ದುಬೈ ಕನ್ನಡಿಗರು ಆಯೋಜಿಸಿದ್ದ 61 ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ದುಬೈ (ನ.11): ದುಬೈನಲ್ಲಿಂದು ಅದ್ದೂರಿ ಕನ್ನಡ ರಾಜ್ಯೋತ್ಸವ ಅಚರಣೆ ಮಾಡಲಾಯಿತು. ಕವಿ ನಿಸಾರ್ ಅಹಮದ್ ಅವರನ್ನು ಪೂರ್ಣ ಕುಂಭ ಸ್ವಾಗತ ನೀಡಿ, ಮೆರವಣಿಗೆಯಲ್ಲಿ ಕಾರ್ಯಕ್ರಮಕ್ಕೆ ಕರೆತರಲಾಯಿತು. ದುಬೈ ಕನ್ನಡಿಗರು ಆಯೋಜಿಸಿದ್ದ 61ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ನಿತ್ಯೋತ್ಸವ ಕವಿ ಕೆ.ಎಸ್. ನಿಸಾರ್ ಅಹಮದ್ ಅವರಿಗೆ ಕನ್ನಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿಸಾರ್ ಅಹಮದ್ ಅವರು, ಕನ್ನಡ ತಾಯಿಯ ಕೃಪೆಯಿಂದ ನಾವೆಲ್ಲಾ ಇಲ್ಲಿದ್ದೇವೆ. ಅವಳ ಸೇವೆ ಮಾಡುವುದೇ ನಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು. ದುಬೈ ಕನ್ನಡಿಗರ ಅಭಿಮಾನದಿಂದ ಎದೆ ತುಂಬಿ ಬಂದಿದೆ ಎಂದು ಹೇಳಿದರು.ಕನ್ನಡ ಸಂಘದಿಂದ ಕರ್ನಾಟಕದಿಂದ ಕಲಾವಿದರನ್ನು ಕರೆಯಿಸಿ ಮನರನಂಜನೆ ಕಾರ್ಯಕ್ರಮ ನೆರವೇರಿಸಲಾಯಿತು.

ದುಬೈ ಕನ್ನಡ ಸಂಘದ ಹಾಲಿ ಅಧ್ಯಕ್ಷೆ ಉಮಾದೇವಿ ವಿದ್ಯಾಧರ್ ಮಾತನಾಡಿ, ದುಬೈನಲ್ಲಿ ಇದ್ದುಕೊಂಡು ಕನ್ನಡ ಕಟ್ಟುವುದು ಕಷ್ಟದ ಕೆಲಸ. ಆದರೂ ಎಲ್ಲರೂ ಸೇರಿಕೊಂಡು ಕನ್ನಡ ಉಳಿಸುವ ಪ್ರಯತ್ನ ನಡೆಸುತ್ತಿದ್ದೇವೆ. ಕರ್ನಾಟಕ ಸರ್ಕಾರ ರಾಜ್ಯದಿಂದ ಕಲಾವಿದರನ್ನು ಕಳುಹಿಸಿಕೊಡಲು ಸಹಕಾರ ನೀಡಿದರೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಹೇಳಿದರು.

ವರದಿ: ಶಂಕರ್ ಪಾಕೋಜಿ, ಸುವರ್ಣ ನ್ಯೂಸ್, ದುಬೈ