ಆಧಾರ್ ಸಿಂಧುತ್ವದ ಅರ್ಜಿ : ತೀರ್ಪು ಕಾಯ್ದಿರಿಸಿದ ಸುಪ್ರೀಂ
ಆಧಾರ್ ಯೋಜನೆಯ ಸಾಂವಿಧಾನಿಕ ಸಿಂಧುತ್ವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಗುರುವಾರ ಪೂರ್ಣಗೊಂಡಿದ್ದು, ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ.
ನವದೆಹಲಿ: ಆಧಾರ್ ಯೋಜನೆಯ ಸಾಂವಿಧಾನಿಕ ಸಿಂಧುತ್ವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ಗುರುವಾರ ಪೂರ್ಣಗೊಂಡಿದ್ದು, ತೀರ್ಪನ್ನು ಸುಪ್ರೀಂ ಕೋರ್ಟ್ ಕಾಯ್ದಿರಿಸಿದೆ. ಮುಖ್ಯ ನ್ಯಾಯಾಧೀಶ ನ್ಯಾ| ದೀಪಕ್ ಮಿಶ್ರಾ, ನ್ಯಾ. ಎ.ಕೆ. ಸಿಕ್ರಿ, ನ್ಯಾ. ಎ.ಎಂ. ಕಾನ್ವಿಲ್ಕರ್, ನ್ಯಾ. ಡಿ.ವೈ. ಚಂದ್ರ ಚೂಡ ಹಾಗೂ ನ್ಯಾ. ಅಶೋಕ ಭೂಷಣ್ ಅವರನ್ನು ಒಳಗೊಂಡ ಸಾಂವಿಧಾನಿಕ ಪೀಠವು, ಇದರ ವಿಚಾರಣೆಯನ್ನು ಕಳೆದ 4 ತಿಂಗಳ ಅವಧಿಯ 38 ಕಲಾಪಗಳಲ್ಲಿ ಸತತವಾಗಿ ನಡೆಸಿತು.
ಗುರುವಾರ ಈ ಕುರಿತ ತೀರ್ಪನ್ನು ಕಾಯ್ದಿರಿಸಿತು. ತೀರ್ಪು ಯಾವಾಗ ಬರುತ್ತದೆ ಎಂಬ ದಿನಾಂಕವನ್ನು ನ್ಯಾಯಾಲಯ ಇನ್ನಷ್ಟೇ ಪ್ರಕಟಿಸಬೇಕಿದೆ. ಸರ್ಕಾರದ ಪರ ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ ಅವರು ವಾದ ಮಂಡಿಸಿದರೆ, ಅರ್ಜಿದಾರರ ಪರ ಕಪಿಲ್ ಸಿಬಲ್, ಪಿ. ಚಿದಂಬರಂ, ರಾಕೇಶ್ ದ್ವಿವೇದಿ, ಶ್ಯಾಮ್ ದಿವಾನ್, ಅರವಿಂದ ದಾತಾರ್ ಅವರು ವಾದ ಮಂಡಿಸಿದರು. ಸರ್ಕಾರವು ವಿವಿಧ ಯೋಜನೆಗಳಿಗೆ ಆಧಾರ್ ಸಂಯೋಜನೆ ಸಮರ್ಥಿಸಿಕೊಂಡರೆ, ಅರ್ಜಿದಾರರು ವಿರೋಧಿಸಿದರು. \
ಮೂಲ ಅರ್ಜಿದಾರ ಕನ್ನಡಿಗ: ಅಂದಹಾಗೆ ಈ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಾಧೀಶ ನ್ಯಾ| ಕೆ.ಎಸ್. ಪುಟ್ಟಸ್ವಾಮಿ ಮೂಲ ಅರ್ಜಿದಾರರು. ಆಧಾರ್ ಕಡ್ಡಾಯದಿಂದ ಖಾಸಗಿತನಕ್ಕೆ ಧಕ್ಕೆ ಬರುತ್ತದೆ ಹಾಗೂ ಭದ್ರತೆಗೆ ಇದು ಅಪಾಯಕರ ಎಂಬುದು ಅವರ ವಾದ. ಆಧಾರ್ ಯೋಜನೆಗೆ ಸಾಂವಿಧಾನಿಕ ಸ್ವರೂಪ ನಿಟ್ಟಿನಲ್ಲಿ ಸರ್ಕಾರವು ೨೦೧೬ನೇ ಸಾಲಿನಲ್ಲೇ ಕಾಯ್ದೆ ಪಾಸು ಮಾಡಿತ್ತು.