ಕಗ್ಗಂಟಾದ 2 ಖಾತೆಗಳು : ಉಳಿದಂತೆ ಯಾರಿಗೆ ಯಾವ ಖಾತೆ..?
ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬಳಿಕ ಆರಂಭವಾದ ಸಮಸ್ಯೆ ಇನ್ನೂ ಕೂಡ ಮುಂದುವರಿದಿದೆ. ಇದೀಗ ಈ ಸಮಸ್ಯೆ ಪರಿಹಾರದ ಹೊಣೆ ರಾಹುಲ್ ಗಾಂಧಿಗೆ ವರ್ಗಾವಣೆಯಾಗಿದೆ.
ಬೆಂಗಳೂರು : ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹಾಗೂ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ತಮ್ಮ ಬಳಿ ಇರುವ ಪ್ರಮುಖ ಖಾತೆಗಳನ್ನು ಬಿಟ್ಟುಕೊಡಲು ನೇರವಾಗಿ ನಿರಾಕರಿಸಿದ ಹಿನ್ನೆಲೆಯಲ್ಲಿ ಖಾತೆ-ಕ್ಯಾತೆ ಪರಿಹರಿಸಲು ಮಧ್ಯಸ್ಥಿಕೆ ವಹಿಸಿದ್ದ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಮಾಡಿದ ಪ್ರಯತ್ನಗಳು ಫಲ ನೀಡಿಲ್ಲ. ಪರಿಣಾಮ ಈ ನಾಯಕರು ಹೊಂದಿರುವ ಎರಡು ಪ್ರಮುಖ ಖಾತೆಗಳ ಬಗ್ಗೆ ಅಂತಿಮ ತೀರ್ಮಾನ ಇದೀಗ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಂಗಳ ತಲುಪಿದೆ.
ಖಾತೆ-ಕ್ಯಾತೆಗೆ ಪರಿಹಾರ ಕಂಡುಕೊಳ್ಳಲು ಬುಧವಾರ ರಾಜ್ಯ ಉಸ್ತುವಾರಿ ವೇಣುಗೋಪಾಲ್ ನೇತೃತ್ವದಲ್ಲಿ ನಡೆದ ರಾಜ್ಯ ನಾಯಕರ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ನಡುವೆ ಮಾತಿನ ಚಕಮಕಿ ನಡೆದಿದೆ. ಹೀಗಾಗಿ ಕ್ಯಾತೆಗೆ ಪರಿಹಾರ ದೊರೆಯದೇ ಈ ವಿಚಾರ ರಾಹುಲ್ ಗಾಂಧಿ ಅಂಗಳ ತಲುಪಿದೆ. ಸಭೆಯಲ್ಲಿ ಪರಮೇಶ್ವರ್ ಹೆಚ್ಚುವರಿಯಾಗಿ ಹೊಂದಿರುವ ಗೃಹ ಅಥವಾ ಬೆಂಗಳೂರು ನಗರಾಭಿವೃದ್ಧಿ ಮತ್ತು ಶಿವಕುಮಾರ್ ಅವರು ಹೊಂದಿರುವ ಜಲಸಂಪನ್ಮೂಲ ಹಾಗೂ ವೈದ್ಯ ಶಿಕ್ಷಣ ಈ ಪೈಕಿ ಇಬ್ಬರೂ ತಲಾ ಒಂದು ಖಾತೆ ಬಿಟ್ಟುಕೊಡಬೇಕು ಮತ್ತು ಈ ನಾಯಕರು ಬಿಟ್ಟುಕೊಡುವ ಈ ಪ್ರಮುಖ ಖಾತೆಗಳ ಪೈಕಿ ತಲಾ ಒಂದನ್ನು ನೂತನ ಸಚಿವರಾದ ಎಂ.ಬಿ.ಪಾಟೀಲ್ ಹಾಗೂ ಇ.ತುಕಾರಾಂ ಅವರಿಗೆ ನೀಡುವ ಬಗ್ಗೆ ಚರ್ಚೆಯಾಗಿದೆ.
ಮತ್ತೊಂದು ಮೂಲದ ಪ್ರಕಾರ ಕೇವಲ ಗೃಹ ಹಾಗೂ ವೈದ್ಯಕೀಯ ಶಿಕ್ಷಣ ಮಾತ್ರವಲ್ಲದೆ, ಕೃಷ್ಣ ಬೈರೇಗೌಡ ಅವರು ಹೊಂದಿರುವ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಕಾನೂನು ಖಾತೆಗಳ ಪೈಕಿ ಗ್ರಾಮೀಣಾಭಿವೃದ್ಧಿಯನ್ನು ಹಿಂಪಡೆಯುವ ಬಗ್ಗೆ ಹಾಗೂ ಕೆ.ಜೆ. ಜಾಜ್ರ್ ಹೊಂದಿರುವ ಕೈಗಾರಿಕೆ ಹಾಗೂ ಐಟಿ-ಬಿಟಿ ಖಾತೆಗಳ ಪೈಕಿ ಐಟಿ-ಬಿಟಿ ಖಾತೆಯನ್ನು ಹಿಂಪಡೆದು ನೂತನ ಸಚಿವರಿಗೆ ಹಂಚುವ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ. ಆದರೆ, ಈ ಬಗ್ಗೆ ಪಕ್ಷದ ಹಿರಿಯ ನಾಯಕರಲ್ಲೇ ಒಮ್ಮತ ಮೂಡಿಲ್ಲ.
ಅದರಲ್ಲೂ ಗೃಹ ಖಾತೆ ಹಾಗೂ ವೈದ್ಯ ಶಿಕ್ಷಣ ಖಾತೆಯನ್ನು ಹಿಂಪಡೆಯುವ ಪ್ರಸ್ತಾಪಕ್ಕೆ ಪರಮೇಶ್ವರ್ ಹಾಗೂ ಶಿವಕುಮಾರ್ ಅವರು ಈ ಸೂತ್ರಕ್ಕೆ ಸುತರಾಂ ಒಪ್ಪಿಲ್ಲ. ಒಂದು ಹಂತದಲ್ಲಂತೂ ಪರಮೇಶ್ವರ್ ಹಾಗೂ ಸಿದ್ದರಾಮಯ್ಯ ನಡುವೆ ಮಾತಿನ ಚಕಮಕಿ ಸಹ ನಡೆಯಿತು ಎನ್ನಲಾಗಿದೆ. ಅಂತಿಮವಾಗಿ ಪ್ರಮುಖ ಖಾತೆಗಳನ್ನು ಹಿಂಪಡೆಯಬೇಕೋ ಅಥವಾ ಹಾಲಿ ಪ್ರಭಾವ ಸಚಿವರಲ್ಲೇ ಸದರಿ ಖಾತೆಗಳನ್ನು ಮುಂದುವರೆಸಬೇಕೋ ಎಂಬಬಗ್ಗೆ ರಾಹುಲ್ ಗಾಂಧಿ ಅವರೇ ಅಂತಿಮ ತೀರ್ಮಾನ ಕೈಗೊಳ್ಳಲಿ ಎಂದು ಸಭೆ ನಿರ್ಧರಿಸಿದ್ದು, ರಾಹುಲ್ ತೆಗೆದುಕೊಳ್ಳುವ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಲು ಸಭೆ ತೀರ್ಮಾನಿಸಿತು ಎಂದು ಮೂಲಗಳು ಹೇಳಿವೆ.
ಉಳಿದಂತೆ ನೂತನ ಸಚಿವರಾದ ಸಿ.ಎಸ್. ಶಿವಳ್ಳಿ ಅವರಿಗೆ ಪೌರಾಡಳಿತ (ರಮೇಶ್ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನದಿಂದ ಕೊಕ್ ನೀಡಿದ್ದರಿಂದ ತೆರವಾದ ಖಾತೆ), ಸತೀಶ್ ಜಾರಕಿಹೊಳಿ ಅವರಿಗೆ ಅರಣ್ಯ (ಶಂಕರ್ ಅವರಿಗೆ ಸಚಿವ ಸ್ಥಾನದಿಂದ ಕೊಕ್ ನೀಡಿದ್ದರಿಂದ ತೆರವಾದ ಖಾತೆ), ಎಂ.ಟಿ.ಬಿ. ನಾಗರಾಜು ಅವರಿಗೆ ವಸತಿ (ಯು.ಟಿ. ಖಾದರ್ ಬಳಿ ಇದ್ದ ಹೆಚ್ಚುವರಿ ಖಾತೆ), ರಹೀಂ ಖಾನ್ ಅವರಿಗೆ ಅಲ್ಪಸಂಖ್ಯಾತರ ಕಲ್ಯಾಣ (ಜಮೀರ್ ಅಹ್ಮದ್ ಬಳಿಯಿದ್ದ ಹೆಚ್ಚವರಿ ಖಾತೆ), ಆರ್.ಬಿ. ತಿಮ್ಮಾಪುರ ಅವರಿಗೆ ಕೌಶಲ್ಯಾಭಿವೃದ್ಧಿ (ಆರ್.ವಿ. ದೇಶಪಾಂಡೆ ಅವರ ಬಳಿಯಿದ್ದ ಹೆಚ್ಚುವರಿ ಖಾತೆ) ಖಾತೆ ನೀಡುವ ಬಗ್ಗೆ ಸಭೆ ನಿರ್ಧರಿಸಿತು ಎನ್ನಲಾಗಿದೆ. ಡಾ
ಜಿ.ಪರಮೇಶ್ವರ್ ಹಾಗೂ ಡಿ.ಕೆ.ಶಿವಕುಮಾರ್ ತಮ್ಮಲ್ಲಿರುವ ಹೆಚ್ಚುವರಿ ಖಾತೆ ಬಿಟ್ಟುಕೊಡಲು ಒಪ್ಪಿಲ್ಲದಿರುವುದರಿಂದ ಎಂ.ಬಿ.ಪಾಟೀಲ್, ಪಿ.ಟಿ. ಪರಮೇಶ್ವರ್ ನಾಯ್್ಕ ಹಾಗೂ ತುಕಾರಾಂ ಅವರಿಗೆ ನೀಡುವ ಖಾತೆಗಳ ಬಗ್ಗೆ ಇನ್ನೂ ಚಿತ್ರಣ ಸ್ಪಷ್ಟವಾಗಿಲ್ಲ.
ರಾಜ್ಯ ನಾಯಕರು ಸಿದ್ಧಪಡಿಸಿರುವ ಈ ಪಟ್ಟಿಯೊಂದಿಗೆ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರು ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ ಅವರೊಂದಿಗೆ ಸಮಾಲೋಚನೆ ನಡೆಸಲಿದ್ದಾರೆ. ಹೈಕಮಾಂಡ್ ಬಳಿ ಚರ್ಚೆಯ ವೇಳೆ ಪರಮೇಶ್ವರ್ ಹಾಗೂ ಶಿವಕುಮಾರ್ ಅವರಿಗೆ ಹೆಚ್ಚುವರಿ ಖಾತೆಗಳನ್ನು ಮುಂದುವರಿಸಬೇಕೋ ಅಥವಾ ಬಿಟ್ಟುಕೊಡಬೇಕೋ ಎಂಬುದು ತೀರ್ಮಾನವಾಗಲಿದೆ. ಇದಲ್ಲದೆ, ಹಾಲಿ ಪಟ್ಟಿಯಲ್ಲಿ ಹೈಕಮಾಂಡ್ ಕೂಡ ಕೆಲವೊಂದು ಬದಲಾವಣೆ ಮಾಡುವ ಸಾಧ್ಯತೆಯೂ ಇದೆ ಎಂದು ಹೇಳಲಾಗುತ್ತಿದೆ.
2 ಖಾತೆಗಳು ಕಗ್ಗಂಟು:
ಉಳಿದವು ಸಲೀಸು!
- ತುಕಾರಾಂ, ಎಂ.ಬಿ.ಪಾಟೀಲ್ ಖಾತೆ ಗೊಂದಲ
2ನೇ ಖಾತೆ ಬಿಡಲು ಪ್ರಭಾವಿಗಳ ಹಿಂದೇಟು
- ಗೃಹ ಅಥವಾ ಬೆಂಗಳೂರು ಅಭಿವೃದ್ಧಿ ಬಿಡೋಲ್ಲ: ಪರಂ
ವೈದ್ಯಕೀಯ ಶಿಕ್ಷಣ ಕೊಡಲ್ಲ: ಡಿಕೆಶಿ
- ಉಳಿದ ಖಾತೆ ಅಂತಿಮ: ರಾಹುಲ್ ಸಮ್ಮತಿ ಬಾಕಿ
2 ಖಾತೆ ವಿವಾದ ಹೈಕಮಾಂಡ್ ಅಂಗಳಕ್ಕೆ
ಎಲ್ಲರಿಗಿಂತ ಮೊದಲೇ ತಿಳಿಯುವುದು ಇಲ್ಲೇ
2 ಖಾತೆ ಹೊಂದಿರುವ ಪ್ರಭಾವಿಗಳು ಒಂದು ಖಾತೆ ಬಿಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ‘ಕನ್ನಡಪ್ರಭ’ ಡಿ.23ರಂದೇ ವರದಿ ಮಾಡಿತ್ತು.
ಸಂಭಾವ್ಯ ಖಾತೆ
ಸಿ.ಎಸ್.ಶಿವಳ್ಳಿ - ಪೌರಾಡಳಿತ
ಸತೀಶ್ ಜಾರಕಿಹೊಳಿ - ಅರಣ್ಯ
ಎಂ.ಟಿ.ಬಿ. ನಾಗರಾಜ್ - ವಸತಿ
ರಹೀಂ ಖಾನ್ - ಅಲ್ಪಸಂಖ್ಯಾತ ಕಲ್ಯಾಣ
ಆರ್.ಬಿ.ತಿಮ್ಮಾಪುರ - ಕೌಶಲ್ಯಾಭಿವೃದ್ಧಿ
ಪಿ.ಟಿ.ಪರಮೇಶ್ವರ್ ನಾಯಕ್- ಯುವ ಸಬಲೀಕರಣ/ ಮುಜರಾಯಿ
ಕಗ್ಗಂಟು
ಎಂ.ಬಿ. ಪಾಟೀಲ್ - ಗೃಹ ಖಾತೆ
ತುಕಾರಾಂ- ವೈದ್ಯಕೀಯ ಶಿಕ್ಷಣ