ಕಾಂಗ್ರೆಸ್ ಮುಖಂಡ ಅರೆಸ್ಟ್
ಮಂಗಳವಾರ ಬೆಳ್ಳಂಬೆಳಗ್ಗೆ ಕಾಂಗ್ರೆಸ್ ಮುಖಂಡರನ್ನು ಅರೆಸ್ಟ್ ಮಾಡಲಾಗಿದೆ. ಮುಂಜಾನೆ ಮೂರು ಗಂಟೆ ಸುಮಾರಿಗೆ ತೆಲಂಗಾಣದ ಕಾಂಗ್ರೆಸ್ ಮುಖ್ಯಸ್ಥರ ರೇವಂತ್ ರೆಡ್ಡಿ ಮನೆಗೆ ನುಗ್ಗಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಹೈದ್ರಾಬಾದ್ : ದೇಶದ ಪಂಚ ರಾಜ್ಯಗಳಲ್ಲಿ ಚುನಾವಣಾ ಕಾವು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ತೆಲಂಗಾಣದಲ್ಲಿಯೂ ಇನ್ನೆರಡು ದಿನಗಳಲ್ಲಿ ಚುನಾವಣೆ ನಡೆಯುತ್ತಿದೆ.
ಇದೇ ವೇಳೆ ತೆಲಂಗಾಣ ಕಾಂಗ್ರೆಸ್ ಮುಖಂಡ ರೇವಂತ್ ರೆಡ್ಡಿಯನ್ನು ಪೊಲೀಸರು ಮಂಗಳವಾರ ಬೆಳ್ಳಂಬೆಳಗ್ಗೆ ಅರೆಸ್ಟ್ ಮಾಡಿದ್ದಾರೆ. ಕೊಡಂಗಲ್ ನಿವಾಸದಿಂದಲೇ ಬೆಳಗ್ಗೆ 3 ಗಂಟೆ ಸುಮಾರಿಗೆ ರೆಡ್ಡಿ ಬಂಧಿಸಲಾಗಿದೆ.
ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ರ್ಯಾಲಿ ಕೊಡಂಗಲ್ ನಲ್ಲಿ ನಡೆಯಲಿದ್ದು, ಈ ರ್ಯಾಲಿ ವೇಳೆ ಪ್ರತಿಭಟನೆ ನಡೆಸಲು, ಸಭೆ ಬಹಿಷ್ಕರಿಸಲು ಕರೆ ನೀಡಿದ್ದ ನಿಟ್ಟಿನಲ್ಲಿ ಬಂಧಿಸಲಾಗಿದೆ.
ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ರೆಡ್ಡಿ ಮನೆಗೆ ತೆರಳಿ ಬಾಗಿಲನ್ನು ಮುರಿದು ಒಳನುಗ್ಗಿ ಬಂಧಿಸಲಾಗಿದ್ದು, ಇದೇ ವೇಳೆ ರೆಡ್ಡಿ ಮನೆಯಲ್ಲಿ ಅನೇಕ ಶಾಸಕರೂ ಕೂಡ ಇದ್ದರು ಎನ್ನಲಾಗಿದೆ.
ರೆಡ್ಡಿ ನಿವಾಸದಲ್ಲಿ ಪೊಲೀಸರು ಹಾಗೂ ಕಾಂಗ್ರೆಸ್ ಮುಖಂಡರಿಗೆ ಮಾತಿನ ಚಕಮಕಿ ನಡೆದಿದ್ದು, ಚುನಾವಣಾ ಆಯೋಗದ ಆದೇಶದ ಮೇರೆಗೆ ಬಂಧಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಡಿಸೆಂಬರ್ 7 ರಂದು ತೆಲಂಗಾಣದಲ್ಲಿ ಚುನಾವಣೆ ನಡೆಯುತ್ತಿದ್ದು 11 ರಂದು ಫಲಿತಾಂಶ ಪ್ರಕಟವಾಗಲಿದೆ.