ಬೆಂಗಳೂರು ವಿವಿಯಲ್ಲಿ ಪರೀಕ್ಷಾ ಅಕ್ರಮ..? ಎದುರಾಗಿದೆ ಗಂಭೀರ ಆರೋಪ..!
ಕಳೆದ ಎರಡು ವರ್ಷಗಳಿಂದ ಬೆಂಗಳೂರು ದೂರ ಶಿಕ್ಷಣ ಕೋರ್ಸ್ ಗಳಿಗೆ ಯುಜಿಸಿ ಬ್ರೇಕ್ ನೀಡಿತ್ತು. ಆದರೆ ಇದೀಗ ಮತ್ತೆ ಯುಜಿಸಿ ಬೆಂಗಳೂರು ದೂರ ಶಿಕ್ಷಣ ಕೋರ್ಸ್ ಗಳನ್ನ ಪ್ರಾರಂಭಿಸಲು ಗ್ರೀನ್ ಸಿಗ್ನಲ್ ನೀಡಿದೆ.
ಬೆಂಗಳೂರು : ಕಳೆದ ಎರಡು ವರ್ಷಗಳಿಂದ ಬೆಂಗಳೂರು ದೂರ ಶಿಕ್ಷಣ ಕೋರ್ಸ್ ಗಳಿಗೆ ಯುಜಿಸಿ ಬ್ರೇಕ್ ನೀಡಿತ್ತು. ಆದರೆ ಇದೀಗ ಮತ್ತೆ ಯುಜಿಸಿ ಬೆಂಗಳೂರು ದೂರ ಶಿಕ್ಷಣ ಕೋರ್ಸ್ ಗಳನ್ನ ಪ್ರಾರಂಭಿಸಲು ಗ್ರೀನ್ ಸಿಗ್ನಲ್ ನೀಡಿದೆ.
ಇದರ ಮಧ್ಯೆ ಬೆಂಗಳೂರು ದೂರ ಶಿಕ್ಷಣ ಪರೀಕ್ಷೆಯ ಮೌಲ್ಯಮಾಪನದಲ್ಲಿ ಅಕ್ರಮ ನಡೆದಿದೆ ಅಂತ ದೂರಶಿಕ್ಷಣ ವಿಭಾಗದ ನಿರ್ದೇಶಕ ಪ್ರೊ.ಡಾ.ಬಿ.ಸಿ.ಮೈಲಾರಪ್ಪ ಗಂಭೀರ ಆರೋಪ ಮಾಡಿದ್ದಾರೆ. ಪರೀಕ್ಷಾ ವಿಭಾಗದ ರಿಜಿಸ್ಟ್ರಾರ್ ಪ್ರೊ.ಶಿವರಾಜ್,ಸಿಂಡಿಕೇಟ್ ಸದಸ್ಯ ಶಿವಣ್ಣ ಹಾಗೂ ಖಾಸಗಿ ಕಾಲೇಜಿನ ಡೇವಿಡ್ ರಾಜು ಮೇಲೆ ಪ್ರೊ.ಮೈಲಾರಪ್ಪ ಪರೀಕ್ಷಾ ಅಕ್ರಮದ ಗಂಭೀರ ಆರೋಪ ಮಾಡಿದ್ದಾರೆ.
ಪರೀಕ್ಷೆ ನಡೆಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳಿಂದ ಪೋನ್ ನಂಬರ್ ಸಂಗ್ರಹಿಸಿ ಒಂದು ವಿಷಯಕ್ಕೆ ಇಂತಿಷ್ಟು ಹಣ ಫಿಕ್ಸ್ ಮಾಡಿಕೊಂಡು ಲಕ್ಷಾಂತರ ರೂಪಾಯಿ ಹಣ ಮಾಡಿದ್ದಾರೆ. ಈ ಬಗ್ಗೆ ವಿವಿ ಹಂಗಾಮಿ ಕುಲಪತಿಗಳಿಗೆ ಸಮಗ್ರವಾಗಿ ಪತ್ರ ಬರೆದಿದ್ದು, ಅಕ್ರಮದಲ್ಲಿ ನನ್ನ ಪಾತ್ರ ಇಲ್ಲ ಎಂದು ಪ್ರೊ.ಡಾ.ಬಿ.ಸಿ ಮೈಲಾರಪ್ಪ ಸ್ಪಷ್ಟಪಡಿಸಿದ್ದಾರೆ.
ಇನ್ನು ದೂರ ಶಿಕ್ಷಣದ ಪರೀಕ್ಷೆಗಳ ಮೌಲ್ಯಮಾಪನ ನಡೆಸಲು ಪ್ರಾಂಶುಪಾಲ ಹರೀಶ್ ಕಸ್ಟೋಡಿಯನ್ ನೇಮಕ ಮಾಡುವ ಸಂಬಂಧ ಸಿಂಡಿಕೇಟ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಸಿಂಡಿಕೇಟ್ ಸದಸ್ಯರ ಮಾತನ್ನ ಪರಿಗಣಿಸದೇ ರಿಜಿಸ್ಟ್ರಾರ್ ಪ್ರೊ,ಶಿವರಾಜ್ ,ಹರೀಶ್ ಅವರನ್ನೇ ನೇಮಕ ಮಾಡುವಂತೆ ಕುಲಪತಿಗಳಿಂದ ಒತ್ತಾಯ ಪೂರ್ವಕವಾಗಿ ಸಹಿ ಮಾಡಿಸಿಕೊಂಡಿದ್ದಾರೆ ಅನ್ನೋ ಆರೋಪ ಕೂಡ ಕೇಳಿ ಬಂದಿದೆ.
ಆದರೆ ಈ ಬಗ್ಗೆ ಬೆಂಗಳೂರು ವಿವಿಯ ಹಂಗಾಮಿ ಕುಲಪತಿ ಪ್ರೊ.ವಿ.ಸುದೇಶ್ ಮಾತನಾಡಿ ನಾನು ಯಾರ ಒತ್ತಾಯಕ್ಕೂ ಮಣಿದು ಕಸ್ಟೋಡಿಯನ್ ನೇಮಕ ಮಾಡಿಲ್ಲ. ಮೂರು ನಾಲ್ಕು ಹೆಸರುಗಳನ್ನ ಕೊಟ್ಟಿದ್ದರು. ಅದರಲ್ಲಿ ಒಂದಕ್ಕೆ ಸಹಿ ಮಾಡಿದ್ದೇನೆ ಎಂದು ಅವರು ಸ್ಪಷ್ಟನೇ ಕೊಟ್ಟಿದ್ದಾರೆ. ಒಟ್ಟಿನಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಪರೀಕ್ಷಾ ಅಕ್ರಮಗಳಿಗೆ ವೇದಿಕೆ ಮಾಡಿಕೊಡುತ್ತಿದೆಯಾ ಅನ್ನೋ ಅನುಮಾನ ವ್ಯಕ್ತವಾಗಿದೆ.