ಆರೋಪ ಮಾಡುತ್ತವೆ. ನಗರದಲ್ಲಿ ಉಕ್ಕಿನ ಮೇಲ್ಸೇತುವೆ ನಿರ್ಮಾಣಕ್ಕೆ ಮುಂದಾದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಮನೆಗೆ . 65 ಕೋಟಿ ಹೋಗಿದೆ ಎಂದು ಆರೋಪಿಸಿ ಸಾರ್ವಜನಿಕರಲ್ಲಿ ಮನಸ್ಸಿನಲ್ಲಿ ಕೆಟ್ಟಆಭಿಪ್ರಾಯ ಮೂಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಸುಖಾಸುಮ್ಮನೆ ಬೈಯಿಸಿಕೊಳ್ಳುವುದು ಬೇಡ ಎಂದು ಯೋಜನೆ ಕೈ ಬಿಡಬೇಕಾಯಿತು.
- ಸಿದ್ದರಾಮಯ್ಯ ಮುಖ್ಯಮಂತ್ರಿ
ಕನ್ನಡಪ್ರಭ ವಾರ್ತೆ
epaper.kannadaprabha.in