ರಾಣಿ ಪಾತ್ರದಲ್ಲಿ ಸನ್ನಿ : ಎದುರಾಯ್ತು ಸಂಕಷ್ಟ
ವೀರಮಾದೇವಿ ಸಿನಿಮಾದಿಂದ ನೀಲಿ ಚಿತ್ರ ತಾರೆ ನಟಿ ಸನ್ನಿ ಲಿಯೋನ್ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರು, ಹುಬ್ಬಳ್ಳಿ ಮತ್ತು ಕೊಪ್ಪಳ ನಗರಗಳಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ.
ಬೆಂಗಳೂರು : ತಮಿಳು ಭಾಷೆಯಲ್ಲಿ ನಿರ್ಮಿಸುತ್ತಿರುವ ‘ವೀರಮಾದೇವಿ’ ಸಿನಿಮಾದಿಂದ ನೀಲಿ ಚಿತ್ರ ತಾರೆ ನಟಿ ಸನ್ನಿ ಲಿಯೋನ್ ಕೈಬಿಡುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬೆಂಗಳೂರು, ಹುಬ್ಬಳ್ಳಿ ಮತ್ತು ಕೊಪ್ಪಳ ನಗರಗಳಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ್ದಾರೆ. ಹುಬ್ಬಳ್ಳಿಯಲ್ಲಿ ನಡೆದ ಪ್ರತಿಭಟನೆ ವೇಳೆ ಪ್ರತಾಪ್ ಎಂಬ ಕರವೇ ಕಾರ್ಯಕರ್ತನೊಬ್ಬ ಬ್ಲೇಡಿನಿಂದ ಕೈ ಕುಯ್ದುಕೊಂಡು ರಕ್ತ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿರುವ ಘಟನೆ ನಡೆದಿದೆ.
ಬೆಂಗಳೂರಿನ ಪುರಭವನದ ಮುಂದೆ ಪ್ರತಿಭಟನೆ ನಡೆಸಿದ ಕರವೇ ಕಾರ್ಯಕರ್ತರು ‘ವೀರಮಾದೇವಿ ಸಿನಿಮಾದಲ್ಲಿ ಸನ್ನಿ ಲಿಯೋನ್ ನಟಿಸುವುದರಿಂದ ದೇಶದ ಸಂಸ್ಕೃತಿ, ಸಂಪ್ರದಾಯಕ್ಕೆ ಅಪಮಾನವಾಗುತ್ತದೆ. ದಕ್ಷಿಣ ಭಾರತವನ್ನು ಆಳಿದ ರಾಷ್ಟ್ರಕೂಟ ವಂಶದ ಮಹಾರಾಣಿ ವೀರಮಾದೇವಿ ಐತಿಹಾಸಿಕ ಮಹಿಳೆ. ಅಂತಹ ಮಹಿಳೆಯ ಪಾತ್ರವನ್ನು ಸನ್ನಿ ಲಿಯೋನ್ ಮಾಡುವುದರಿಂದ ಹಿಂದೂ ಸಂಪ್ರದಾಯಕ್ಕೆ ಅಪಚಾರವಾಗುತ್ತದೆ’ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಹುಬ್ಬಳ್ಳಿಯ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಸನ್ನಿ ಲಿಯೋನ್ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಪುನೀತ್ಕುಮಾರ ರೆಡ್ಡಿ ಎಂಬ ಕಾರ್ಯಕರ್ತ ಬ್ಲೇಡ್ನಿಂದ ಕೈಯನ್ನು ಹರಿದುಕೊಂಡು ರಕ್ತ ಸುರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದು ಸ್ಥಳದಲ್ಲಿದ್ದ ಇತರ ಕಾರ್ಯಕರ್ತರು ಆತನನ್ನು ರಕ್ಷಿಸಿದ್ದಾರೆ.