ಸೋನಿಯಾ ಲೆಕ್ಕ ಪಕ್ಕಾನಾ?: ಅವಿಶ್ವಾಸ ಗೆದ್ರೆ ಯುಪಿಎ ಸರ್ಕಾರ?
ಅವಿಶ್ವಾಸ ನಿರ್ಣಯಕ್ಕೆ ಸೋನಿಯಾ ಲೆಕ್ಕಾಚಾರವೇನು?
ವಿ ಹ್ಯಾವ್ ನಂಬರ್ಸ್ ಅನ್ತಿರೋದು ಯಾತಕ್ಕಾಗಿ?
ವಾಜಪೇಯಿ ಸರ್ಕಾರ ಉರುಳಿಸುವಲ್ಲಿ ವಿಫಲವಾಗಿದ್ದ ಸೋನಿಯಾ
ನಾಳಿನ ಅವಿಶ್ವಾಸ ನಿರ್ಣಯ ಮಂಡನೆ ಗತಿಯೂ ಇದೆ?
ಸೋನಿಯಾ ಗಾಂಧಿ ಲೆಕ್ಕದಲ್ಲಿ ಚುರುಕಿಲ್ಲವೇ?
ನವದೆಹಲಿ(ಜೂ.19): ನಮ್ ಹತ್ರ ನಂಬರ್ಸ್ ಇಲ್ಲಾ ಅಂತಾ ಯಾರ್ರಿ ನಿಮಗೆ ಹೇಳಿದ್ದು?. ಇದು 1999 ರಲ್ಲಿ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರ್ಕಾರದ ವಿರುದ್ಧ, ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದ ವೇಳೆ ಅಂದಿನ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಡಿದ್ದ ಮಾತು.
ನಾಳೆ ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಯಾಗಲಿದೆ. ಈ ಸಂದರ್ಭದಲ್ಲಿ ಸರ್ಕಾರದ ವಿರುದ್ಧ ಗೆಲುವು ಸಾಧಿಸಲು ನಮ್ಮ ಬಳಿ ಅಗತ್ಯ ಸಂಖ್ಯಾಬಲವಿದೆ ಎಂದು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಹೇಳಿದ್ದಾರೆ. ಇದು ಸೋನಿಯಾ 1999 ರಲ್ಲಿ ಆಡಿದ್ದ ಮಾತುಗಳನ್ನು ನೆನಪಿಗೆ ತಂದಿದೆ.
ಮಾಜಿ ಪ್ರಧಾನಿ ವಾಜಪೇಯಿ ಸರ್ಕಾರದ ವಿರುದ್ಧ ಅಂದೂ ಕೂಡ ವಿರೋಧ ಪಕ್ಷಗಳೆಲ್ಲಾ ಒಗ್ಗೂಡಿದ್ದವು. ಈ ಹಿನ್ನೆಲೆಯಲ್ಲಿ ಲೋಕಸಭೆಯಲ್ಲಿ ವಾಜಪೇಯಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ನಮ್ಮ ಬಳಿ ಅಗತ್ಯ ಸಂಖ್ಯಾಬಲವಿದೆ ಎಂದು ಸೋನಿಯಾ ಘೋಷಿಸಿದ್ದರು. ಅಲ್ಲದೇ 272 ಸಂಸದರ ಬೆಂಬಲದ ಜೊತೆಗೆ ಸರ್ಕಾರ ರಚಿಸುವುದಾಗಿಯೂ ಸೋನಿಯಾ ಸಾರಿದ್ದರು.
ಆದರೆ ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿ ವಾಜಪೇಯಿ ಅಧಿಕಾರದಲ್ಲಿ ಮುಂದುವರೆದಿದ್ದರು. ಈಗಲೂ ಸರಿಸುಮಾರು ಅಂತದ್ದೇ ಸನ್ನಿವೇಶ ನಿರ್ಮಾಣವಾಗಿದೆ. ನರೇಂದ್ರ ಮೋದಿ ಸರ್ಕಾರದ ವಿರುದ್ಧ ಸದನ ವಿಶ್ವಾಸ ಕಳೆದುಕೊಂಡಿದೆ ಎಂದು ಹುಯಿಲೆಬ್ಬಿಸಿರುವ ವಿರೋಧ ಪಕ್ಷಗಳು, ನಾಳೆ ಅವಿಶ್ವಾಸ ನಿರ್ಣಯ ಮಂಡನೆಗೆ ಸಜ್ಜಾಗಿವೆ.
ಕಾಂಗ್ರೆಸ್ ಸೇರಿದಂತೆ ಹಲವು ವಿರೋಧ ಪಕ್ಷಗಳು ಮತ್ತು ಸಣ್ಣಪುಟ್ಟ ಪ್ರಾದೇಶಿಕ ಪಕ್ಷಗಳು ಮೋದಿ ಸರ್ಕಾರದ ಒಗ್ಗೂಡಿವೆ. ಈ ಹಿನ್ನೆಲೆಯಲ್ಲಿ ಸೋನಿಯಾ ಮತ್ತೆ ಅಗತ್ಯ ಸಂಖ್ಯಾಬಲದ ಕುರಿತು ವಿಶ್ವಾಸ ಹೊಂದಿದ್ದಾರೆ. ನಾಳಿನ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಎನ್ಡಿಎ ಸರ್ಕಾರಕ್ಕೆ ಒಟ್ಟು ೨೬೮ ಸದಸ್ಯರ ಬೆಂಬಲದ ಅವಶ್ಯಕತೆ ಇದೆ. ಸದ್ಯ ಎನ್ಡಿಎ ಸದಸ್ಯರ ಸಂಖ್ಯಾಬಲ 314 ಆಗಿದ್ದು, ಸ್ಪೀಕರ್ ಹೊರತುಪಡಿಸಿ ಬಿಜೆಪಿ ಸದಸ್ಯರೆ ಸಂಖ್ಯೆ 273.
ಈ ಸನ್ನಿವೇಶದಲ್ಲಿ ಸೋನಿಯಾ ಯಾವ ಆಧಾರದ ಮೇಲೆ ತಮಗೆ ಸಂಖ್ಯಾಬಲವಿದೆ ಎಂದು ಹೇಳುತ್ತಿದ್ದಾರೆ ಎಂಬುದು ಭಾರೀ ಕುತೂಹಲ ಮೂಡಿಸಿದೆ. ಈ ಕುರಿತು ಮಾತನಾಡಿರುವ ಕೇಂದ್ರ ಸಚಿವ ಅನಂತ್ ಕುಮಾರ್, ಸೋನಿಯಾ ಗಣಿತದಲ್ಲಿ ಚುರುಕಿಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಅವಿಶ್ವಾಸ ನಿರ್ಣಯಕ್ಕೆ ಹೀನಾಯ ಸೋಲಾಗಲಿದ್ದು, ಸೋನಿಯಾ ಅವರ ಗಣಿತ ಲೆಕ್ಕಾಚಾರ ಮತ್ತೊಮ್ಮೆ ತಲೆಕೆಳಗಾಗಲಿದೆ ಎಂದು ಅನಂತ್ ಕುಮಾರ್ ನುಡಿದಿದ್ದಾರೆ.
ಎನ್ಡಿಎ ಸರ್ಕಾರ ನಾಳಿನ ಅವಿಶ್ವಾಸ ನಿರ್ಣಯ ಮಂಡನೆ ವೇಳೆ ಸುಮಾರು 70 ಸಂಸದರು ಗೈರಾಗಲಿದ್ದಾರೆ ಎಂಬ ವಿಶ್ವಾಸ ಹೊಂದಿದೆ. ಪ್ರಮುಖವಾಗಿ ಎಐಎಡಿಎಂಕೆ(37), ಬಿಜೆಡಿ(20), ಟಿಆರ್ ಎಸ್(11), ಐಎನ್ ಎಲ್ಡಿ(2) ಸಂಸದರು ಗೈರಾಗುವ ಮೂಲಕ ಅಥವಾ ಮತದಾನ ಮಾಡದೇ ಇರುವ ಮೂಲಕ ಅವಿಶ್ವಾಸ ನಿರ್ಣಯ ಬಿದ್ದು ಹೋಗಲಿದೆ ಎಂಬುದು ಬಿಜೆಪಿ ಲೆಕ್ಕಾಚಾರ.