ಮುಸ್ಲಿಮರು ಐಸಿಸ್ ಸೇರಲು ತೆಲಂಗಾಣ ಪೊಲೀಸರ ಪ್ರಚೋದನೆ
ದಿಗ್ವಿಜಯ ಆರೋಪವನ್ನು ತೆಲಂಗಾಣ ಸರ್ಕಾರ ನಿರಾಕರಿಸಿದೆ. ‘ಜವಾಬ್ದಾರಿಯುತ ಹಿರಿಯ ನಾಯಕರು ಇಂಥ ಆಧಾರ ರಹಿತ ಆರೋಪಗಳನ್ನು ಮಾಡುವುದರಿಂದ, ರಾಷ್ಟ್ರ ವಿರೋಧಿ ಶಕ್ತಿಗಳೊಂದಿಗೆ ಹೋರಾಡುವಲ್ಲಿ ನಿರತರಾದ ಪೊಲೀಸರ ಘನತೆ ಮತ್ತು ನೈತಿಕತೆಗೆ ಧಕ್ಕೆಯುಂಟು ಮಾಡುತ್ತದೆ' ಎಂದು ತೆಲಂಗಾಣ ಡಿಜಿಪಿ ತಿಳಿಸಿದ್ದಾರೆ.
ನವದೆಹಲಿ/ ಹೈದರಾಬಾದ್: ತೆಲಂಗಾಣ ಪೊಲೀಸರು ಭಯೋತ್ಪಾದನಾ ಸಂಘಟನೆಯ ಹೆಸರಲ್ಲಿ ನಕಲಿ ವೆಬ್ಸೈಟ್ ತೆರೆದು ಮುಸ್ಲಿಂ ಯುವಕರು ಇಸ್ಲಾಮಿಕ್ ಸ್ಟೇಟ್ (ಐಸಿಸ್) ಸೇರುವುದಕ್ಕೆ ಪ್ರಚೋ ದನೆ ನೀಡುತ್ತಿದ್ದಾರೆ. ಅವರನ್ನು ಉಗ್ರವಾದಿಗಳನ್ನಾಗಿಸುತ್ತಿದ್ದಾರೆ ಎಂದು ತೆಲಂಗಾಣ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್ ಸಿಂಗ್ ಆರೋಪ ಮಾಡಿದ್ದಾರೆ.
ಕೂಡಲೇ ದಿಗ್ವಿಜಯ ಆರೋಪವನ್ನು ತೆಲಂಗಾಣ ಸರ್ಕಾರ ನಿರಾಕರಿಸಿದೆ. ‘ಜವಾಬ್ದಾರಿಯುತ ಹಿರಿಯ ನಾಯಕರು ಇಂಥ ಆಧಾರ ರಹಿತ ಆರೋಪಗಳನ್ನು ಮಾಡುವುದರಿಂದ, ರಾಷ್ಟ್ರ ವಿರೋಧಿ ಶಕ್ತಿಗಳೊಂದಿಗೆ ಹೋರಾಡುವಲ್ಲಿ ನಿರತರಾದ ಪೊಲೀಸರ ಘನತೆ ಮತ್ತು ನೈತಿಕತೆಗೆ ಧಕ್ಕೆಯುಂಟು ಮಾಡುತ್ತದೆ' ಎಂದು ತೆಲಂಗಾಣ ಡಿಜಿಪಿ ತಿಳಿಸಿದ್ದಾರೆ. ಇನ್ನೊಂದೆಡೆಯಲ್ಲಿ ‘ದಿಗ್ವಿಜಯ್ ಸಿಂಗ್ ತಮ್ಮ ಈ ಹೇಳಿಕೆಗೆ ಕ್ಷಮೆ ಯಾಚಿಸಬೇಕು. ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ' ಎಂದು ಟಿಆರ್ಎಸ್ ಸಂಸದ ಜಿತೇಂದರ್ ರೆಡ್ಡಿ ಹೇಳಿದ್ದಾರೆ. ಕೇಂದ್ರ ಸಚಿವ ವೆಂಕಯ್ಯ ನಾಯ್ಡು ಕೂಡ ದಿಗ್ವಿ ಹೇಳಿಕೆ ತಳ್ಳಿಹಾಕಿದ್ದಾರೆ.
ದಿಗ್ವಿಜಯ ಟ್ವೀಟ್ ಏನು?: ಮುಸ್ಲಿಂ ಯುವಕರನ್ನು ಸೆಳೆಯಲು ತೆಲಂಗಾಣ ಪೊಲೀಸರು ವೆಬ್ಸೈಟ್ ತೆರೆದಿದ್ದಾರೆ. ಅವರನ್ನು ಐಸಿಸ್ನ ಸ್ವತಂತ್ರ ಘಟಕಗಳಾಗುವಂತೆ ಮತ್ತು ಉಗ್ರವಾದಿಗಳಾಗುವಂತೆ ಮಾಡಲಾಗುತ್ತಿದೆ. ತೆಲಂಗಾಣ ಸಿಎಂ ಚಂದ್ರಶೇಖರ ರಾವ್ ಇದಕ್ಕೆ ಪೊಲೀಸರಿಗೆ ಅನುಮತಿ ನೀಡಿದ್ದಾರೆಯೇ?