ಉದ್ಯೋಗಕ್ಕೆ ಅಲೆವ ಬದಲು ಪಾನ್ಶಾಪ್ ತೆರೆಯಿರಿ, ದನ ಸಾಕಿ: ಸಿಎಂ ಬಿಪ್ಲಬ್
ಯುವಕರು ಉದ್ಯೋಗಕ್ಕಾಗಿ ತಮ್ಮ ಹಿಂದೆ ಯಾಕೆ ಬರುತ್ತೀರಿ, ‘ಪಾನ್ ಅಂಗಡಿ’ ತೆರೆಯಿರಿ, ದನಗಳನ್ನು ಸಾಕಿ ಎಂಬಂತಹ ಹೇಳಿಕೆ ನೀಡಿ ತ್ರಿಪುರ ಸಿಎಂ ಬಿಪ್ಲವ್ ದೇಬ್ ಮತ್ತೊಮ್ಮೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ನವದೆಹಲಿ: ಯುವಕರು ಉದ್ಯೋಗಕ್ಕಾಗಿ ತಮ್ಮ ಹಿಂದೆ ಯಾಕೆ ಬರುತ್ತೀರಿ, ‘ಪಾನ್ ಅಂಗಡಿ’ ತೆರೆಯಿರಿ, ದನಗಳನ್ನು ಸಾಕಿ ಎಂಬಂತಹ ಹೇಳಿಕೆ ನೀಡಿ ತ್ರಿಪುರ ಸಿಎಂ ಬಿಪ್ಲವ್ ದೇಬ್ ಮತ್ತೊಮ್ಮೆ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ತ್ರಿಪುರಾ ಪಶುಸಂಗೋಪನಾ ಮಂಡಳಿಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದ್ದಾರೆ. ‘ಯುವಕರು ಸರ್ಕಾರಿ ಉದ್ಯೋಗಗಳಿಗಾಗಿ ಹಲವು ವರ್ಷಗಳ ಕಾಲ ರಾಜಕೀಯ ಪಕ್ಷಗಳ ಹಿಂದೆ ಹೋಗುತ್ತಾರೆ ಮತ್ತು ತಮ್ಮ ಜೀವನದ ಅಮೂಲ್ಯ ಸಮಯ ವ್ಯರ್ಥ ಮಾಡುತ್ತಾರೆ.
ಅದೇ ಯುವಕ ಪಕ್ಷಗಳ ಹಿಂದೆ ಅಲೆದಾಡುವ ಬದಲು ಒಂದು ಪಾನ್ ಅಂಗಡಿ ತೆರೆದಿದ್ದರೆ, ಈಗ ಆತನ ಬ್ಯಾಂಕ್ ಖಾತೆಯಲ್ಲಿ 5 ಲಕ್ಷ ರು. ಉಳಿಸುತ್ತಿದ್ದ. ಪ್ರತಿಯೊಂದು ಮನೆಯಲ್ಲಿ ಒಂದು ದನ ಸಾಕಬೇಕು.
ಇಲ್ಲಿ ಹಾಲು ಮಾರಾಟ ಮಾಡಿದರೆ ಲೀಟರ್ಗೆ 50 ರು. ದೊರೆಯುತ್ತದೆ. ಕಳೆದ 10 ವರ್ಷಗಳಿಂದ ಉದ್ಯೋಗಕ್ಕಾಗಿ ಅಲೆದಾಡುವ ಪದವೀಧರನೊಬ್ಬ ಒಂದು ದನ ಸಾಕಿದ್ದರೆ, ಈಗ ಆತನ ಬ್ಯಾಂಕ್ ಖಾತೆಯಲ್ಲಿ 10 ಲಕ್ಷ ರು. ಇರುತಿತ್ತು’ ಎಂದು ಅವರು ಹೇಳಿದ್ದಾರೆ.
ಇದಕ್ಕೂ ಮೊದಲು, ಪ್ರಧಾನಿ ನರೇಂದ್ರ ಮೋದಿಯವರು, ಉದ್ಯೋಗ ಇಲ್ಲ ಎನ್ನುವ ಬದಲು, ಯುವಕರು ಪಕೋಡ ಮಾರಬಹುದು ಎಂದು ಹೇಳಿ ಟೀಕೆಗೆ ಗುರಿಯಾಗಿದ್ದರು.