ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿರೋ ಕರ್ನಾಟಕಕ್ಕೆ ಸೋಮವಾರ ಮಹತ್ವದ ದಿನ. ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಶಶಿಶೇಖರ್ ನೇತೃತ್ವದಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ಸಮಿತಿಯ ತೀರ್ಮಾನ ರಾಜ್ಯದ ಪಾಲಿಗೆ ಅತ್ಯಂತ ಪ್ರಮುಖವಾದದ್ದು ಹೀಗಾಗಿ, ಕಾವೇರಿ ಕೊಳ್ಳದ ಬರ ಪರಿಸ್ಥಿತಿ, ಅಂತರ್ಜಲ ಸ್ಥಿತಿ, ಜಲಾಶಯಗಳಲ್ಲಿ ನೀರಿನ ಸ್ಥಿತಿ ಮತ್ತು ಮಳೆ ಪ್ರಮಾಣದ ವಿವರದೊಂದಿಗೆ ಸಮರ್ಥ ವಾದ ಮಂಡಿಸಲು ಸರ್ಕಾರ ಸಿದ್ದತೆ ನಡೆಸಿದೆ.

ನವದೆಹಲಿ(ಸೆ.18): ಹಲವು ಅನ್ಯಾಯದ ನಡುವೆ ಕಾವೇರಿ ನೀರು ಹಂಚಿಕೆ ವಿವಾದದಲ್ಲಿ ಕರ್ನಾಟಕಕ್ಕೆ ಸೋಮವಾರ ಮತ್ತೊಂದು ಅಗ್ನಿ ಪರೀಕ್ಷೆ ದಿನ ಎದುರಾಗಲಿದೆ. ದೆಹಲಿಯಲ್ಲಿ ನಾಳೆ ಕಾವೇರಿ ಮೇಲುಸ್ತುವಾರಿ ಸಮಿತಿಯ ಮಹತ್ವದ ಸಭೆ ನಡೆಯಲಿದ್ದು, ಸಮರ್ಥ ವಾದ ಮಂಡನೆಗೆ ಸರ್ಕಾರ ಸಿದ್ಧತೆ ನಡೆಸಿದೆ. ಇತ್ತ ಕಾವೇರಿ ಕೊಳ್ಳದ ಭಾಗದ ರೈತರಲ್ಲಿ ಆತಂಕ ಮಡುಗಟ್ಟಿದ್ದು, ಎಲ್ಲರ ದೃಷ್ಟಿ ಸಮಿತಿಯತ್ತ ನೆಟ್ಟಿದೆ. ಅಂತಿಮವಾಗಿ ಇದು ಸುಪ್ರೀಂ ಕೋರ್ಟ್ ತೀರ್ಪಿಗೆ ರಾಜ್ಯಕ್ಕೆ ನಿರ್ಣಾಯಕವಾಗಲಿದೆ.

ತಮಿಳುನಾಡಿಗೆ ಕಾವೇರಿ ನೀರು ಹರಿಸಬೇಕೆಂಬ ಸುಪ್ರೀಂಕೋರ್ಟ್ ಆದೇಶದಿಂದ ಸಂಕಷ್ಟಕ್ಕೆ ಸಿಲುಕಿರೋ ಕರ್ನಾಟಕಕ್ಕೆ ಸೋಮವಾರ ಮಹತ್ವದ ದಿನ. ಕೇಂದ್ರ ಜಲಸಂಪನ್ಮೂಲ ಕಾರ್ಯದರ್ಶಿ ಶಶಿಶೇಖರ್ ನೇತೃತ್ವದಲ್ಲಿ ಕಾವೇರಿ ಮೇಲುಸ್ತುವಾರಿ ಸಮಿತಿ ಸಭೆ ನಡೆಯಲಿದ್ದು, ಸಮಿತಿಯ ತೀರ್ಮಾನ ರಾಜ್ಯದ ಪಾಲಿಗೆ ಅತ್ಯಂತ ಪ್ರಮುಖವಾದದ್ದು ಹೀಗಾಗಿ, ಕಾವೇರಿ ಕೊಳ್ಳದ ಬರ ಪರಿಸ್ಥಿತಿ, ಅಂತರ್ಜಲ ಸ್ಥಿತಿ, ಜಲಾಶಯಗಳಲ್ಲಿ ನೀರಿನ ಸ್ಥಿತಿ ಮತ್ತು ಮಳೆ ಪ್ರಮಾಣದ ವಿವರದೊಂದಿಗೆ ಸಮರ್ಥ ವಾದ ಮಂಡಿಸಲು ಸರ್ಕಾರ ಸಿದ್ದತೆ ನಡೆಸಿದೆ.

ತಮಿಳುನಾಡಿಗೆ ನೀರು ಬಿಟ್ಟು ರಾಜ್ಯದ ಜನರ ಕೆಂಗೆಣ್ಣಿಗೆ ಗುರಿಯಾಗಿರೋ ಸರ್ಕಾರ ಈಗ ನೀರು ಬಿಡುವುದಿಲ್ಲ ಅನ್ನುವ ನಿರ್ಧಾರಕ್ಕೆ ಬಂದಿದೆ. ಮೇಲುಸ್ತುವಾರಿ ಸಮಿತಿ ಸಭೆಯಲ್ಲಿ ಈ ವಿಷಯವನ್ನು ಸ್ಪಷ್ಟಪಡಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್​ ಹೇಳಿದ್ದಾರೆ. ಈಗ ನಮ್ಮ ಬಳಿ ಇರುವುದು ಕೇವಲ 27 ಟಿಎಂಸಿ ನೀರು ಮಾತ್ರ. ಅದು ಕುಡಿಯುವುದಕ್ಕೆ ಮಾತ್ರ ಅಂತ ಸ್ಪಷ್ಟಪಡಿಸಿದ್ದಾರೆ.

ಇನ್ನು, ಜಲಸಂಪನ್ಮೂಲ ಸಚಿವ ಎಂ.ಬಿ.ಪಾಟೀಲ್‌ ಅವರು ಅಧಿಕಾರಿಗಳ ತಂಡದೊಂದಿಗೆ ದೆಹಲಿಯಲ್ಲೇ ಮೊಕ್ಕಾಂ ಹೂಡಿದ್ದು, ಮಂಗಳವಾರ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಮುಗಿಯುವವರೆಗೆ ಅಲ್ಲೇ ಉಳಿಯುವ ಸಾಧ್ಯತೆ ಇದೆ.

ಇನ್ನೊಂದೆಡೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಅರವಿಂದ ಜಾಧವ್‌ ಸೇರಿದಂತೆ ಕಾನೂನು ತಜ್ಞರ ತಂಡ, ನಾರಿಮನ್ ಜತೆ ಸಭೆ ನಡೆಸಿದ್ದು, ಅಗತ್ಯ ಅಂಕಿಅಂಶ ಮತ್ತು ವಾಸ್ತವ ಪರಿಸ್ಥಿತಿ ಬಗ್ಗೆ ಮಾಹಿತಿ ಒದಗಿಸುತ್ತಿದ್ದಾರೆ. ಇದರ ಜತೆಗೆ ತಮಿಳುನಾಡಿನಲ್ಲಿರುವ ವಾಸ್ತವ ಪರಿಸ್ಥಿತಿಯನ್ನೂ ಮೇಲುಸ್ತುವಾರಿ ಸಮಿತಿಗೆ ಮನವರಿಕೆ ಮಾಡಿಕೊಟ್ಟು ಕಾವೇರಿ ನದಿಯಿಂದ ತಮಿಳುನಾಡಿಗೆ ನೀರು ಬಿಟ್ಟರೆ ಕರ್ನಾಟಕ ಎದುರಿಸುವ ಸಂಕಷ್ಟ ವಿವರಿಸಲಿದ್ದಾರೆ.

ಕಾವೇರಿ ಕೊಳ್ಳದ ಮೂರನೇ ಎರಡರಷ್ಟು ಬರಪೀಡಿತ ಪ್ರದೇಶವಾಗಿದೆ. ಆದರೆ ತಮಿಳುನಾಡಿನಲ್ಲಿ ಮೂರನೇ ಒಂದರಷ್ಟು ಪ್ರದೇಶ ಮಾತ್ರ ಬರಪೀಡಿತವಾಗಿದೆ. ಇನ್ನು ಕರ್ನಾಟಕದಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕೆ ಕುಸಿದಿದೆ. ಇನ್ನೊಂದೆಡೆ ತಮಿಳುನಾಡಿನಲ್ಲಿ ಅಂತರ್ಜಲ ಮಟ್ಟ ಉತ್ತಮವಾಗಿದೆ. ಜತೆಗೆ ಕಾವೇರಿ ಕೊಳ್ಳ ವ್ಯಾಪ್ತಿಯಲ್ಲಿ ಇದುವರೆಗೆ ಬಿದ್ದಿರುವ ಮಳೆ ಪ್ರಮಾಣ ಜಲಾಶಯಗಳಲ್ಲಿ ತೀರಾ ಕೆಳಮಟ್ಟದಲ್ಲಿರುವ ನೀರು ಸಂಗ್ರಹ, ಕುಡಿಯಲು ಅಗತ್ಯವಿರುವ ನೀರು ಕೃಷಿಗೆ ಬೇಕಾದ ನೀರು ಮುಂತಾದ ಅಂಶಗಳನ್ನು ಸಮಿತಿಯ ಮುಂದಿಡಲಿದೆ.

ಕರ್ನಾಟಕ ಪಾಲಿಗೆ ನಿರ್ಣಾಯಕ

ನಾಳೆ ಕಾವೇರಿ ಮೇಲುಸ್ತುವಾರಿ ಸಮಿತಿ ಕೈಗೊಳ್ಳುವ ತೀರ್ಮಾನ ಕರ್ನಾಟಕದ ಪಾಲಿಗೆ ನಿರ್ಣಾಯಕವಾಗಿದೆ. ಯಾಕೆಂದರೆ ಸೆ.20ರವರೆಗೆ ತಮಿಳನಾಡಿಗೆ ಪ್ರತಿನಿತ್ಯ 12 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಈ ಹಿಂದೆ ಕರ್ನಾಟಕಕ್ಕೆ ಆದೇಶಿಸಿದ್ದ ಸುಪ್ರೀಂಕೋರ್ಟ್‌ ಮಂಗಳವಾರ ಮತ್ತೆ ಈ ಕುರಿತ ವಿಚಾರಣೆ ಕೈಗೆತ್ತಿಕೊಳ್ಳಲಿದ್ದು, ಸಮಿತಿ ಕೈಗೊಳ್ಳುವ ನಿರ್ಧಾರ ಆಧರಿಸಿ ಸುಪ್ರೀಂಕೋರ್ಟ್‌ ಆದೇಶ ನೀಡುವ ಸಾಧ್ಯತೆ ಇದೆ. ಒಟ್ಟಿನಲ್ಲಿ, ತನ್ನ ಪಾಲಿನ ನೀರನ್ನೂ ತಮಿಳುನಾಡಿಗೆ ಬಿಟ್ಟು ಕೈಕಟ್ಟಿ ನಿಂತಿರುವ ರಾಜ್ಯ ಸರ್ಕಾರ ಅಳಿದುಳಿದ ನೀರು ಉಳಿಸಿಕೊಳ್ಳಲು ಕೊನೆಯ ಪ್ರಯತ್ನ ನಡೆಸಿದೆ.

ವರದಿ: ಪ್ರಶಾಂತ್ ನಾತೂ, ಸುವರ್ಣ ನ್ಯೂಸ್​, ನವದೆಹಲಿ.