'ಮೋದಿಗೆ ವಿದೇಶಿ ನಾಯಕರೊಂದಿಗೆ ಸೇರಿ ಗಾಳಿಪಟ ಹಾರಿಸಲಷ್ಟೇ ಆಸಕ್ತಿ'
- ಮೋದಿ ಸರ್ಕಾರದ ಕೆಲಸ ಜಾಹೀರಾತುಗಳಿಗೆ ಮಾತ್ರ ಸೀಮಿತ: ಉದ್ಧವ್ ಠಾಕ್ರೆ ಆಕ್ರೋಶ
- ಉದ್ಯಮಗಳು ಮುಚ್ಚಲ್ಪಡುತ್ತಿವೆ, ಯುವಕರಿಗೆ ಉದ್ಯೋಗವೇ ಇಲ್ಲವಾಗಿದೆ, ಎಂದು ಉದ್ಧವ್ ಠಾಕ್ರೆ ಕಿಡಿ
ಮುಂಬೈ: ಶಿವಸೇನೆಯ ಅಧ್ಯಕ್ಷರಾಗಿ ಮಂಗಳವಾರ ಪುನರಾಯ್ಕೆಯಾಗಿರುವ ಉದ್ಧವ್ ಠಾಕ್ರೆ ಪ್ರಧಾನಿ ಮೋದಿ, ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಭಾರತ ಪ್ರಬಲ ನಾಯಕನನ್ನು ಹೊಂದಿದೆಯೆಂದು ಜನರು ಭಾವಿಸುತ್ತಾರೆ. ಆದರೆ, ಮೋದಿಯವರಿಗೆ ಅಹಮದಾಬಾದ್’ನಲ್ಲಿ ವಿದೇಶಿ ನಾಯಕರೊಂದಿಗೆ ಸೇರಿ ಗಾಳಿಪಟ ಹಾರಿಸುವುದು ಮಾತ್ರ ಇಷ್ಟ. ವಿದೇಶಿ ನಾಯಕರನ್ನು ಯಾಕೆ ಗುಜರಾತ್’ಗೆ ಮಾತ್ರ ಕೊಂಡೊಯ್ಯಲಾಗುತ್ತದೆ? ಕಾಶ್ಮೀರ ಅಥವಾ ಇನ್ನಾವುದೋ ಸ್ಥಳಕ್ಕೆ ಯಾಕೆ ಭೇಟಿ ನೀಡಲ್ಲ, ಎಂದು ಉದ್ಧವ್ ಠಾಕ್ರೆ ಪ್ರಶ್ನಿಸಿದ್ದಾರೆ.
ಸುಳ್ಳು ಭರವಸೆ ನೀಡುತ್ತಿರುವ ಬಿಜೆಪಿ ನಾಯಕರ ವಿರುದ್ಧ ಗುಡುಗಿರುವ ಉದ್ಧವ್ ಠಾಕ್ರೆ, ಗೋವನ್ನು ಕೊಲ್ಲುವುದು ಅಪರಾಧವಾದರೆ, ಸುಳ್ಳು ಹೇಳುವುದು ಅಪರಾಧ ಯಾಕಲ್ಲ, ಎಂದು ಪ್ರಶ್ನಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ‘ಅಚ್ಚೇ ದಿನ್’ ಬಗ್ಗೆ ಆಶ್ವಾಸನೆ ನೀಡಲಾಗಿತ್ತು. ಉದ್ಯಮಗಳು ಮುಚ್ಚಲ್ಪಡುತ್ತಿವೆ, ಯುವಕರಿಗೆ ಉದ್ಯೋಗವೇ ಇಲ್ಲವಾಗಿದೆ, ಎಂದು ಉದ್ಧವ್ ಠಾಕ್ರೆ ಕಿಡಿಕಾರಿದ್ದಾರೆ.
ಜಾಹೀರಾತಿಗಳಲ್ಲಿ ಮಾತ್ರ ಕೇಂದ್ರ ಸರ್ಕಾರ ಕೆಲಸ ಗೋಚರಿಸುತ್ತಿದೆ. ಅದಕ್ಕಾಗಿ ಕೋಟಿಗಟ್ಟಲೇ ಹಣ ವ್ಯಯಿಸುತ್ತಿದೆ. ಆದರೆ ಜನರ ಅಭಿವೃದ್ಧಿಗೆ ಏನು ಮಾಡುತ್ತಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.