ಜಮೀರ್ ಅಹ್ಮದ್ ಗೆ ಸವಾಲ್
ನರಸಿಂಹರಾಜ ಕ್ಷೇತ್ರಕ್ಕೆ ಬಂದು ಶಕ್ತಿ ಪ್ರದರ್ಶನ ಮಾಡುವುದಾಗಿ ಹೇಳಿದ್ದ ಸಚಿವ ಜಮೀರ್ ಅಹ್ಮದ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ತನ್ವೀರ್ಸೇಠ್, ಶಕ್ತಿ ಪ್ರದರ್ಶ ನವೆಂದರೆ ಜನರನ್ನು ಸೇರಿಸಿ ತೋರಿಸುವುದಲ್ಲ, ಜನರ ಮನಸ್ಸನ್ನು ಗೆದ್ದು ತೋರಿಸುವುದು ಎಂದು ತಿರುಗೇಟು ನೀಡಿದ್ದಾರೆ
ಮೈಸೂರು: ನರಸಿಂಹರಾಜ ಕ್ಷೇತ್ರಕ್ಕೆ ಬಂದು ಶಕ್ತಿ ಪ್ರದರ್ಶನ ಮಾಡುವುದಾಗಿ ಹೇಳಿದ್ದ ಸಚಿವ ಜಮೀರ್ ಅಹ್ಮದ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಶಾಸಕ ತನ್ವೀರ್ಸೇಠ್, ಶಕ್ತಿ ಪ್ರದರ್ಶ ನವೆಂದರೆ ಜನರನ್ನು ಸೇರಿಸಿ ತೋರಿಸುವುದಲ್ಲ, ಜನರ ಮನಸ್ಸನ್ನು ಗೆದ್ದು ತೋರಿಸುವುದು ಎಂದು ತಿರುಗೇಟು ನೀಡಿದ್ದಾರೆ. ನಗರದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಮೀರ್ ಅಹ್ಮದ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ನಮ್ಮ ಜನಾಂಗ ಒಪ್ಪಿಕೊಳ್ಳುವ ನಾಯಕತ್ವ ಅವನಲ್ಲಿ ಇಲ್ಲ. ಕಳೆದ ಚುನಾವಣೆಯಲ್ಲಿ ಕೆಟ್ಟ ಹುಳುವಾಗಿ ಬೆಳೆದಿರುವವರ ಪರವಾಗಿ ಜಮೀರ್ ಕೆಲಸ ಮಾಡಿದ. ನಾನು ಮಾಧ್ಯಮಗಳ ಮುಂದೆ ಸಂಘರ್ಷಕ್ಕೆ ಇಳಿಯುವುದಿಲ್ಲ. ರಾಜಕೀಯವಾಗಿ ಅಥವಾ ವೈಯಕ್ತಿಕವಾಗಿ ಸಂಘರ್ಷಕ್ಕೆ ಸಿದ್ಧ ಎಂದು ಸವಾಲು ಹಾಕಿದರು. ಜಮೀರ್ ನೀಡಿರುವ ಸವಾಲನ್ನು ಸ್ವೀಕರಿಸುವುದೂ ಇಲ್ಲ, ತಳ್ಳಿ ಹಾಕುವುದೂ ಇಲ್ಲ. ಕ್ಷೇತ್ರಕ್ಕೆ ಬರೋದು ಬಿಡೋದು ಅವರಿಗೆ ಬಿಟ್ಟದ್ದು.
ಈ ಬಗ್ಗೆ ವರಿಷ್ಠರ ಗಮನಕ್ಕೆ ತಂದಿದ್ದೇನೆ. ನಿನ್ನೆ ಮೊನ್ನೆ ಪಕ್ಷಕ್ಕೆ ಬಂದವರಿಗೆ ಕಾಂಗ್ರೆಸ್ ತತ್ವ ಸಿದ್ಧಾಂತ ಗೊತ್ತಿರೋಲ್ಲ. ಇದಕ್ಕಾಗಿ ಅವರನ್ನು ವಿರೋಧಿಸಿದ್ದೇನೆ ಎಂದರು. ನಾವು ಸಂಘಟಿತರಾಗಿ ಸ್ಥಾನ ಕೇಳುತ್ತಿಲ್ಲ ಎಂಬುದು ನನ್ನ ಅಭಿಪ್ರಾಯ. ಪಕ್ಷಕ್ಕೆ ಮುಜುಗರ ತರುವಂತೆ ಮಾತನಾಡ ಬೇಡಿ ಎಂದು ಹೈಕಮಾಂಡಿನಿಂದ ಸೂಚನೆ ಬಂದಿದ್ದು ಅದನ್ನು ಪಾಲಿಸುತ್ತಿದ್ದೇನೆ ಎಂದರು.