ಡಿ.ಕೆ.ಶಿವಕುಮಾರ್ ರಿವೀಲ್ ಮಾಡಿದ ಬಿಜೆಪಿ ಸೀಕ್ರೇಟ್ ಪ್ಲಾನ್
ಬಿಜೆಪಿ ಮುಖಂಡರು ಮಾಸ್ಟರ್ ಪ್ಲಾನ್ ಮಾಡುತ್ತಿದ್ದು ಈ ವಿಚಾರ ತಮಗೆ ತಿಳಿದಿದೆ. ಬಿಜೆಪಿಯಲ್ಲಿ 2 ತಂಡಗಳಾಗಿ ಸರ್ಕಾರವನ್ನು ಉರುಳಿಸುವ ಯತ್ನ ನಡೆದಿದೆ ಎಂದು ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಬೆಂಗಳೂರು : ಸಮ್ಮಿಶ್ರ ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯದಲ್ಲಿ ಏನು ನಡೆಯುತ್ತಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಸರ್ಕಾರವನ್ನು ಅಸ್ಥಿರಗೊಳಿಸಲು ರಾಜ್ಯದಲ್ಲಿ ಎರಡು ತಂಡಗಳು ಕಾರ್ಯನಿರ್ವಹಿಸುತ್ತಿವೆ. ನಾವೇನೂ ಕಣ್ಮುಚ್ಚಿ ಕುಳಿತಿಲ್ಲ. ನಮ್ಮ ಕೆಲಸ ನಾವೂ ಮಾಡುತ್ತಿದ್ದೇವೆ ಎಂದು ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಸದಾಶಿವನಗರದ ತಮ್ಮ ಮನೆಯಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಕಿ ಇಲ್ಲದೆ ಹೊಗೆ ಬರುವುದಿಲ್ಲ ಎಂದು ನಮಗೆ ಗೊತ್ತಿದೆ. ನಡೆಯುತ್ತಿರುವ ಎಲ್ಲಾ ಬೆಳವಣಿಗೆಗಳು ನಮ್ಮ ಗಮನದಲ್ಲಿದ್ದು, ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದರು.
ಬೆಕ್ಕು ಕಣ್ಣುಮುಚ್ಚಿ ಹಾಲು ಕುಡಿದರೆ ಯಾರಿಗೂ ಗೊತ್ತಾಗುವುದಿಲ್ಲ ಎಂದು ಅವರು ತಿಳಿದಿದ್ದಾರೆ. ಕುತೂಹಲಕಾರಿ ಸಂಗತಿಯೆಂದರೆ, ಬಿಜೆಪಿಯ ಒಂದು ತಂಡಕ್ಕೆ ಅದೇ ಪಕ್ಷದ ಮತ್ತೊಂದು ತಂಡ ಏನು ಮಾಡುತ್ತಿದೆ ಎಂಬುದು ಗೊತ್ತಿಲ್ಲ. ಕಾಂಗ್ರೆಸ್ ಶಾಸಕರನ್ನು ಸೆಳೆಯುವುದರ ಬಗ್ಗೆ ಏನೂ ನಡೆದಿಲ್ಲ, ಆಡಿಯೋ ನಕಲಿ ಎಂದು ಹೇಳುತ್ತಿರುವ ಜಗದೀಶ್ ಶೆಟ್ಟರ್, ಸಿ.ಟಿ.ರವಿ ಮತ್ತು ಕೋಟ ಶ್ರೀನಿವಾಸ್ ಪೂಜಾರಿ ಅವರಿಗೆ ಆ ಪಕ್ಷದ ಮತ್ತೊಂದು ತಂಡ ಆಪರೇಷನ್ ಕಮಲ ಮಾಡಲು ಯತ್ನಿಸುತ್ತಿರುವ ಬಗ್ಗೆ ಮಾಹಿತಿಯೇ ಇಲ್ಲ. ಆದರೆ, ಸರ್ಕಾರಕ್ಕೆ ಬಿಜೆಪಿಯಲ್ಲಿ ಏನು ನಡೆಯುತ್ತಿದೆ. ಜನಾರ್ದನ ರೆಡ್ಡಿ ಅವರು ಯಾರನ್ನು ಭೇಟಿ ಮಾಡಲು ಬ್ರಿಗೇಡ್ ಟವರ್ಗೆ ಹೋಗಿದ್ದರು, ಜಿಂದಾಲ್ ಆಸ್ಪತ್ರೆಗೆ ಯಾರೆಲ್ಲಾ ಹೋಗಿ ಬಂದಿದ್ದಾರೆ ಎಂಬುದೂ ಸೇರಿದಂತೆ ಎಲ್ಲಾ ಬೆಳವಣಿಗೆಗಳ ಬಗ್ಗೆ ಮಾಹಿತಿಯಿದೆ ಎಂದರು.
ದುಬೈ ಮೂಲದ ಉದ್ಯಮಿಯೊಂದಿಗೆ ಮಾತನಾಡಿದಾತ ತಮ್ಮ ಆಪ್ತ ಸಹಾಯಕ ಅಲ್ಲ ಎಂದು ಶ್ರೀರಾಮುಲು ಹೇಳುತ್ತಿದ್ದಾರೆ. ಹಾಗಿದ್ದರೆ, ಆ ವ್ಯಕ್ತಿಯನ್ನು ಶ್ರೀರಾಮುಲು ಏಕೆ ಇಟ್ಟುಕೊಂಡಿದ್ದಾರೆ ಎಂದು ಶಿವಕುಮಾರ್ ಈ ಸಂದರ್ಭದಲ್ಲಿ ಪ್ರಶ್ನಿಸಿದರು.