ರೈತರಿಗೆ ಟ್ರ್ಯಾಕ್ಟರ್‌ ಚಾಲನಾ ತರಬೇತಿಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿ ನೀಡುವುದರೊಂದಿಗೆ ಉಚಿತವಾಗಿ ಚಾಲನಾ ಪರವಾನಗಿ ವಿತರಿಸುವ ಸಲುವಾಗಿ ರಾಜ್ಯ ಸರ್ಕಾರ ರೈತ ಸಾರಥಿ ಹೆಸರಿನಲ್ಲಿ ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ.
ಚಿಕ್ಕಬಳ್ಳಾಪುರ : ರೈತರಿಗೆ ಟ್ರ್ಯಾಕ್ಟರ್ ಚಾಲನಾ ತರಬೇತಿಗೆ ಸಂಬಂಧಿಸಿದ ಪ್ರಾಥಮಿಕ ಮಾಹಿತಿ ನೀಡುವುದರೊಂದಿಗೆ ಉಚಿತವಾಗಿ ಚಾಲನಾ ಪರವಾನಗಿ ವಿತರಿಸುವ ಸಲುವಾಗಿ ರಾಜ್ಯ ಸರ್ಕಾರ ರೈತ ಸಾರಥಿ ಹೆಸರಿನಲ್ಲಿ ವಿನೂತನ ಯೋಜನೆಯೊಂದನ್ನು ಜಾರಿಗೆ ತಂದಿದೆ.
ಜೂ.24 ರಂದು ಸಾರಿಗೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ರಾಮಲಿಂಗಾರೆಡ್ಡಿಯವರು ಚಿಕ್ಕಬಳ್ಳಾಪುರದ ಹೊರವಲಯದಲ್ಲಿರುವ ಆರ್ಟಿಒ ಕಚೇರಿ ಆವರಣದಲ್ಲಿ ಈ ಯೋಜನೆಗೆ ರಾಜ್ಯದಲ್ಲೇ ಮೊದಲ ಬಾರಿಗೆ ಚಾಲನೆ ನೀಡಲಿದ್ದಾರೆ ಎಂದು ಆರ್ಟಿಒ ಪಾಂಡುರಂಗಶೆಟ್ಟಿಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕ ಡಾ.ಕೆ. ಸುಧಾಕರ್ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸದ ವೀರಪ್ಪ ಮೊಯ್ಲಿ, ವಿಧಾನಸಭಾ ಉಪಸಭಾಧ್ಯಕ್ಷ ಎನ್.ಎಚ್. ಶಿವಶಂಕರರೆಡ್ಡಿ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಏನಿದು ಯೋಜನೆ?: ಟ್ರ್ಯಾಕ್ಟರ್ ಅಪಘಾತದಂತಹ ಘಟನೆಗಳು ನಡೆದಾಗ ಅರಿವಿನ ಕೊರತೆಯಿಂದಾಗಿ ವಿಮೆ ಸೇರಿದಂತೆ ಇತರೆ ಸೌಲಭ್ಯಗಳಿಂದ ಅಮಾಯಕ ರೈತರು ವಂಚಿತವಾಗುತ್ತಿದ್ದಾರೆ. ರೈತ ಸಾರಥಿ ಯೋಜನೆ ಇಂತಹ ಸಂದರ್ಭಗಳಲ್ಲಿ ರೈತರ ನೆರವಿಗೆ ಬರಲಿದ್ದು ಸರ್ಕಾರ ಬಜೆಟ್ನಲ್ಲಿ ಇದಕ್ಕಾಗಿ . 2 ಕೋಟಿ ಅನುದಾನವನ್ನೂ ತೆಗೆದಿಟ್ಟಿದೆ. ರಾಜ್ಯಾದ್ಯಂತ 50 ಪ್ರಾದೇಶಿಕ ಸಾರಿಗೆ ಕಚೇರಿಗಳಿದ್ದು, ಈ ಎಲ್ಲ ಕಚೇರಿಗಳಿಗೆ ಸಮಾನವಾಗಿ ಈ ಅನುದಾನವನ್ನು ಹಂಚಲಾಗಿದೆ. ರೈತರಿಗೆ ಡ್ರೈವಿಂಗ್ ಸ್ಕೂಲ್ ಮೂಲಕ ಟ್ರ್ಯಾಕ್ಟರ್ ಚಾಲನೆ ತರಬೇತಿ ನೀಡುವುದರೊಂದಿಗೆ ಟ್ರ್ಯಾಕ್ಟರ್, ದ್ವಿಚಕ್ರ ವಾಹನ ಪರವಾನಗಿಯನ್ನೂ ಒದಗಿಸಲಾಗುವುದು. ಪ್ರತಿ ಆರ್ಟಿಒ ಕಚೇರಿಯಲ್ಲಿ 750 ರೈತರು ಲಾಭ ಪಡೆವರು.
(ಸಾಂದರ್ಭಿಕ ಚಿತ್ರ)
