Asianet Suvarna News Asianet Suvarna News

ಟೆಕಿ ಬಾಂಬರ್ ಭಾರತದ ಬಿನ್ ಲಾಡೆನ್ ಸೆರೆ

ಹತ್ತು ವರ್ಷಗಳ ಹಿಂದೆ 56 ಮಂದಿಯನ್ನು ಬಲಿ ಪಡೆದಿದ್ದ ಗುಜರಾತ್ ಸರಣಿ ಸ್ಫೋಟ ಪ್ರಕರಣದ ರೂವಾರಿ, ‘ಭಾರತದ ಬಿನ್ ಲಾಡೆನ್’ ಕುಖ್ಯಾತಿಯ ಭಯೋತ್ಪಾದಕ ಅಬ್ದುಲ್ ಸುಭಾನ್ ಖುರೇಷಿಯನ್ನು ದೆಹಲಿ ಪೊಲೀಸರು ಗುಂಡಿನ ಚಕಮಕಿ ನಡೆಸಿ ಬಂಧಿಸಿದ್ದಾರೆ. 2014ರ ಡಿ.28ರಂದು ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಸಂಭವಿಸಿದ್ದ ಹಾಗೂ ಮಹಿಳೆಯೊಬ್ಬರ ಸಾವಿಗೆ ಕಾರಣವಾಗಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲೂ ಈತನ ಕೈವಾಡವಿದೆ ಎಂದು ಹೇಳಲಾಗಿದೆ.

Terrorist Arrest In Delhi

ನವದೆಹಲಿ: ಹತ್ತು ವರ್ಷಗಳ ಹಿಂದೆ 56 ಮಂದಿಯನ್ನು ಬಲಿ ಪಡೆದಿದ್ದ ಗುಜರಾತ್ ಸರಣಿ ಸ್ಫೋಟ ಪ್ರಕರಣದ ರೂವಾರಿ, ‘ಭಾರತದ ಬಿನ್ ಲಾಡೆನ್’ ಕುಖ್ಯಾತಿಯ ಭಯೋತ್ಪಾದಕ ಅಬ್ದುಲ್ ಸುಭಾನ್ ಖುರೇಷಿಯನ್ನು ದೆಹಲಿ ಪೊಲೀಸರು ಗುಂಡಿನ ಚಕಮಕಿ ನಡೆಸಿ ಬಂಧಿಸಿದ್ದಾರೆ. 2014ರ ಡಿ.28ರಂದು ಬೆಂಗಳೂರಿನ ಚರ್ಚ್‌ಸ್ಟ್ರೀಟ್‌ನಲ್ಲಿ ಸಂಭವಿಸಿದ್ದ ಹಾಗೂ ಮಹಿಳೆಯೊಬ್ಬರ ಸಾವಿಗೆ ಕಾರಣವಾಗಿದ್ದ ಬಾಂಬ್ ಸ್ಫೋಟ ಪ್ರಕರಣದಲ್ಲೂ ಈತನ ಕೈವಾಡವಿದೆ ಎಂದು ಹೇಳಲಾಗಿದೆ.

ದೆಹಲಿಯ ಗಾಜಿಪುರ ಪ್ರದೇಶದಲ್ಲಿ ಶನಿವಾರ ಸಂಜೆ ಪೊಲೀಸರು ಈತನನ್ನು ಬಂಧಿಸಿದ್ದಾರೆ. ಗಣರಾಜ್ಯೋತ್ಸವಕ್ಕೆ ಕೆಲವೇ ದಿನಗಳಿರುವಾಗ ಪೊಲೀಸರು ನಡೆಸಿರುವ ಈ ಕಾರ್ಯಾಚರಣೆ ಅತ್ಯಂತ ಮಹತ್ವದ್ದಾಗಿದೆ. ಈತನನ್ನು ಸೋಮವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಈ ವೇಳೆ ಆತನನ್ನು 14 ದಿನ ಪೊಲೀಸರ ವಶಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿತು.

ಟೆಕ್ಕಿ ಬಾಂಬರ್: ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಖುರೇಷಿ (46), ಬಾಂಬ್ ತಯಾರಿಕೆ ಕಲೆ ಸಿದ್ಧಿಸಿಕೊಳ್ಳುವ ಮೂಲಕ ‘ಟೆಕಿ ಬಾಂಬರ್’ ಎಂಬ ಕುಖ್ಯಾತಿಯನ್ನೂ ಗಳಿಸಿ ಕರ್ನಾಟಕದ ಕರಾವಳಿ ಪಟ್ಟಣ ಭಟ್ಕಳ ಮೂಲದ ಸಹೋದರರು ಹುಟ್ಟುಹಾಕಿದ ಇಂಡಿಯನ್ ಮುಜಾಹಿದೀನ್ ಉಗ್ರ ಸಂಘಟನೆಯ ಸಹಸಂಸ್ಥಾಪಕನಲ್ಲಿ ಒಬ್ಬ ನಾಗಿದ್ದ. ನಿಷೇಧಿತ ಸಿಮಿ ಸಂಘಟನೆಯಲ್ಲೂ ಈತ ಗುರುತಿಸಿಕೊಂಡಿದ್ದ. ದೆಹಲಿಯ ಗಾಜಿಪುರದಲ್ಲಿರುವ ತನ್ನ ಹಳೆಯ ಬಂಟನೊಬ್ಬನನ್ನು ಭೇಟಿ ಮಾಡಲು ಈತ ಬರುತ್ತಿದ್ದಾನೆ ಎಂಬ ಖಚಿತ ವರ್ತಮಾನ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಈ ವೇಳೆ ಅಲ್ಪ ಪ್ರಮಾಣದ ಗುಂಡಿನ ಚಕಮಕಿ ನಡೆದಿದೆ. ಖುರೇಷಿಯಿಂದ ಪಿಸ್ತೂಲ್ ಹಾಗೂ ಕೆಲವೊಂದು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದೆಹಲಿ ಉಪಪೊಲೀಸ್ ಆಯುಕ್ತ ಪಿ.ಎಸ್. ಕುಶ್ವಾಹಾ ತಿಳಿಸಿದ್ದಾರೆ. 

ಸಿಮಿ ಸಂಘಟನೆ ಹೊರತರುತ್ತಿದ್ದ ನಿಯತಕಾಲಿಕೆಯ ಸಂಪಾದಕನಾಗಿದ್ದ ಈತ, 2008ರ ಜು.26ರಂದು ಗುಜರಾತಿನ ಅಹಮದಾಬಾದ್ ಹಾಗೂ ಸೂರತ್‌ನಲ್ಲಿ ಸಂಭವಿಸಿದ್ದ ಸ್ಫೋಟ ಪ್ರಕರಣದ ರೂವಾರಿಯಾಗಿದ್ದ. ಟಿಫಿನ್ ಕ್ಯಾರಿಯರ್, ಮೋಟರ್ ಸೈಕಲ್‌ಗಳಲ್ಲಿ 21 ಬಾಂಬ್‌ಗಳನ್ನು ಹುದುಗಿಸಿಟ್ಟು, ಅದನ್ನು ದಟ್ಟಣೆಯ ಮಾರುಕಟ್ಟೆ, ಬಸ್ ನಿಲ್ದಾಣ ಹಾಗೂ ಆಸ್ಪತ್ರೆಗಳಲ್ಲಿ ಸ್ಫೋಟಿಸಿದ್ದ. ಮೂರು ಮಕ್ಕಳ ತಂದೆಯಾಗಿರುವ ಖುರೇಷಿ ನಕಲಿ ದಾಖಲೆ ಬಳಸಿ ನೇಪಾಳಕ್ಕೆ ಹೋಗಿ ಅಲ್ಲೇ ಕೆಲ ವರ್ಷ ವಾಸಿಸಿದ್ದ.

2013ರಿಂದ 2015ರವರೆಗೆ ಸೌದಿ ಅರೇಬಿಯಾದಲ್ಲಿ ತಂಗಿದ್ದ. ಭಯೋತ್ಪಾದಕ ಜಾಲವನ್ನು ಮರು ಸಂಘಟಿಸಲು ಭಾರತಕ್ಕೆ ಮರಳಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದೇಶದ ಮೋಸ್ಟ್ ವಾಂಟೆಡ್ ಭಯೋತ್ಪಾದಕರಲ್ಲಿ ಒಬ್ಬನಾಗಿದ್ದ ಈತ 2014ರ ಬೆಂಗಳೂರು, 2010ರ ಮುಂಬೈ ಸರಣಿ ಸ್ಫೋಟ ಹಾಗೂ 2006ರಲ್ಲಿ ಮುಂಬೈ ಲೋಕಲ್ ರೈಲುಗಳಲ್ಲಿ ನಡೆದ ಸ್ಫೋಟದ ಸಂಚುಗಾರ ಎಂದು ರಾಷ್ಟ್ರೀಯ ತನಿಖಾ ದಳ ಪರಿಗಣಿಸಿತ್ತು.

ಖುರೇಷಿ ಪೋಷಕರು ಮೂಲತಃ ಉತ್ತರಪ್ರದೇಶದವರು. ಉದ್ಯೋಗ ಅರಸಿ ಮುಂಬೈಗೆ ಬಂದಿದ್ದರು. ಅಲ್ಲೇ ಎಂಜಿನಿಯರಿಂಗ್ ವ್ಯಾಸಂಗ ಮುಗಿಸಿ, ಸಾಫ್ಟ್‌ವೇರ್ ಕಂಪನಿ ಸೇರಿದ್ದ ಖುರೇಷಿ ಬಳಿಕ ಭಯೋತ್ಪಾದಕನಾಗಿದ್ದ ಎಂದು ವರದಿಗಳು ತಿಳಿಸಿವೆ.

Follow Us:
Download App:
  • android
  • ios