ಕೆ. ಚಂದ್ರಶೇಖರ್‌ ರಾವ್‌ ತೆಲಂಗಾಣ ಮುಖ್ಯಮಂತ್ರಿಯಾಗಿ ಎರಡು ತಿಂಗಳು ಕಳೆದರೂ ಸಂಪುಟ ವಿಸ್ತರಣೆಗೆ ಮುಂದಾಗಿಲ್ಲ. ಗೃಹ ಖಾತೆಯನ್ನು ಹೊಂದಿರುವ ಮೊಹಮ್ಮದ್‌ ಅಲಿ ಅವರನ್ನು ಹೊರತು ಪಡಿಸಿದರೆ ಉಳಿದ ಯಾರನ್ನೂ ಕೆ.ಸಿ.ಆರ್‌ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲ.

ಹೈದರಾಬಾದ್‌[ಫೆ.11]: ತೆಲಂಗಾಣ ಮುಖ್ಯಮಂತ್ರಿಯಾಗಿ ಎರಡು ತಿಂಗಳು ಕಳೆದರೂ ಕೆ. ಚಂದ್ರಶೇಖರ್‌ ರಾವ್‌ ಅವರು ಮಾತ್ರ ಇನ್ನೂ ತಮ್ಮ ಸಂಪುಟ ವಿಸ್ತರಣೆಗೆ ಮುಂದಾಗಿಲ್ಲ. ವಾಸ್ತು ಮತ್ತು ದೇವರನ್ನು ಬಲವಾಗಿ ನಂಬುವ ಕೆ.ಸಿ.ಆರ್‌, ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಮಾಡಬಹುದು ಎಂದು ಭಾವಿಸಲಾಗಿತ್ತು. ಅದಾದ ಬಳಿಕ ಐದು ದಿನಗಳ ಮಹಾರುದ್ರ ಸಹಿತ ಸಹಸ್ರ ಚಂಡಿಯಾಗ ಹಮ್ಮಿಕೊಂಡಿದ್ದರು. ಆದರೆ, ಯಾಗ ಮುಗಿದ ಬಳಿಕವೂ ಸಂಪುಟ ವಿಸ್ತರಣೆ ಸುಳಿವನ್ನು ಕೆ.ಸಿ.ಆರ್‌ ನೀಡಿಲ್ಲ. ಕೆಸಿಆರ್‌ ಈ ನಡೆ ಬಾರೀ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

119 ಸದಸ್ಯ ಬಲದ ವಿಧಾನಸಭೆಯಲ್ಲಿ 18 ಸಚಿವರನ್ನು ಹೊಂದಲು ಅವಕಾಶ ಇದೆ. ಆದರೆ, ಅಧಿಕಾರಕ್ಕೆ ಬಂದು 2 ತಿಂಗಳಾದರೂ ಗೃಹ ಖಾತೆಯನ್ನು ಹೊಂದಿರುವ ಮೊಹಮ್ಮದ್‌ ಅಲಿ ಅವರನ್ನು ಹೊರತು ಪಡಿಸಿದರೆ ಉಳಿದ ಯಾರನ್ನೂ ಕೆ.ಸಿ.ಆರ್‌ ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿಲ್ಲ.

ತೆಲಂಗಾಣದಲ್ಲಿ 60 ಇಲಾಖೆಗಳಿದ್ದು, ಎಲ್ಲಾ ಇಲಾಖೆಗಳನ್ನು ಒಂದೇ ಸಚಿವಾಲಯದ ಅಡಿಯಲ್ಲಿ ಹಾಗೂ ಒಬ್ಬನೇ ಸಚಿವನ ಅಡಿಯಲ್ಲಿ ತರಲು ಕೆ.ಸಿ.ಆರ್‌. ಉದ್ದೇಶಿಸಿದ್ದಾರೆ. ಈ ನಿಟ್ಟಿನಲ್ಲಿ ಐಎಎಸ್‌ ಅಧಿಕಾರಿಗಳ ಸಮಿತಿಯೊಂದು ಕಾರ್ಯನಿರ್ವಹಿಸುತ್ತಿದೆ. ಒಮ್ಮೆ ಈ ಪ್ರಕ್ರಿಯೆ ಮುಕ್ತಾಯಗೊಂಡ ಬಳಿಕ ಅವರು ಸಂಪುಟ ವಿಸ್ತರಣೆ ಮಾಡಲಿದ್ದಾರೆ ಎಂದು ಟಿಆರ್‌ಎಸ ವಕ್ತಾರರೊಬ್ಬರು ತಿಳಿಸಿದ್ದಾರೆ.