ಕಾವೇರಿ ವಿವಾದ: ಕೇಂದ್ರ ಮಧ್ಯ ಪ್ರವೇಶದ ತೆರೆಯ ಹಿಂದೆ ನಡೆದಿದ್ದೇನು?
ಬೆಂಗಳೂರು(ಅ.04): ಕೊನೆಗೂ ಕರ್ನಾಟಕದ ನೆರವಿಗೆ ಕೇಂದ್ರ ಸರ್ಕಾರ ಆಗಮಿಸಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್'ನಲ್ಲಿ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ. ಹಾಗಾದರೆ ಕೇಂದ್ರ ಮಧ್ಯ ಪ್ರವೇಶದ ತೆರೆಯ ಹಿಂದೆ ನಡೆದಿದ್ದೇನು? ಇಲ್ಲಿದೆ ವಿವರ
ಕಾವೇರಿ ವಿವಾದದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಕೇಂದ್ರ ಸರ್ಕಾರ ಕರ್ನಾಟಕದ ಪರವಾಗಿ ಗಟ್ಟಿಯಾಗಿ ನಿಂತಿದೆ. ತಡವಾಗಿಯಾದರೂ ಸರಿ ಮೋದಿ ಸರ್ಕಾರಕ್ಕೆ ಕಾವೇರಿಯನ್ನು ಕರುನಾಡಿಗೆ ಉಳಿಸಿಕೊಡಲು ಮುಂದಾಗಿದೆ. ಸುಪ್ರೀಂಕೋರ್ಟ್ನಲ್ಲಿ ಸೆಪ್ಟಂಬರ್ 30ರಂದು ಅಟಾರ್ನಿ ಜನರಲ್ ತಗೆದುಕೊಂಡ ಅತುರದ ನಿರ್ಧಾರ ಇಡೀ ರಾಜ್ಯಕ್ಕೆ ಬರಸಿಡಿಲು ಬಡಿದಂತಾಗಿತ್ತು. ಮೂರೇ ದಿನದಲ್ಲಿ ಮಂಡಳಿ ರಚಿಸುತ್ತೇವೆ ಎಂದಾಗ ಕರ್ನಾಟಕ ಹೌಹಾರಿತ್ತು. ಇನ್ನೂ ಸಂಜೆ ಹೊತ್ತಿಗೆ ಕರ್ನಾಟಕದ ಬಿಜೆಪಿ ನಾಯಕರಿಗೆ ದಿಗಿಲು ಬಡಿದಿತ್ತು. ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ದಕ್ಷಿಣದಲ್ಲಿ ಬಿಜೆಪಿ ಕಥೆ ಮುಗಿದಂತೆ ಎಂದು ಹರಿತ ಬಿಜೆಪಿ ನಾಯಕರು ಕೂಡಲೇ ಕೇಂದ್ರವನ್ನ ಮನವೊಲಿಸುವಲ್ಲಿ ಯಶಸ್ವಿಯಾದರು.
ಕೇಂದ್ರ ಮಧ್ಯ ಪ್ರವೇಶದ ತೆರೆಯ ಹಿಂದೆ ನಡೆದಿದ್ದೇನು?
-ಹಣಕಾಸು ಸಚಿವ ಅರುಣ್ ಜೇಟ್ಲಿ ಜೊತೆ ಬಿಎಸ್ವೈ, ಡಿವಿಎಸ್ ಮಾತುಕತೆ
-ಅಮಿತ್ ಷಾ, ಮೋದಿ ಭೇಟಿಯಾಗಿ ಅನಂತ್ ಕುಮಾರ್ ಮಾತುಕತೆ
-ತಮ್ಮ ನಿವಾಸದಲ್ಲಿ ಕಾವೇರಿ ಕುರಿತಾದ ಸಭೆ ಕರೆದರು ಪ್ರಧಾನಿ ಮೋದಿ
-ಕಾವೇರಿ ಕುರಿತಾದ ಸಭೆಯಲ್ಲಿ ಜೇಟ್ಲಿ, ಅನಂತ್ ಕುಮಾರ್, ಉಮಾಭಾರತಿ ಜೊತೆ ಚರ್ಚೆ
-ಎಲ್ಲವನ್ನು ಆಲಿಸಿದ ಬಳಿಕ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಕರೆಸಿದ ಪ್ರಧಾನಿ
-ಅಟಾರ್ನಿ ಜನರಲ್ ಅವರಿಗೆ ಮಾರ್ಪಾಡು ಅರ್ಜಿ ಸಲ್ಲಿಸಲು ಪ್ರಧಾನಿ ಮೋದಿ ಆದೇಶ
-ಶನಿವಾರ ಉಪವಾಸ ಧರಣಿ ಕುಳಿತಿದ್ದ ದೇವೇಗೌಡರನ್ನ ಭೇಟಿಯಾದ ಬಿಜೆಪಿ ನಾಯಕರು
-ಕೇಂದ್ರದ ನಿಲುವನ್ನು ವಿವರಿಸಿ ಭರವಸೆ ನೀಡಿದ ಬಳಿಕ ಸತ್ಯಾಗ್ರಹ ಹಿಂಪಡೆದ ದೇವೇಗೌಡ್ರು
-ಕೇಂದ್ರದ ನಿಲುವಿನ ಬಗ್ಗೆ ಶನಿವಾರವೇ ಗೊತ್ತಿದ್ದರೂ ಗೌಪ್ಯತೆ ಕಾಯ್ದುಕೊಂಡ ರಾಜ್ಯದ ನಾಯಕರು
ಕಾವೇರಿ ನಿರ್ವಹಣಾ ಮಂಡಳಿ ರಚನೆಯಾದರೆ ದಕ್ಷಿಣ ಕರ್ನಾಟಕದಲ್ಲಿ ಬಿಜೆಪಿ ಕಥೆ ಮುಗಿಯುತ್ತದೆ. ನೀವು ಏನಾದರೂ ಮಾಡಲೇಬೇಕು ಎಂದು ಅರುಣ್ ಜೈಟ್ಲಿ ಅವರಿಗೆ ಬಿಎಸ್ವೈ ಡಿವಿಎಸ್ ಅಲವತ್ತುಕೊಳ್ಳತೊಡಗಿದ್ದರು. ಇನ್ನೊಂದೆಡೆ ಕೇಂದ್ರ ಸಚಿವ ಅನಂತ್ ಕುಮಾರ್, ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ, ಬಳಿಕ ಪ್ರಧಾನಿಯನ್ನ ಭೇಟಿಯಾಗಿ ಸಮಸ್ಯೆ ವಿವರಿಸಿದ್ದರು. ಬಳಿಕ ಪ್ರಧಾನಿ ಮೋದಿ ತಮ್ಮ ನಿವಾಸದಲ್ಲಿ ಕಾವೇರಿ ಕುರಿತಾದ ಸಭೆ ಕರೆದು ಅಲ್ಲಿ ಅರುಣ್ ಜೇಟ್ಲಿ, ಅನಂತ್ ಕುಮಾರ್, ಜಲಸಂಪನ್ಮೂಲ ಸಚಿವೆ ಉಮಾಭಾರತಿ ಜೊತೆ ಸಾಧಕ ಬಾಧಕಗಳು ಹಾಗೂ ಕೇಂದ್ರ ಏನು ಮಾಡಬಹುದು ಎಂಬುದರ ಬಗ್ಗೆ ಚರ್ಚಿಸಿದ್ದರು. ಎಲ್ಲವನ್ನು ಆಲಿಸಿದ ಬಳಿಕ ಅಟಾರ್ನಿ ಜನರಲ್ ಮುಕುಲ್ ರೋಹಟಗಿ ಕರೆಸಿ ಮಾರ್ಪಾಡು ಅರ್ಜಿ ಸಲ್ಲಿಸಲು ಆದೇಶಸಿದ್ದರು. ದೆಹಲಿಯಲ್ಲಿ ಇಷ್ಟೆಲ್ಲ ನಡೆಯುತ್ತಿರುವಾಗಲೇ ಇತ್ತ ಮಾಜಿ ಪ್ರಧಾನಿ ದೇವೇಗೌಡ್ರು ಶನಿವಾರ ಬೆಳಗ್ಗೆಯಿಂದಲೇ ಉಪವಾಸ ಧರಣಿ ಕೂಳಿತ್ತಿದ್ದು, ಬಳಿಕ ರಾತ್ರಿ ದೇವೇಗೌಡರನ್ನು ಬಿಜೆಪಿ ನಾಯಕರು ಭೇಟಿ, ಕೇಂದ್ರದ ನಿಲುವನ್ನು ತಿಳಿಸಿ ಭರವಸೆ ನೀಡಿದರು. ಹೀಗಾಗಿ ದೇವೇಗೌಡ್ರು ಉಪವಾಸ ಅಂತ್ಯಗೊಳಿಸಿದರು. ಕೇಂದ್ರದ ನಿಲುವಿನ ಬಗ್ಗೆ ಶನಿವಾರವೇ ರಾಜ್ಯದ ಪ್ರಮುಖ ನಾಯಕರಿಗೆ ಗೊತ್ತಿದ್ದರೂ, ತಮಿಳುನಾಡು ತಗಾದೆ ತೆಗೆಯಬಹುದೆಂದು ಹರಿತು ಗೌಪ್ಯತೆ ಕಾಯ್ದುಕೊಂಡಿದ್ದರು.ಈ ಮೂಲಕ ಆಕ್ರೋಶಿತಗೊಂಡಿದ್ದ ರಾಜ್ಯದ ಜನತೆಗೆ ಕೇಂದ್ರವೇ ಖುದ್ದಾಗಿ ಅರ್ಜಿ ಸಲ್ಲಿಸಿ ಮುಲಾಮು ಹಚ್ಚುವ ಪ್ರಯತ್ನ ಮಾಡಿದೆ.
ಇನ್ನು ಸುಪ್ರೀಂ ಕೋರ್ಟ್ ನಲ್ಲಿ ನಿನ್ನೆ ಕೇಂದ್ರದ ಯು ಟರ್ನ್ ನೋಡಿ ಎಲ್ಲರೂ ಆಶ್ಚರ್ಯ ಚಕಿತರಾಗಿದ್ದರು. ಮಂಡಳಿ ರಚನೆ ಆದೇಶ ಮಾರ್ಪಾಡು ಕೋರಿ ಕೇಂದ್ರದಿಂದ ಸುಪ್ರೀಂ ಕೋರ್ಟ್'ಗೆ ಅರ್ಜಿ ಸಲ್ಲಿಸಿದ್ದು, ಮಂಡಳಿ ರಚಿಸುವಂತೆ ಆದೇಶಿಸುವ ಅಧಿಕಾರ ಸುಪ್ರೀಂಕೋರ್ಟ್ಗೆ ಇಲ್ಲ. ಬದಲಾಗಿ ಈ ಅಧಿಕಾರ ಕೇವಲ ಸಂಸತ್ತಿಗೆ ಮಾತ್ರ ಇದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದಾರೆ.
ಕೇಂದ್ರದ ಮಾರ್ಪಾಡು ಅರ್ಜಿ ವಿಚಾರಣೆಗೆ ಅಂಗೀಕರಿಸಿದ ಸುಪ್ರೀಂಕೋರ್ಟ್ ಇಂದು ಮಧ್ಯಾಹ್ನ 2 ಗಂಟೆಗೆ ಅರ್ಜಿ ವಿಚಾರಣೆ ನಡೆಸಲಿದೆ. ಆದರೆ, ಕೇಂದ್ರ ಸರ್ಕಾರ ಸಲ್ಲಿಸಿರುವ ಈ ಅರ್ಜಿ ವಿಚಾರಣೆಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದೆ.