ಹೆಣ್ಮಕ್ಕಳು ಮುಂದೆ ಕುಳಿತಿದ್ದಕ್ಕೆ ಭಾಷಣ ನಿಲ್ಲಿಸಿದ ಗುರು(?)!
ಹೆಣ್ಮಕ್ಳು ಮುಂದೆ ಕುಳಿತರೆ ಭಾಷಣ ಮಾಡಲ್ವಂತೆ ಈ ಸ್ವಾಮಿ| ಮುಂದಿನ ಸಾಲಿನಲ್ಲಿ ಮಹಿಳೆಯರನ್ನು ಕಂಡು ಭಾಷಣ ಮೊಟಕುಗೊಳಿಸಿದ ಅಧ್ಯಾತ್ಮ ಗರು| ಸ್ವಾಮಿ ಜ್ಞಾನವತ್ಸಲ ನಡೆಗೆ ಮಹಿಳಾ ವೈದ್ಯರಿಂದ ಪ್ರತಿಭಟನೆ| ರಾಜಸ್ಥಾನದ ಬಿರ್ಲಾ ಆಡಿಟೋರಿಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ ಮೆಡಿಕಾನ್-2019| ಮಹಿಳೆಯರನ್ನು ಕಂಡು ಭಾಷಣ ನಿಲ್ಲಿಸಿ ಹೊರ ನಡೆದ ಜ್ಞಾನವತ್ಸಲ|
ಜೈಪುರ್(ಜು.04): 'ಯತ್ರ ನಾರೆಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಹಃ..' ಇದೊಂದು ಸಂಸ್ಕೃತ ಶ್ಲೋಕ ಸಾಕು ಭಾರತೀಯ ಸಮಾಜದಲ್ಲಿ ಹೆಣ್ಣಿಗೆ ಅದೆಂತಾ ಗೌರವವಿದೆ ಎಂಬುದನ್ನು ತಿಳಿದಿಕೊಳ್ಳಲು.
ತಮ್ಮನ್ನು ಸಲುಹುತ್ತಿರುವ ನೆಲಕ್ಕೆ ಭಾರತಾಂಬೆ ಎಂದು ಹೆಸರಿಟ್ಟ ಭಾರತೀಯರು, ಶತಶತಮಾನಗಳಿಂದ ಹೆಣ್ಣಿನ ಗೌರವ ಕಾಪಾಡಿಕೊಂಡು ಬಂದಿದ್ದಾರೆ.
ಆದರೆ ಭೂಮಿಯ ಮೇಲೆ ಜೀವ ವಿಕಾಸದ ಪ್ರಕ್ರಿಯೆಗೆ ಹೆಣ್ಣಿನ ಮಹತ್ವ ಅರಿಯದ ಕೆಲವು ತುಚ್ಛ ಮನಸ್ಸುಗಳು ಮಾತ್ರ ಇಂದಿಗೂ ಹೆಣ್ಣನ್ನು ಕೀಳಾಗಿ ಕಾಣುವ ಮೂಲಕ ಕೇವಲ ಹೆಣ್ಣಿಗಷ್ಟೇ ಅಲ್ಲದೇ ತಮ್ಮನ್ನು ಹೆತ್ತ ತಾಯಿಗೂ ಅವಮರ್ಯಾದೆ ಮಾಡುತ್ತಿದ್ದಾರೆ.
ಅದರಂತೆ ಅಧ್ಯಾತ್ಮ ಗರುವೋರ್ವರು ತಮ್ಮ ಭಾಷಣದ ಸಮಯದಲ್ಲಿ ಮುಂದಿನ ಸಾಲಿನಲ್ಲಿ ಹೆಣ್ಣುಮಕ್ಕಳು ಕುಳಿತ ಕಾರಣ, ಭಾಷಣವನ್ನು ಮೊಟಕುಗೊಳಿಸಿರುವ ಘಟನೆ ರಾಜಸ್ಥಾನದ ಜೈಪುರದಲ್ಲಿ ನಡೆದಿದೆ.
ಜೈಪುರದ ಬಿರ್ಲಾ ಆಡಿಟೋರಯಂನಲ್ಲಿ ಹಮ್ಮಿಕೊಳ್ಳಲಾಗಿದ್ದ ರಾಜ ಮೆಡಿಕಾನ್-2019 ಸಮಾರಂಭದಲ್ಲಿ, ಮುಂದಿನ ಸಾಲಿನಲ್ಲಿ ಮಹಿಳೆಯರು ಕುಳಿತ ಕಾರಣ ಪ್ರಸಿದ್ಧ ಅಧ್ಯಾತ್ಮ ಗುರು ಸ್ವಾಮಿ ಜ್ಞಾನವತ್ಸಲ ತಮ್ಮ ಭಾಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿ ಸ್ಥಳದಿಂದ ಹೊರ ನಡೆದಿದ್ದಾರೆ.
ಜ್ಞಾನವತ್ಸಲ ಅವರ ನಡೆ ಖಂಡಿಸಿ ರಾಜಸ್ಥಾನ ವೈದ್ಯ ಸಂಘದ ಮಹಿಳಾ ವೈದ್ಯರು ಸ್ಥಳದಲ್ಲೇ ಪ್ರತಿಭಟನೆ ನಡೆಸಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.