ದಸರಾ ಹಬ್ಬದ ಸಂಭ್ರಮ ಕಸಿದ ರೈಲು ಅಪಘಾತ! ರಾವಣ ದಹನದ ವೇಳೆ ಜನರ ಮೇಲೆ ಹರಿದ ರೈಲು! ಪಂಜಾಬ್ ನ ಅಮೃತಸರ್ ಬಳಿ ನಡೆದ ದುರ್ಘಟನೆ! ಅಪಘಾತದಲ್ಲಿ ಕನಿಷ್ಟ 50 ಜನ ದುರ್ಮರಣ
ಅಮೃತಸರ್(ಅ.19): ದಸರಾ ಹಬ್ಬದ ನಿಮಿತ್ತ ಇಡೀ ದೇಶ ಸಂಭ್ರಮದಲ್ಲಿ ಮಿಂದೆದ್ದರೆ, ಅಮೃತಸರ್ ದಲ್ಲಿ ನಡೆದ ರೈಲು ದುರಂತವೊಂದು ಈ ಸಂಭ್ರಮವನ್ನು ಕ್ಷಣಾರ್ಧದಲ್ಲಿ ಕಸಿದುಕೊಂಡಿದೆ. ರಾವಣ ದಹನ ಸಮಾರಂಭದ ವೇಳೆ ರೈಲೊಂದು ಜನರ ಮೇಲೆ ಹರಿದ ಪರಿಣಾಮ ಕನಿಷ್ಟ 50 ಜನ ಸಾವನ್ನಪ್ಪಿರುವ ಘಟನೆ ಅಮೃತಸರ್ ಬಳಿ ನಡೆದಿದೆ.
ಹಳಿಯ ಪಕ್ಕದಲ್ಲೇ ರಾವಣ ದಹನ ಸಮಾರಂಭ ನಡೆಯುವ ವೇಳೆ ಜಲಂಧರ್ ಎಕ್ಸಪ್ರೆಸ್ ರೈಲು ನಿಂತಿದ್ದ ಜನರ ಮೇಲೆ ಹರಿದಿದೆ. ಒಂದು ಹಳಿಯ ಮೇಲೆ ರೈಲು ಬಂದ ಪರಿಣಾಮ ನೆರೆದಿದ್ದ ಜನ ಮತ್ತೊಂದು ಹಳಿಯತ್ತ ಓಡಿದ್ದಾರೆ. ಆದರೆ ಇದೇ ವೇಳೆ ಜಲಂಧರ್ ಎಕ್ಸಪ್ರೆಸ್ ರೈಲು ಬಂದ ಪರಿಣಾಮ ರೈಲಿನಡಿ ಸಿಕ್ಕು ಕನಿಷ್ಟ 50 ಜನ ಸಾವನ್ನಪ್ಪಿದ್ದಾರೆ.
ಸದ್ಯ ಘಟನಾ ಸ್ಥಳಕ್ಕೆ ಧಾವಿಸಿರುವ ಪೊಲೀಸರು ರಕ್ಷಣಾ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ. ಸಾವಿನ ಸಂಖ್ಯೆ ಮತ್ತಷ್ಟು ಏರುವ ಆತಂಕವನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.
