ಕರ್ನಾಟಕ ಬಳಿಕ ಆಂಧ್ರ ಪ್ರವಾಹ: ಮಾಜಿ ಸಿಎಂ ನಾಯ್ಡು ಮನೆ ಜಲಾವೃತ!
ಪುಲಿಚಿಂತಲಾ ಅಣೆಕಟ್ಟಿನಿಂದ ಯಥೇಚ್ಛವಾಗಿ ನೀರು ಬಿಟ್ಟ ಪರಿಣಾಮ| ಕರ್ನಾಟಕ ಬಳಿಕ ಆಂಧ್ರ ಪ್ರವಾಹ: ಮಾಜಿ ಸಿಎಂ ನಾಯ್ಡು ಮನೆ ಜಲಾವೃತ|
ಹೈದರಾಬಾದ್[ಆ.17]: ಕರ್ನಾಟಕದಲ್ಲಿ ಉಂಟಾದ ಪ್ರವಾಹದಿಂದಾಗಿ ಪುಲಿಚಿಂತಲಾ ಅಣೆಕಟ್ಟಿನಿಂದ ಯಥೇಚ್ಛವಾಗಿ ನೀರು ಬಿಟ್ಟಪರಿಣಾಮ ಆಂಧ್ರಪ್ರದೇಶದ ಕೃಷ್ಣಾ ನದಿ ಪಾತ್ರದಲ್ಲೂ ಪ್ರವಾಹ ಉಂಟಾಗಿದೆ. ಇದರಿಂದ ಅಮರಾವತಿಯ ಉಂಡವಳ್ಳಿಯಲ್ಲಿರುವ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರ ಮನೆ ಆವರಣಕ್ಕೆ ನೀರು ನುಗ್ಗಿದೆ.
ಮಳೆಯ ಪ್ರಮಾಣ ಅಧಿಕಗೊಂಡು ಒಳಹರಿವು ಹೆಚ್ಚಾದ ಕಾರಣ ನದಿಗೆ ನೀರು ಬಿಡಲಾಗುತ್ತಿದೆ. ಇದರಿಂದ ಕೃಷ್ಣಾ ಜಿಲ್ಲೆಯ ನದಿ ಪಾತ್ರಗಳ ಗ್ರಾಮಗಳಿಗೆ ನೀರು ನುಗ್ಗುತ್ತಿದೆ.
ಉಂಡವಳ್ಳಿಯ ನದಿ ದಡದ ಮೇಲಿರುವ ನಾಯ್ಡು ಮನೆಗೆ ನೀರು ನುಗ್ಗಿದೆ. ಕೆಳ ಅಂತಸ್ತಿನಲ್ಲಿರುವ ಎಲ್ಲಾ ವಸ್ತುಗಳನ್ನೂ ಮೇಲಿನ ಅಂತಸ್ತಿಗೆ ವರ್ಗಾಯಿಸಲಾಗುತ್ತಿದೆ. ಮನೆಗೆ ನೀರು ನುಗ್ಗದಂತೆ ಮರಳು ಚೀಲಗಳನ್ನು ಬಳಸಿ ತಡೆಗೋಡೆ ನಿರ್ಮಿಸಲಾಗುತ್ತಿದೆ.