ಕಳ್ಳರು ಪೊಲೀಸರನ್ನು ಕಂಡರೆ ಎದ್ದೆನೋ ಬಿದ್ದೆನೋ ಎಂದು ಓಡುತ್ತಾರೆ. ಆದರೆ, ಇಲ್ಲೊಬ್ಬ ಕಳ್ಳ ಸೀದಾ ಪೊಲೀಸರ ಮನೆಗೇ ಕನ್ನ ಹಾಕುತ್ತಿದ್ದ. ಇಂಥದ್ದೊಂದು ಗೀಳು ಹತ್ತಿಸಿಕೊಂಡಿದ್ದ ಮುಂಬೈನ ಜಿಟಿಬಿ ನಗರ ನಿವಾಸಿ ಕಮಲ್‌ಜಿತ್‌ ಸಿಂಗ್‌ (20) ಎಂಬಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಮುಂಬೈ (ಜೂ. 12): ಕಳ್ಳರು ಪೊಲೀಸರನ್ನು ಕಂಡರೆ ಎದ್ದೆನೋ ಬಿದ್ದೆನೋ ಎಂದು ಓಡುತ್ತಾರೆ. ಆದರೆ, ಇಲ್ಲೊಬ್ಬ ಕಳ್ಳ ಸೀದಾ ಪೊಲೀಸರ ಮನೆಗೇ ಕನ್ನ ಹಾಕುತ್ತಿದ್ದ. ಇಂಥದ್ದೊಂದು ಗೀಳು ಹತ್ತಿಸಿಕೊಂಡಿದ್ದ ಮುಂಬೈನ ಜಿಟಿಬಿ ನಗರ ನಿವಾಸಿ ಕಮಲ್‌ಜಿತ್‌ ಸಿಂಗ್‌ (20) ಎಂಬಾತ ಈಗ ಪೊಲೀಸರ ಅತಿಥಿಯಾಗಿದ್ದಾನೆ.

Add Asianetnews Kannada as a Preferred SourcegooglePreferred

ಕಾಲಾಚೌಕೆ ಪೊಲೀಸ್‌ ಕ್ವಾರ್ಟ​ರ್‍ಸ್ನಲ್ಲಿ ಸರಣಿ ಕಳ್ಳತನ ಮಾಡುತ್ತಿದ್ದ ವೇಳೆ ಆತನನ್ನು ಮೂವರು ಪೊಲೀಸ್‌ ಕಾನ್‌ಸ್ಟೇಬಲ್‌ಗಳು ಬೆನ್ನತ್ತಿ ಹೋಗಿ ಕೋಳ ತೊಡಿಸಿದ್ದಾರೆ. ಕಮಲ್‌ಜಿತ್‌ ಸಿಂಗ್‌ ಬುಧವಾರ ಮುಂಜಾನೆ ಕಾನ್‌ಸ್ಟೇಬಲ್‌ ವಿಜಯ್‌ ಬಾನೆ ಮನೆಗೆ ನುಗ್ಗಿ 60 ಗ್ರಾಮ್‌ ಚಿನ್ನ ಮತ್ತು 2,800 ಹಣ ಕದ್ದಿದ್ದ. ಬಳಿಕ ಇನ್ನೊಬ್ಬ ಕಾನ್‌ಸ್ಟೇಬಲ್‌ ಮನೆಗೆ ನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದ. ಆದರೆ, ಅಲ್ಲಿ ಏನೂ ಸಿಗದೇ ಹಿಂದಿರುಗುತ್ತಿರುವಾಗ ಆತನನ್ನು ನೋಡಿದ ಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದರು.

ತಕ್ಷಣವೇ ಫೀಲ್ಡಿಗೆ ಇಳಿದ ಪೊಲೀಸರು ಕಳ್ಳನನ್ನು ಬಂಧಿಸಿ ಕಂಬಿಗಳ ಹಿಂದೆ ಕಳುಹಿಸಿದ್ದಾರೆ. ಪೊಲೀಸರು ಎಂಬ ಕಾರಣಕ್ಕೆ ಹೇಗೂ ಅವರ ಮನೆಯಲ್ಲಿ ಹೆಚ್ಚಿನ ಭದ್ರತೆ ಇರುವುದಿಲ್ಲ ಹಾಗೂ ಪೊಲೀಸರ ಮನೆ ಬಳಿ ಹೋದರೆ ಯಾರೂ ಅನುಮಾನ ಪಡುವುದಿಲ್ಲ ಎಂಬ ಕಾರಣಕ್ಕೆ ಆತ ಪೊಲೀಸರ ಮನೆಯನ್ನೇ ದೋಚುತ್ತಿದ್ದ. ಇದುವರೆಗೆ ಹೀಗೆ 25ಕ್ಕೂ ಹೆಚ್ಚು ಪೊಲೀಸರ ಮನೆಗೆ ಕನ್ನ ಹಾಕಿದ್ದ.