ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿ ತೇಜ್ ಪ್ರತಾಪ್ ವಾರಣಾಸಿಗೆ ತೆರಳಿದ್ದೇಕೆ..?
ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ವಾರಣಾಸಿಗೆ ತೆರಳಿದ್ದಾರೆ.
ಪಾಟ್ನಾ : ಆರ್ ಜೆಡಿ ಮುಖಂಡ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್ ಯಾದವ್ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ನಾಪತ್ತೆಯಾಗಿದ್ದು, ಎಲ್ಲೆಡೆ ಸುದ್ದಿಯಾಗಿತ್ತು.
ಇದೀಗ ನಾಪತ್ತೆಯಾದ ತೇಜ್ ಪ್ರತಾಪ್ ವಾರಣಾಸಿಯಲ್ಲಿ ಪತ್ತೆಯಾಗಿದ್ದಾರೆ. ಶಾಂತಿ ಬಯಸಿ ವಾರಣಾಸಿಗೆ ತೆರಳಿದ್ದಾರೆ ಎನ್ನಲಾಗಿದೆ.
ಕಳೆದ ಮೇ ತಿಂಗಳಿನಲ್ಲಷ್ಟೇ ವಿವಾಹವಾಗಿದ್ದ ತೇಜ್ ಪ್ರತಾಪ್ ಪತ್ನಿ ಐಶ್ವರ್ಯ ಜೊತೆ ಮನಸ್ತಾಪವಾಗಿದ್ದು, ಈ ನಿಟ್ಟಿನಲ್ಲಿ ತಾವು ವಿಚ್ಛೇದನ ಬಯಸುತ್ತಿರುವುದಾಗಿ ತಿಳಿಸಿದ್ದರು. ಇದಾದ ಬಳಿಕ ತಂದೆ ಲಾಲೂ ಪ್ರಸಾದ್ ಯಾದವ್ ಅವರು ಮಗನ ಮನವೊಲಿಸಲು ಪ್ರಯತ್ನಿಸಿದ್ದರು.
ಆದರೆ ತಂದೆಯೊಡನೆ ಮಾತುಕತೆ ನಡೆದ ಬಳಿಕ ತೇಜ್ ಪ್ರತಾಪ್ ಬೋದ್ ಗಯಾದ ಹೋಟೆಲ್ ನಲ್ಲಿ ತಂಗುವುದಾಗಿ ತೆರಳಿದ್ದವರು ಅಲ್ಲಿಂದಲೇ ನಾಪತ್ತೆಯಾಗಿದ್ದರು.
ಮನೆಯಲ್ಲಿ ದೀಪಾವಳಿ ಹಬ್ಬವಿದ್ದರೂ ಕೂಡ ಮನೆಗೆ ವಾಪಸಾಗದೇ ತೇಜ್ ಪ್ರತಾಪ್ ವಾರಣಾಸಿಗೆ ತೆರಳಿದ್ದಾರೆ. ಸಂಪೂರ್ಣ ಕುಟುಂಬವೇ ಇದೀಗ ತೇಜ್ ಪ್ರತಾಪ್ ಆಗಮನಕ್ಕಾಗಿ ಕಾಯುತ್ತಿದ್ದಾರೆ.