ಸುಪ್ರೀಂ ಕೋರ್ಟ್ ಈವರೆಗೆ ಸಲ್ಲಿಸಲಾದ 49 ಮೇಲ್ಮನವಿದಾರರ ವಾದ ಆಲಿಸಿ 2019ರ ಜನವರಿ 22ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಆದರೆ ಈ ಹಿಂದೆ ನೀಡಿರುವ ತನ್ನ ತೀರ್ಪಿನ ಮೇಲೆ ಯಾವುದೇ ತಡೆ ಇರುವುದಿಲ್ಲ ಎಂಬುವುದನ್ನೂ ಸ್ಪಷ್ಟಪಡಿಸಿದೆ.

ನವದೆಹಲಿ(ನ.13): ಶಬರಿಮಲೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ ತನ್ನ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂಕೋರ್ಟ್‌ ಜನವರಿ 22ಕ್ಕೆ ಮುಂದೂಡಿದೆ. 

Add Asianetnews Kannada as a Preferred SourcegooglePreferred

ನ.16ರ ಸಂಜೆ 5 ಗಂಟೆಯಿಂದ ವಾರ್ಷಿಕ ಯಾತ್ರೆಗಾಗಿ ಅಯ್ಯಪ್ಪ ದೇಗುಲದ ಬಾಗಿಲು ತೆರೆಯಲಿದ್ದು, ಈ ಅವಧಿಯಲ್ಲಿ ದೇವರ ದರ್ಶನ ಪಡೆಯಲು 10-50ರ ವಯೋಮಾನದ 550ಕ್ಕೂ ಹೆಚ್ಚು ಮಹಿಳೆಯರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿದ್ದಾರೆ. ಹೀಗಾಗಿ ಮೇಲ್ಮನವಿ ಅರ್ಜಿಗಳ ಕುರಿತು ಸುಪ್ರೀಂಕೋರ್ಟ್‌ ಏನು ತೀರ್ಪು ನೀಡುತ್ತದೆ ಎಂಬುವುದು ಭಾರೀ ಕುತೂಹಲ ಮೂಡಿಸಿತ್ತು. ಆದರೀಗ ಸುಪ್ರೀಂ ಕೋರ್ಟ್ ಈವರೆಗೆ ಸಲ್ಲಿಸಲಾದ 49 ಮೇಲ್ಮನವಿದಾರರ ವಾದ ಆಲಿಸಿ 2019ರ ಜನವರಿ 22ರಂದು ತೀರ್ಪು ಪ್ರಕಟಿಸುವುದಾಗಿ ತಿಳಿಸಿದೆ. ಆದರೆ ಈ ಹಿಂದೆ ನೀಡಿರುವ ತನ್ನ ತೀರ್ಪಿನ ಮೇಲೆ ಯಾವುದೇ ತಡೆ ಇರುವುದಿಲ್ಲ ಎಂಬುವುದನ್ನೂ ಸ್ಪಷ್ಟಪಡಿಸಿದೆ.

ಸುಪ್ರೀಂಕೋರ್ಟ್‌ನ ಆದೇಶವನ್ನು, ಕೇರಳದ ಶಬರಿಮಲೆ ದೇಗುಲ ನಿರ್ವಹಿಸುವ ತಿರುವಾಂಕೂರು ದೇಗುಲ ಮಂಡಳಿಯಾಗಲೀ, ಕೇರಳ ಸರ್ಕಾರವಾಗಲಿ ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿಲ್ಲ. ಆದರೆ ಇತರೆ ಹಲವು ಹಿಂದೂ ಪರ ಸಂಘಟನೆಗಳು ಮತ್ತು ಅಯ್ಯಪ್ಪ ಭಕ್ತ ಸಂಘಟನೆಗಳು 15ಕ್ಕೂ ಹೆಚ್ಚು ಮೇಲ್ಮನವಿ ಅರ್ಜಿ ಸಲ್ಲಿಸಿದ್ದವು. 

ಸದ್ಯ ಸುಪ್ರಿಂ ಕೋರ್ಟ್ ವಿಚಾರಣೆಯನ್ನು ಮುಂದೂಡಿಯಾದರೂ ತನ್ನ ಹಿಂದಿನ ಆದೇಶವನ್ನು ತಡೆ ಹಿಡಿದಿಲ್ಲ. ಹೀಗಿರುವಾಗ ವಾರ್ಷಿಕ ಯಾತ್ರೆ ವೇಳೆ ದೇವರ ದರ್ಶನ ಪಡೆಯಲು ನಿರ್ಧರಿಸಿದ್ದ ಮಹಿಳಾ ಭಕ್ತರಿಗೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯಲು ಕಾನೂನಾತ್ಮಕ ತಡೆ ಇರುವುದಿಲ್ಲ ಎಂಬುವುದು ಸ್ಪಷ್ಟ. ಆದರೆ ಮಹಿಳೆಯರು ಶಬರಿಮಲೆಗೆ ತೆರಳಿದರೆ ವಾರ್ಷಿಕ ಯಾತ್ರೆ ವೇಳೆ ಭಕ್ತರು ಮತ್ತು ಮಹಿಳೆಯರ ನಡುವೆ ದೊಡ್ಡ ಸಂಘರ್ಷ ನೆಡೆಯುವುದರಲ್ಲಿ ಅನುಮಾನವಿಲ್ಲ ಎನ್ನಬಹುದು.