ಬಿಜೆಪಿ ವಿರುದ್ಧ ಟಿಡಿಪಿ ‘ಸಮರ’?
- ಕಾದು ನೋಡುವುದು, ಪಕ್ಷದ ಸಂಸದರು ರಾಜಿನಾಮೆ ನೀಡುವುದು ಅಥವಾ ಮೈತ್ರಿಕೂಟದಿಂದ ಹೊರಬರುವುದು.
- ಭಾನುವಾರ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ತೀರ್ಮಾನ
ನವದೆಹಲಿ: ಮೋದಿ ನೇತೃತ್ವದ ಕೇಂದ್ರ ಸರ್ಕಾರ ಬಜೆಟ್ ಮಂಡಿಸಿದ ಬೆನ್ನಲ್ಲೇ ಎನ್’ಡಿಎನ ಪ್ರಮುಖ ಮಿತ್ರಪಕ್ಷವಾಗಿರುವ ತೆಲುಗು ದೇಶಂ ಪಕ್ಷ (ಟಿಡಿಪಿ)ಯು ಬಿಜೆಪಿ ವಿರುದ್ಧ ‘ಸಮರ’ ಸಾರುವುದಾಗಿ ಹೇಳಿದೆ.
ನಿನ್ನೆ ಮಂಡಿಸಲಾದ ಕೇಂದ್ರ ಬಜೆಟ್’ನಿಂದ ಬಹಳ ನಿರಾಶೆಯಾಗಿದ್ದು, ಆಂಧ್ರ ಪ್ರದೇಶದ ಆಶೋತ್ತರಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆಯೆಂದು ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ.
ನಾವು ಬಿಜೆಪಿ ವಿರುದ್ಧ ಸಮರ ಸಾರುತ್ತೇವೆ. ನಮ್ಮ ಮುಂದೆ ಕೇವಲ ಮೂರು ಆಯ್ಕೆಗಳಿವೆ. ಕಾದು ನೋಡುವುದು, ಪಕ್ಷದ ಸಂಸದರು ರಾಜಿನಾಮೆ ನೀಡುವುದು ಅಥವಾ ಮೈತ್ರಿಕೂಟದಿಂದ ಹೊರಬರುವುದು. ಭಾನುವಾರ ನಡೆಯಲಿರುವ ಸಭೆಯಲ್ಲಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು, ಎಂದು ಟಿಡಿಪಿ ಸಂಸದ ಟಿ,ಡಿ. ವೆಂಕಟೇಶ್ ಹೇಳಿದ್ದಾರೆ.
ಈ ಮುಂಚೆಯು ಸ್ಥಳೀಯ ಬಿಜೆಪಿ ನಾಯಕರ ವರ್ತನೆ ಬಗ್ಗೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅಸಮಾಧಾನ ವ್ಯಕ್ತಪಡಿಸಿದ್ದರು.
ನಾವು ಮೈತ್ರಿಧರ್ಮವನ್ನು ಪಾಲಿಸುತ್ತಿದ್ದೇವೆ, ಆದರೆ ಬಿಜೆಪಿ ನಾಯಕರು ಮಿತಿಯನ್ನು ಮೀರುತ್ತಿದ್ದಾರೆ. ಎಂದು ನಾಯ್ಡು ಆಕ್ರೋಶ ವ್ಯಕ್ತಪಡಿಸಿದ್ದರು.